ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಹಳೆ ಮೈಸೂರು ಭಾಗದ ಇಬ್ಬರು ಪ್ರಭಾವಿ ನಾಯಕರ ನಡುವಿನ ರಾಜಕೀಯ ಜಿದ್ದಾಜಿದ್ದಿ ಮತ್ತೊಮ್ಮೆ ತಾರಕಕ್ಕೇರಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗಳಿಗೆ ಕಟುವಾಗಿ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, “ಇವರ ಇಂತಹ ಬೆದರಿಕೆ ತಂತ್ರಗಳಿಗೆ ನಾವ್ಯಾರೂ ಹೆದರುವುದಿಲ್ಲ” ಎಂದು ನೇರ ಸವಾಲು ಹಾಕಿದ್ದಾರೆ.ರಾಜ್ಯದ ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಹಾಗೂ ತನಿಖಾ ಸಂಸ್ಥೆಗಳ ನೋಟಿಸ್ ರಾಜಕಾರಣದ ಬೆನ್ನಲ್ಲೇ ಎಚ್ಡಿಕೆ ಆಡಿರುವ ಈ ಮಾತುಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿವೆ.
ಬೆದರಿಕೆಗಳಿಗೆ ಸೊಪ್ಪು ಹಾಕಲ್ಲ ಎಂದ ಕುಮಾರಸ್ವಾಮಿ
“ಅಧಿಕಾರ ಕೈಯಲ್ಲಿದೆ ಎಂದು ಯಾರನ್ನೋ ಹೆದರಿಸಬಹುದು, ಬೆದರಿಸಬಹುದು ಅಂದುಕೊಂಡರೆ ಅದು ಇವರ ಭ್ರಮೆ. ಇಂತಹ ಬೆದರಿಕೆಗಳಿಗೆ ಹೆದರಿ ಓಡಿಹೋಗುವ ಜಾಯಮಾನ ನಮ್ಮದಲ್ಲ. ಕಾನೂನು ಮತ್ತು ಜನತಾ ನ್ಯಾಯಾಲಯದ ಮೇಲೆ ನಮಗೆ ಸಂಪೂರ್ಣ ನಂಬಿಕೆಯಿದೆ. ಇವರ ಪ್ರತಿಯೊಂದು ರಾಜಕೀಯ ತಂತ್ರಕ್ಕೂ ಜನರೇ ತಕ್ಕ ಪಾಠ ಕಲಿಸಲಿದ್ದಾರೆ,” ಎಂದು ಕಟು ಭಾಷೆಯಲ್ಲೇ ಎಚ್ಚರಿಸಿದ್ದಾರೆ.
ನಾವು ಬಿಡದಿ ಭಾಗದ ರೈತರ ಭೂಮಿ ಉಳಿಸಲು ಹೋರಾಟ ನಡೆಸುತ್ತಿದ್ದರೆ, ಇನ್ನೊಂದೆಡೆ ಕಾಂಗ್ರೆಸ್ನವರು ಪೋಸ್ಟರ್ಗಳನ್ನು ಅಂಟಿಸಿ ನಮ್ಮ ಕುಟುಂಬದ ವಿರುದ್ಧ ವಿಕೃತವಾಗಿ ಅಪಪ್ರಚಾರ ನಡೆಸುತ್ತಿದ್ದಾರೆ. ರಾಜ್ಯದ ಮುಖ್ಯಮಂತ್ರಿಯಾದರೂ ಡಿ.ಕೆ. ಶಿವಕುಮಾರ್ ತನ್ನ ಹಳೆಯ ಚಾಳಿಯನ್ನು ಬಿಟ್ಟಿಲ್ಲ, ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬುಧವಾರ ಬೆಳಗ್ಗೆ ಬೆಂಗಳೂರಿನ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವರು, ಡಿಕೆಶಿ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಟು ಶಬ್ದಗಳಲ್ಲಿ ಟೀಕಾಪ್ರಹಾರ ನಡೆಸಿದರು
ಬಿಡದಿ ಭಾಗದಲ್ಲಿ ತಮ್ಮ ಕುಟುಂಬದ ವಿರುದ್ಧ ಪೋಸ್ಟರ್ ಅಂಟಿಸಿರುವ ಕುರಿತು ಮಾತನಾಡಿದ ಕುಮಾರಸ್ವಾಮಿ:
ರಾಜ್ಯದ ಸಿಎಂ ಆದ ಮೇಲೆಯೂ ಬ್ಲೂ ಫಿಲ್ಮ್ ಮಾಡಿಸುವುದು, ಪೋಸ್ಟರ್ ಅಂಟಿಸುವುದು ಬಿಡುತ್ತಾರೆ ಅಂದುಕೊಂಡಿದ್ದೆ. ಆದರೆ ಆ ಚಾಳಿ ಡಿ.ಕೆ. ಶಿವಕುಮಾರ್ಗೆ ಇನ್ನೂ ಹೋಗಿಲ್ಲ. ಕೈಲಾಗದವನ ಕೊನೆಯ ಅಸ್ತ್ರವೇ ಅಪಪ್ರಚಾರ. ನನ್ನ ಪತ್ನಿ, ನನ್ನ ಮಗ ನಿಖಿಲ್ ಫೋಟೋ ಹಾಕಿ ಪೋಸ್ಟರ್ ಅಂಟಿಸಿದ್ದಾರೆ. ವೈಯಕ್ತಿಕ ಅಪಪ್ರಚಾರಕ್ಕೆ ನಾನು ಕುಗ್ಗಲ್ಲ, ನನ್ನ ಹೋರಾಟ ಇನ್ನು ತೀವ್ರವಾಗುತ್ತದೆ, ಎಂದು ಎಚ್ಚರಿಸಿದರು.
100 ಎಕರೆ ಎಲ್ಲಿದೆ ತೋರಿಸಲಿ? ಜಮೀನಿನ ಲೆಕ್ಕ ಕೊಟ್ಟ ಸಚಿವರು
“ನನ್ನ ಹೆಸರಿನಲ್ಲಿ 100 ಎಕರೆ ಜಮೀನಿದೆ ಎಂದು ಪೋಸ್ಟರ್ ಹಾಕಿದ್ದಾರೆ. ಆದರೆ ನನ್ನ ಹೆಸರಿನಲ್ಲಿ ಇರುವುದೇ 46 ಎಕರೆ ಭೂಮಿ. ಅದನ್ನು 40 ವರ್ಷಗಳ ಹಿಂದೆ ಕಷ್ಟಪಟ್ಟು ಖರೀದಿ ಮಾಡಿದ್ದು. ಅನಿತಾ ಕುಮಾರಸ್ವಾಮಿ ಹೆಸರಿನಲ್ಲಿ 36-37 ಎಕರೆ ಭೂಮಿ ಇದೆ. ಇದನ್ನು ಬಿಟ್ಟರೆ ಬೇರೆ ಜಮೀನಿಲ್ಲ. ನೂರು ಎಕರೆ ಎಲ್ಲಿದೆ ಎಂದು ಅವರು ತೋರಿಸಲಿ,” ಎಂದು ಸವಾಲು ಹಾಕಿದರು.
“ನನ್ನ ಬದುಕು ತೆರೆದ ಪುಸ್ತಕ, ಇಂತಹ ಸಣ್ಣತನದ ಬೆದರಿಕೆಗಳಿಗೆ ನಾನು ಜಗ್ಗಲ್ಲ
“ನನ್ನ ಬದುಕು ತೆರೆದ ಪುಸ್ತಕ. ಇಂತಹ ಬೆದರಿಕೆ, ಅಪಪ್ರಚಾರಕ್ಕೆ ಹೆದರುವ ಪ್ರಶ್ನೆಯೇ ಇಲ್ಲ. ಬಿಡದಿ ಟೌನ್ಶಿಪ್ ನನ್ನ ಕಾಲದಲ್ಲಿ ಮಾಡಲು ಹೊರಟಿದ್ದು ನಿಜ, ಆದರೆ ಜನ ವಿರೋಧಿಸಿದಾಗ ಅಲ್ಲಿಗೇ ಕೈಬಿಟ್ಟೆ. ಇವರು ಯಾವುದೇ ಕೆಲಸ ಕೈಗೆತ್ತಿಕೊಂಡರೂ ಎಷ್ಟು ದುಡ್ಡು ಹೊಡೆಯಬಹುದು ಎಂದು ನೋಡುತ್ತಾರೆ. ಇಂತಹ ವಿಕೃತಿಯ ವ್ಯಕ್ತಿಯ ಬಗ್ಗೆ ನಾನು ಎಷ್ಟು ಬಾರಿ ಮಾತನಾಡಲಿ?” ಎಂದು ಡಿಕೆಶಿ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಕೆಂಡಾಮಂಡಲರಾದರು.