ಟಾಲಿವುಡ್ನ ಎವರ್ಗ್ರೀನ್ ಸಿನಿಮಾಗಳಲ್ಲಿ ವಿಕ್ಟರಿ ವೆಂಕಟೇಶ್ ನಟನೆಯ ‘ಮಲ್ಲೀಶ್ವರಿ’ ಚಿತ್ರವೂ ಒಂದು. ಈ ಸಿನಿಮಾ ಬಿಡುಗಡೆಯಾಗಿ ಎರಡು ದಶಕಗಳೇ ಕಳೆದಿವೆ. ಆದರೂ ಇಂದಿಗೂ ಈ ಚಿತ್ರದ ಕ್ರೇಜ್ ಕಡಿಮೆಯಾಗಿಲ್ಲ. ಈ ಚಿತ್ರದ ಮೂಲಕವೇ ಕತ್ರಿನಾ ಕೈಫ್ ತೆಲುಗು ಚಿತ್ರರಂಗಕ್ಕೆ ನಾಯಕಿಯಾಗಿ ಪದಾರ್ಪಣೆ ಮಾಡಿದ್ದರು. ಆದರೆ, ಕತ್ರಿನಾ ಅವರನ್ನು ಈ ಚಿತ್ರಕ್ಕೆ ಆಯ್ಕೆ ಮಾಡುವುದು ಮತ್ತು ಅವರಿಂದ ನಟನೆ ಮಾಡಿಸುವುದು ಅಂದು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ ಎಂದು ಚಿತ್ರದ ನಿರ್ದೇಶಕ ಕೆ. ವಿಜಯ ಭಾಸ್ಕರ್ ಇತ್ತೀಚಿನ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
ರಾಜಕುಮಾರಿಯ ಪಾತ್ರಕ್ಕೆ ಹೊಸ ಮುಖದ ಹುಡುಕಾಟ
ಮಲ್ಲೀಶ್ವರಿ ಚಿತ್ರಕ್ಕೆ ಕತ್ರಿನಾ ಕೈಫ್ ಅವರನ್ನೇ ನಾಯಕಿಯಾಗಿ ಆಯ್ಕೆ ಮಾಡಲು ನಿರ್ದೇಶಕ ವಿಜಯ ಭಾಸ್ಕರ್ ಬಯಸಿದ್ದರು. ಜಾಹೀರಾತೊಂದರಲ್ಲಿ ಕತ್ರಿನಾ ಅವರನ್ನು ನೋಡಿ, ಅವರೇ ಈ ಪಾತ್ರಕ್ಕೆ ಸೂಕ್ತ ಎಂದು ನಿರ್ಧರಿಸಿದ್ದರು. ಆದರೆ ಆರಂಭದಲ್ಲಿ ಈ ಆಯ್ಕೆ ಪ್ರಕ್ರಿಯೆ ನಿರ್ಮಾಪಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತಂತೆ. ಕತ್ರಿನಾ ಅವರಿಗೆ ಕಥೆ ಇಷ್ಟವಾಗಿ ಒಪ್ಪಿಕೊಂಡಿದ್ದರೂ, ಮುಂಬೈನಲ್ಲಿ ನಡೆದ ಮಾತುಕತೆಯ ವೇಳೆ ಕೆಲವು ಭಿನ್ನಾಭಿಪ್ರಾಯಗಳು ಉಂಟಾಗಿದ್ದವು. ಸಿನಿಮಾ ತಂಡ ಮುಂಗಡ ಹಣ ನೀಡಲು ಮುಂದಾದರೂ ಕತ್ರಿನಾ ಅದನ್ನು ನಿರಾಕರಿಸಿದ್ದರು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಚಿತ್ರತಂಡ ಬೇರೆ ನಾಯಕಿಯರಿಗಾಗಿ ಹುಡುಕಾಟ ನಡೆಸಿತ್ತು. ಅಂದಿನ ಪ್ರಮುಖ ಸುಂದರಿಯರು ಮತ್ತು ಮಾಡೆಲ್ಗಳನ್ನು ಆಡಿಷನ್ ಮಾಡಲಾಗಿತ್ತು. ಆ ಸಮಯದಲ್ಲಿ ತೆಲುಗಿನಲ್ಲಿ ಈಗಾಗಲೇ ಸ್ಟಾರ್ ನಟಿಯಾಗಿದ್ದ ಸೋನಾಲಿ ಬೇಂದ್ರೆ ಅವರ ಹೆಸರೂ ಮುಂಚೂಣಿಗೆ ಬಂದಿತ್ತು. ಆದರೆ, ಸೋನಾಲಿ ಬೇಂದ್ರೆ ಅವರೊಂದಿಗೆ ಈಗಾಗಲೇ ‘ಮನ್ಮಥುಡು’ ಸಿನಿಮಾ ಮಾಡಿದ್ದರಿಂದ, ಮಲ್ಲೀಶ್ವರಿ ಪಾತ್ರಕ್ಕೆ ಹೊಸ ಮುಖವೇ ಬೇಕು ಎಂಬ ಹಠಕ್ಕೆ ಬಿದ್ದ ನಿರ್ದೇಶಕರು ಅಂತಿಮವಾಗಿ ಕತ್ರಿನಾ ಕೈಫ್ ಅವರನ್ನೇ ಸಿನಿಮಾಗೆ ಕರೆತಂದರು.
ನಟನೆಯ ಸಂದರ್ಭದಲ್ಲಿ ಎದುರಾದ ಸವಾಲುಗಳು
ಕತ್ರಿನಾ ಕೈಫ್ ಭಾರತೀಯ ವಾತಾವರಣದಲ್ಲಿ ಬೆಳೆಯದೇ ಇದ್ದುದರಿಂದ ಅವರಿಗೆ ತೆಲುಗು ಹುಡುಗಿಯ ನಡವಳಿಕೆ ಅಥವಾ ಬಾಡಿ ಲಾಂಗ್ವೇಜ್ ಬಗ್ಗೆ ಯಾವುದೇ ಕಲ್ಪನೆ ಇರಲಿಲ್ಲ ಎಂದು ವಿಜಯ ಭಾಸ್ಕರ್ ಹೇಳಿದ್ದಾರೆ. ಶೂಟಿಂಗ್ ಸೆಟ್ನಲ್ಲಿ ಅವರು ಕೂರುವ ಶೈಲಿಯನ್ನು ಸಹ ತಿದ್ದಬೇಕಿತ್ತಂತೆ. ತೆಲುಗು ರಾಜಕುಮಾರಿಯ ಪಾತ್ರಕ್ಕೆ ತಕ್ಕಂತೆ ಗೌರವ ಮತ್ತು ಪ್ರೀತಿಯನ್ನು ನಟನೆಯಲ್ಲಿ ತೋರಿಸುವುದು ಅವರಿಗೆ ಸವಾಲಾಗಿತ್ತು. ಆದರೆ, ಕತ್ರಿನಾ ಕಷ್ಟಪಟ್ಟು ಕೆಲಸ ಮಾಡುವ ಗುಣ ಹೊಂದಿದ್ದರಿಂದ ಶ್ರಮವಹಿಸಿ ಆ ಪಾತ್ರಕ್ಕೆ ಜೀವ ತುಂಬಿದರು ಎಂದು ನಿರ್ದೇಶಕರು ಅಂದಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಅಂದು ವಿಜಯ ಭಾಸ್ಕರ್ ತಗೆದುಕೊಂಡ ಆ ನಿರ್ಧಾರದಿಂದಾಗಿ ತೆಲುಗು ಚಿತ್ರರಂಗಕ್ಕೆ ಒಬ್ಬ ಸ್ಟಾರ್ ನಟಿ ಸಿಗುವಂತಾಯಿತು.