ಬೆಂಗಳೂರು: ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದು, ಸಾರಿಗೆ, ಶಿಕ್ಷಣ, ತಂತ್ರಜ್ಞಾನ, ಕೃಷಿ ಹಾಗೂ ಪರಿಸರ ಸೇರಿದಂತೆ ವಿವಿಧ ಕ್ಷೇತ್ರಗಳ ಸಮಗ್ರ ಪ್ರಗತಿಗೆ ಪೂರಕವಾದ ಹಲವು ಪ್ರಮುಖ ನಿರ್ಧಾರಗಳಿಗೆ ಅನುಮೋದನೆ ನೀಡಲಾಗಿದೆ.
ಸಚಿವ ಸಂಪುಟ ಕೈಗೊಂಡ ಪ್ರಮುಖ ತೀರ್ಮಾನಗಳ ವಿವರ ಹೀಗಿದೆ:
ಶಕ್ತಿ ಸ್ಮಾರ್ಟ್ ಕಾರ್ಡ್ ಯೋಜನೆ: ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಮಹಿಳೆಯರ ಉಚಿತ ಪ್ರಯಾಣದ 'ಶಕ್ತಿ' ಯೋಜನೆಗೆ ಮತ್ತಷ್ಟು ಪಾರದರ್ಶಕತೆ ತರಲು ಸುಮಾರು ₹237 ಕೋಟಿ ಅಂದಾಜು ವೆಚ್ಚದಲ್ಲಿ 'ಶಕ್ತಿ ಸ್ಮಾರ್ಟ್ ಕಾರ್ಡ್ ಯೋಜನೆ' ಜಾರಿಗೆ ತರಲು ಸಂಪುಟ ಅನುಮೋದನೆ ನೀಡಿದೆ.
ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ: ಯುವಜನರಲ್ಲಿ ನಾಯಕತ್ವ ಗುಣ, ಜವಾಬ್ದಾರಿ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸುವ ಸದುದ್ದೇಶದಿಂದ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆಗಳನ್ನು ನಡೆಸಲು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಮುಖ್ಯಮಂತ್ರಿ ನೇಗಿಲ ಯೋಗಿ ಯೋಜನೆ: ಆಧುನಿಕ ಮತ್ತು ಯಾಂತ್ರೀಕೃತ ಕೃಷಿ ಚಟುವಟಿಕೆಗಳನ್ನು ಉತ್ತೇಜಿಸಲು ₹152.28 ಕೋಟಿ ಅನುದಾನ ಮೀಸಲಿಡಲಾಗಿದ್ದು, ರೈತರಿಗೆ ನೇರ ಪ್ರೋತ್ಸಾಹಧನ ಒದಗಿಸಲು ಒಪ್ಪಿಗೆ ಸೂಚಿಸಲಾಗಿದೆ.
ನೂತನ ಜವಳಿ ಹಾಗೂ ಸಿದ್ಧ ಉಡುಪು ನೀತಿ (2026–2031): ಜವಳಿ ಮತ್ತು ಸಿದ್ಧ ಉಡುಪು ಕ್ಷೇತ್ರಕ್ಕೆ ಭಾರಿ ಉತ್ತೇಜನ ನೀಡುವ ಮೂಲಕ ಹೂಡಿಕೆಗಳನ್ನು ಆಕರ್ಷಿಸಲು, ಆರ್ಥಿಕ ಸಬಲೀಕರಣ ಸಾಧಿಸಲು ಹಾಗೂ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸಲು 2026–2031ರ ನೂತನ ಜವಳಿ ನೀತಿಗೆ ಅಂಕಿತ ಹಾಕಲಾಗಿದೆ.
ಕರ್ನಾಟಕ ಕೃತಕ ಬುದ್ಧಿಮತ್ತೆ (AI) ಹಬ್: ಭವಿಷ್ಯದ ತಂತ್ರಜ್ಞಾನಕ್ಕೆ ಬಲವಾದ ತಳಹದಿ ಹಾಕುವ ಸಲುವಾಗಿ, ಬೆಂಗಳೂರಿನ IIIT ಕ್ಯಾಂಪಸ್ನಲ್ಲಿ ₹35 ಕೋಟಿ ವೆಚ್ಚದಲ್ಲಿ ಸುಸಜ್ಜಿತ 'ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಹಬ್' ಸ್ಥಾಪಿಸಲು ನಿರ್ಧರಿಸಲಾಗಿದೆ.
ಚಿಂತಾಮಣಿಯಲ್ಲಿ ಅತ್ಯಾಧುನಿಕ ಡ್ರೋನ್ ಪರೀಕ್ಷಾ ಕೇಂದ್ರ: ಕರ್ನಾಟಕದಲ್ಲಿ ಡ್ರೋನ್ ತಂತ್ರಜ್ಞಾನದ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ₹42.83 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ 'ಡ್ರೋನ್ ಪರೀಕ್ಷಾ ಸೌಲಭ್ಯ' (Drone Testing Hub) ಸ್ಥಾಪನೆಗೆ ಹಸಿರು ನಿಶಾನೆ ತೋರಲಾಗಿದೆ.
ತೇಗ ಸಿರಿ ಯೋಜನೆ: ರಾಜ್ಯದ ಹಸಿರು ಹೊದಿಕೆಯನ್ನು ಹೆಚ್ಚಿಸಿ ಪರಿಸರ ಸಂರಕ್ಷಣೆಗೆ ಒತ್ತು ನೀಡಲು ₹493.09 ಕೋಟಿ ವೆಚ್ಚದ ರಾಜ್ಯಮಟ್ಟದ ಸಮಗ್ರ ವೃಕ್ಷಾಭಿವೃದ್ಧಿ 'ತೇಗ ಸಿರಿ ಯೋಜನೆ'ಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ.
ಜಿಐಎಸ್ (GIS) ಆಧಾರಿತ ರಸ್ತೆ ಜಾಲ ಯೋಜನೆ: ನಗರ ಮತ್ತು ಪಟ್ಟಣಗಳ ಸುಸ್ಥಿರ ಮತ್ತು ವ್ಯವಸ್ಥಿತ ಮೂಲಸೌಕರ್ಯ ಅಭಿವೃದ್ಧಿಗಾಗಿ ವೈಜ್ಞಾನಿಕವಾದ 'GIS ಆಧಾರಿತ Road Network Grid Plan' ಅನುಷ್ಠಾನಕ್ಕೆ ಸಚಿವ ಸಂಪುಟ ಸಮ್ಮತಿ ಸೂಚಿಸಿದೆ.
ಗವರ್ನ್ಮೆಂಟ್ ಫಸ್ಟ್ ಉಪಕ್ರಮ: ನವೋದ್ಯಮ (Startups) ನೀತಿಯಡಿ ₹25 ಕೋಟಿ ವೆಚ್ಚದಲ್ಲಿ ಎಲಿವೇಟ್ ಯೋಜನೆಯ ಮೂಲಕ ಹೊಸ ನಾವೀನ್ಯತೆಗಳಿಗೆ ಮತ್ತು ಸ್ಟಾರ್ಟ್ಅಪ್ಗಳಿಗೆ ಸರ್ಕಾರದಿಂದ ಬೆಂಬಲ ನೀಡಲು ತೀರ್ಮಾನಿಸಲಾಗಿದೆ.
ಕಲಬುರಗಿಯಲ್ಲಿ LEAP Labs ಸ್ಥಾಪನೆ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಉದ್ಯಮಶೀಲತೆ ಮತ್ತು ನಾವೀನ್ಯತೆಯನ್ನು ವೃದ್ಧಿಸಲು ಕಲಬುರಗಿಯ ಅಕ್ಕಮಹಾದೇವಿ ಬಡಾವಣೆಯಲ್ಲಿ 'LEAP (Growth) Labs' ಸ್ಥಾಪನೆಗೆ ನಿವೇಶನ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ.
https://twitter.com/DKShivakumar/status/2097686413089398935?s=20