ಬೆಂಗಳೂರು: ರಾಜ್ಯ ಸರ್ಕಾರವು ಕಂದಾಯ ಇಲಾಖೆಯ ‘ಭೂಮಿ’ ತಂತ್ರಾಂಶದಲ್ಲಿ 2026-27ನೇ ಸಾಲಿನ ಹೊಸ ಕಂದಾಯ ವರ್ಷದ ಬದಲಾವಣೆ ಪ್ರಕ್ರಿಯೆಯನ್ನು ಜಾರಿಗೆ ತಂದಿದ್ದು, ಈ ನಿಟ್ಟಿನಲ್ಲಿ ಕಂದಾಯ ಆಯುಕ್ತಾಲಯವು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಾದ ನಿರ್ದೇಶನಗಳನ್ನು ನೀಡಿದೆ.
ಜುಲೈ 01, 2026 ರಿಂದ 2026-27ನೇ ಸಾಲಿನ ಹೊಸ ಕಂದಾಯ ವರ್ಷ ಅಧಿಕೃತವಾಗಿ ಪ್ರಾರಂಭವಾಗಿದೆ. ವಹಿವಾಟು ಸಂಖ್ಯೆಗಳ ಮರುಹೊಂದಾಣಿಕೆ: ತಂತ್ರಾಂಶದಲ್ಲಿನ ‘Transaction Number’ ಮತ್ತು ‘Mutation Number’ಗಳನ್ನು ಕ್ರಮವಾಗಿ 4 ಮತ್ತು 1 ರಿಂದ ಹೊಸದಾಗಿ ಮರುಪ್ರಾರಂಭಿಸಲು ಎಲ್ಲಾ ತಾಲ್ಲೂಕುಗಳಲ್ಲಿ ‘Revenue Year Path Execution’ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕೆಂದು ಸೂಚಿಸಲಾಗಿದೆ.ಸರ್ಕಾರಿ ಭೂಮಿಯ ಮಾಲೀಕತ್ವ ಬದಲಾವಣೆಗೆ ಸಂಬಂಧಿಸಿದ ಪ್ರಕರಣಗಳು ಜಿಲ್ಲಾಧಿಕಾರಿಗಳ ಲಾಗಿನ್ನಲ್ಲಿ ಅನುಮೋದನೆಗಾಗಿ ಬಾಕಿ ಇವೆಯೇ ಎಂಬುದನ್ನು ಪರಿಶೀಲಿಸಲು ಹೊಸದಾಗಿ ‘Validation’ ಸೌಲಭ್ಯವನ್ನು ಅಳವಡಿಸಲಾಗಿದೆ.
ಅಧಿಕಾರಿಗಳಿಗೆ ನೀಡಿರುವ ಸೂಚನೆಗಳು
ಎಲ್ಲಾ ತಾಲ್ಲೂಕು ಮಟ್ಟದ ಅಧಿಕಾರಿಗಳು (ಆಪರೇಟರ್, ಆರ್.ಆರ್. ಶಿರಸ್ತೇದಾರ ಮತ್ತು ತಹಶೀಲ್ದಾರರು) ತಮ್ಮ ಲಾಗಿನ್ನಲ್ಲಿ ಬಾಕಿ ಇರುವ ಎಲ್ಲಾ ವಹಿವಾಟುಗಳನ್ನು ಜೂನ್ 30, 2026ರ ದಿನಾಂತ್ಯದೊಳಗೆ ಪೂರ್ಣಗೊಳಿಸುವುದು ಕಡ್ಡಾಯವಾಗಿತ್ತು.ಹೊಸ ಕಂದಾಯ ವರ್ಷದ ವಹಿವಾಟುಗಳು ಸುಗಮವಾಗಿ ನಡೆಯುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ನಿಗದಿತ ಪರೀಕ್ಷಾ ಕ್ರಮಗಳನ್ನು ಅನುಸರಿಸಬೇಕೆಂದು ಆದೇಶಿಸಲಾಗಿದೆ.ಈ ಸಂಪೂರ್ಣ ಪ್ರಕ್ರಿಯೆಯಲ್ಲಿ ಯಾವುದೇ ವಿಳಂಬ ಅಥವಾ ತಾಂತ್ರಿಕ ಲೋಪಗಳು ಸಂಭವಿಸಿದಲ್ಲಿ, ಆಯಾ ತಾಲ್ಲೂಕಿನ ತಹಶೀಲ್ದಾರರೇ ನೇರ ಹೊಣೆಗಾರರಾಗಿರುತ್ತಾರೆ ಎಂದು ಆಯುಕ್ತಾಲಯವು ಸ್ಪಷ್ಟಪಡಿಸಿದೆ.



