ಖ್ಯಾತ ನಟಿ ಹಾಗೂ ರಾಜಕಾರಣಿ ಖುಷ್ಬೂ ಸುಂದರ್ ಮತ್ತು ನಿರ್ದೇಶಕ ಸುಂದರ್ ಸಿ ಅವರ ಪುತ್ರಿ ಆನಂದಿತಾ ಸುಂದರ್ ಅವರು ತಮ್ಮ ದೈಹಿಕ ಬದಲಾವಣೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಎದುರಿಸುತ್ತಿರುವ ಟ್ರೋಲಿಂಗ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ಅವರು, ತೂಕ ಇಳಿಸಿಕೊಳ್ಳಲು ತಾವು ಯಾವುದೇ ಶಾರ್ಟ್ಕಟ್ ಅಥವಾ ಔಷಧಿಗಳನ್ನು ಬಳಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಏಳು ವರ್ಷಗಳ ಕಠಿಣ ಪರಿಶ್ರಮ
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಓಜೆಂಪಿಕ್ ಅಥವಾ ಮೌಂಜಾರೋದಂತಹ ತೂಕ ಇಳಿಸುವ ಔಷಧಿಗಳ ಬಳಕೆ ಹಾಗೂ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂಬ ವದಂತಿಗಳನ್ನು ಆನಂದಿತಾ ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ತಮ್ಮ ಈ ಬದಲಾವಣೆ ಒಂದೇ ರಾತ್ರಿಯಲ್ಲಿ ಆಗಿದ್ದಲ್ಲ, ಇದರ ಹಿಂದೆ ಏಳು ವರ್ಷಗಳ ಸುದೀರ್ಘ ಪರಿಶ್ರಮವಿದೆ ಎಂದು ಅವರು ಹೇಳಿದ್ದಾರೆ. ೨೦೧೮ ಮತ್ತು ೨೦೧೯ ರ ಅವಧಿಯಲ್ಲೇ ತಾವು ತೂಕ ಇಳಿಸುವ ಪ್ರಯಾಣವನ್ನು ಆರಂಭಿಸಿದ್ದು, ಕೋವಿಡ್ ಲಾಕ್ಡೌನ್ ಸಮಯದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಕಾರಣ ಜನರು ಇದು ತಕ್ಷಣಕ್ಕೆ ನಡೆದ ಪವಾಡ ಎಂದು ಭಾವಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಬಾಲ್ಯದಲ್ಲಿ ತಮಗಿದ್ದ ಅತಿಯಾದ ತೂಕದ ಸಮಸ್ಯೆಯಿಂದಾಗಿ ಆರೋಗ್ಯ ಕಾಪಾಡಿಕೊಳ್ಳಲು ಜೀವನಶೈಲಿಯನ್ನು ಬದಲಾಯಿಸಿಕೊಂಡಿದ್ದಾಗಿ ಅವರು ತಿಳಿಸಿದ್ದಾರೆ.
ಟೀಕಾಕಾರರ ಮನಸ್ಥಿತಿಗೆ ಬೇಸರ
ತಾವು ದಪ್ಪಗಿದ್ದಾಗಲೂ ಟೀಕಿಸುತ್ತಿದ್ದ ಜನರು, ಈಗ ತೂಕ ಇಳಿಸಿಕೊಂಡ ಮೇಲೆಯೂ ಸುಮ್ಮನಿರದೆ ಸರ್ಜರಿ ಆರೋಪ ಮಾಡುತ್ತಿದ್ದಾರೆ ಎಂದು ಆನಂದಿತಾ ಹೇಳಿದ್ದಾರೆ. ಇದೇ ವೇಳೆ ಇನ್ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮನ್ನು ತೃತೀಯಲಿಂಗಿಗಳಿಗೆ ಹೋಲಿಸಿ ನಿಂದಿಸಲು ಯತ್ನಿಸುವವರ ವಿರುದ್ಧವೂ ಅವರು ಆಕ್ರೋಶ ಹೊರಹಾಕಿದ್ದಾರೆ. ತೃತೀಯಲಿಂಗಿಗಳನ್ನು ಅತ್ಯಂತ ಸುಂದರ ಮತ್ತು ದಯಾಪರ ವ್ಯಕ್ತಿಗಳು ಎಂದು ಕರೆದಿರುವ ಅವರು, ಯಾರನ್ನಾದರೂ ನಿಂದಿಸಲು ಅವರ ಹೆಸರನ್ನು ಬಳಸುವುದು ಅತ್ಯಂತ ಅಜ್ಞಾನದ ಮತ್ತು ಕ್ರೂರ ಮನಸ್ಥಿತಿಯ ಸಂಕೇತವಾಗಿದೆ ಎಂದು ಖಂಡಿಸಿದ್ದಾರೆ.
ಖುಷ್ಬೂ ಹೆಮ್ಮೆಯ ಮಾತು
ತಮ್ಮ ಹದಿನೈದನೇ ವಯಸ್ಸಿನಿಂದಲೇ ಇಂತಹ ನಕಾರಾತ್ಮಕ ಕಾಮೆಂಟ್ಗಳನ್ನು ಎದುರಿಸುತ್ತಾ ಬಂದಿರುವುದಾಗಿ ಹೇಳಿರುವ ಆನಂದಿತಾ, ಹೆತ್ತವರು ಸೆಲೆಬ್ರಿಟಿಗಳಾಗಿದ್ದಕ್ಕೆ ಮಕ್ಕಳನ್ನು ಗುರಿ ಮಾಡುವುದು ಸರಿಯಲ್ಲ ಎಂದಿದ್ದಾರೆ. ಸದ್ಯ ಆನಂದಿತಾ ಅವರ ಈ ಧೈರ್ಯದ ಮಾತುಗಳಿಗೆ ಸಾರ್ವಜನಿಕರಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಮಗಳ ಸಂದರ್ಶನದ ವಿಡಿಯೋವನ್ನು ಹಂಚಿಕೊಂಡಿರುವ ನಟಿ ಖುಷ್ಬೂ, ನನ್ನ ಬೊಮ್ಮಾಯಿ ನಿನ್ನ ಬಗ್ಗೆ ಹೆಮ್ಮೆಯಿದೆ ಎಂದು ಬರೆದುಕೊಂಡು ಮಗಳಿಗೆ ಬೆಂಬಲ ಸೂಚಿಸಿದ್ದಾರೆ.