ಕಲಬುರಗಿ: ಮೊಮ್ಮಗನನ್ನು ನೋಡಲು ಹೋಗಿದ್ದ ಅಜ್ಜನನ್ನು ಸೊಸೆ ಮನೆಯವರು ಹಿಗ್ಗಾಮುಗ್ಗಾ ಥಳಿಸಿ ಕೊಲೆ ಮಾಡಿದ ಘಟನೆ ಕಲಬುರಗಿ ಹೊರವಲಯದ ಬೇಲೂರ ಕ್ರಾಸ್ ಸಮೀಪ ನಡೆದಿದೆ.
ಬೇಲೂರ ತಾಂಡಾ ನಿವಾಸಿ ರಾಜು ರಾಥೋಡ್(48) ಕೊಲೆಯಾದ ವ್ಯಕ್ತಿ. ರಾಜು ರಾಥೋಡ್ ಮಗ ಶಿವಕುಮಾರ್ ಗೆ 15 ದಿನಗಳ ಹಿಂದೆ ಗಂಡು ಮಗು ಜನಿಸಿತು. ಮುಂಬೈನ ಆಸ್ಪತ್ರೆಗೆ ಮೊಮ್ಮಗನನ್ನು ನೋಡಲು ತೆರಳಿದಾಗ ಬೀಗರ ಜೊತೆಗೆ ರಾಜು ರಾಥೋಡ್ ಗೆ ಜಗಳವಾಗಿದೆ.
ಮುಂಬೈನಿಂದ ಕಲಬುರಗಿಗೆ ವಾಪಸ್ ಆಗಿದ್ದ ರಾಜು ಅವರನ್ನು ಜೂನ್ 3ರಂದು ಮಗು ತೋರಿಸುವುದಾಗಿ ಸೊಸೆ ಮನೆಯವರು ಕರೆ ಮಾಡಿ ಕರೆಸಿಕೊಂಡಿದ್ದಾರೆ. ಈ ವೇಳೆ 10ಕ್ಕೂ ಅಧಿಕ ಮಂದಿ ಸೇರಿ ಮನಬಂದಂತೆ ಥಳಿಸಿದ್ದಾರೆ. ತೀವ್ರ ಹಲ್ಲೆಗೊಳಗಾದ ರಾಜು ರಾಥೋಡ್ ನನ್ನು ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ 10ಕ್ಕೂ ಹೆಚ್ಚು ಜನರ ವಿರುದ್ಧ ಕಲಬುರಗಿ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.