ವಿಶೇಷ ದಿನಗಳಲ್ಲಿ ಅಥವಾ ವಾರಾಂತ್ಯದ ಮಧ್ಯಾಹ್ನ ಹಾಗೂ ರಾತ್ರಿಯ ಊಟಕ್ಕೆ ಏನಾದರೂ ವಿಭಿನ್ನವಾಗಿ ಮತ್ತು ರುಚಿಕರವಾಗಿ ಮಾಡಬೇಕು ಅನಿಸುವುದು ಸಹಜ. ಅಂತಹ ಸಂದರ್ಭಗಳಲ್ಲಿ ಉತ್ತರ ಭಾರತದ ಪ್ರಸಿದ್ಧ ಖಾದ್ಯವಾದ ಅಮೃತಸರಿ ಪಿಂಡಿ ಛೋಲೆಯನ್ನು ಪ್ರಯತ್ನಿಸಬಹುದು. ಮಸಾಲೆಗಳ ಪರಿಮಳ ಹಾಗೂ ಟೊಮೆಟೊ-ಈರುಳ್ಳಿ ಗ್ರೇವಿಯ ಮಿಶ್ರಣದಿಂದ ತಯಾರಾಗುವ ಈ ಖಾದ್ಯವು ಪೂರಿ, ಭಟೂರೆ ಅಥವಾ ಬಿಸಿಬಿಸಿ ಅನ್ನದೊಂದಿಗೆ ಸವಿಯಲು ಅತ್ಯುತ್ತಮ ಕಾಂಬಿನೇಷನ್ ಆಗಿದೆ. ಇದನ್ನು ಮನೆಯಲ್ಲಿಯೇ ಸುಲಭವಾಗಿ ಹೇಗೆ ಸಿದ್ಧಪಡಿಸಬಹುದು ಎಂಬ ಮಾಹಿತಿ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು
ಮೊದಲಿಗೆ 200 ಗ್ರಾಂ ಕಡಲೆಯನ್ನು (ಚನ್ನಾ) ಚೆನ್ನಾಗಿ ನೆನೆಸಿಟ್ಟುಕೊಳ್ಳಬೇಕು. ಇದರೊಂದಿಗೆ ಬೇಯಿಸಲು 2-3 ಪಲಾವ್ ಎಲೆ, 1 ಟೀ ಬ್ಯಾಗ್, 1 ಇಂಚು ದಾಲ್ಚಿನ್ನಿ, 3-4 ಲವಂಗ, 2-3 ಏಲಕ್ಕಿ, 2-3 ಕಪ್ಪು ಏಲಕ್ಕಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಅಗತ್ಯವಿರುತ್ತದೆ.
ಗ್ರೇವಿ ತಯಾರಿಸಲು 4 ಚಮಚ ಎಣ್ಣೆ, ಅರ್ಧ ಕಪ್ ಈರುಳ್ಳಿ ಪೇಸ್ಟ್, 1 ಕಪ್ ಟೊಮೆಟೊ ಪ್ಯೂರಿ, ಒಂದೂವರೆ ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್, 3-4 ಹಸಿಮೆಣಸಿನಕಾಯಿ ಹಾಗೂ ಕೊತ್ತಂಬರಿ ಸೊಪ್ಪು ಬೇಕಾಗುತ್ತದೆ.
ಛೋಲೆ ಮಸಾಲೆ ಪುಡಿಗಾಗಿ 1 ಚಮಚ ಅಚ್ಚಖಾರದ ಪುಡಿ, ಅರ್ಧ ಚಮಚ ಅರಿಶಿನ, ಅರ್ಧ ಚಮಚ ಜೀರಿಗೆ ಪುಡಿ, 1 ಚಮಚ ಧನಿಯಾ ಪುಡಿ, 1 ಚಮಚ ಗರಂ ಮಸಾಲೆ, ಕಾಲು ಚಮಚ ಇಂಗು, 1 ಚಮಚ ಸಕ್ಕರೆ, ಒಂದೂವರೆ ಚಮಚ ಆಮ್ಚೂರ್ ಪುಡಿ (ಒಣ ಮಾವಿನಕಾಯಿ ಪುಡಿ) ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸಿದ್ಧಪಡಿಸಿಕೊಳ್ಳಿ.
ಒಗ್ಗರಣೆಗಾಗಿ 1 ಚಮಚ ಎಣ್ಣೆ, 1-2 ಹಸಿಮೆಣಸಿನಕಾಯಿ ಮತ್ತು ಅರ್ಧ ಇಂಚು ಉದ್ದಕ್ಕೆ ಹೆಚ್ಚಿದ ಶುಂಠಿ ಇಟ್ಟುಕೊಳ್ಳಿ.
ತಯಾರಿಸುವ ಸರಳ ವಿಧಾನ
ಮೊದಲ ಹಂತದಲ್ಲಿ, ನೆನೆಸಿದ ಕಡಲೆಯನ್ನು ಒಂದು ಪ್ರೆಶರ್ ಕುಕ್ಕರ್ಗೆ ಹಾಕಿ. ಅದಕ್ಕೆ ಪಲಾವ್ ಎಲೆ, ದಾಲ್ಚಿನ್ನಿ, ಲವಂಗ, ಏಲಕ್ಕಿ, ಕಪ್ಪು ಏಲಕ್ಕಿ, ಟೀ ಬ್ಯಾಗ್, ಅಗತ್ಯವಿರುವಷ್ಟು ಉಪ್ಪು ಮತ್ತು ನೀರನ್ನು ಸೇರಿಸಿ 3 ರಿಂದ 4 ವಿಸ್ಲ್ ಬರುವವರೆಗೆ ಬೇಯಿಸಿಕೊಳ್ಳಿ. ಕಡಲೆ ಬೆಂದ ನಂತರ ಅದರಲ್ಲಿರುವ ಟೀ ಬ್ಯಾಗ್ ಅನ್ನು ಹೊರಗೆ ತೆಗೆದು ಹಾಕಿ, ನೀರನ್ನು ಮತ್ತು ಕಡಲೆಯನ್ನು ಪ್ರತ್ಯೇಕಿಸಿ ಇಟ್ಟುಕೊಳ್ಳಿ. ಈ ನೀರನ್ನು ಚೆಲ್ಲಬೇಡಿ, ಮುಂದೆ ಗ್ರೇವಿಗೆ ಬಳಸಬೇಕಾಗುತ್ತದೆ.
ಬಳಿಕ ಛೋಲೆ ಮಸಾಲೆಗೆ ನೀಡಿರುವ ಎಲ್ಲಾ ಒಣ ಮಸಾಲೆ ಪುಡಿಗಳನ್ನು ಒಂದು ಬಟ್ಟಲಿನಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಪಕ್ಕಕ್ಕಿಟ್ಟುಕೊಳ್ಳಿ.
ಈಗ ಒಂದು ಬಾಣಲಿಗೆ ಎಣ್ಣೆ ಹಾಕಿ ಕಾಯಲು ಬಿಡಿ. ಎಣ್ಣೆ ಬಿಸಿಯಾದ ನಂತರ ಈರುಳ್ಳಿ ಪೇಸ್ಟ್ ಸೇರಿಸಿ ಅದು ಹೊಂಬಣ್ಣಕ್ಕೆ ಬರುವವರೆಗೆ ಹುರಿಯಿರಿ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೆ ಕೆಲವು ನಿಮಿಷಗಳ ಕಾಲ ಬಾಡಿಸಿ.
ಮುಂದಿನ ಹಂತದಲ್ಲಿ ಟೊಮೆಟೊ ಪ್ಯೂರಿ ಮತ್ತು ಹಸಿಮೆಣಸಿನಕಾಯಿಯನ್ನು ಸೇರಿಸಿ. ಇದರೊಂದಿಗೆ ಈಗಾಗಲೇ ಸಿದ್ಧಪಡಿಸಿಟ್ಟುಕೊಂಡಿರುವ ಛೋಲೆ ಮಸಾಲೆ ಪುಡಿಯನ್ನು ಹಾಕಿ ಚೆನ್ನಾಗಿ ಕೈಯಾಡಿಸಿ. ಮಸಾಲೆಗಳು ತಳ ಹಿಡಿಯದಂತೆ ತಡೆಯಲು ಕಡಲೆ ಬೇಯಿಸಿದ ನೀರನ್ನು ಕಾಲು ಕಪ್ನಷ್ಟು ಸೇರಿಸಿ 3 ರಿಂದ 4 ನಿಮಿಷಗಳ ಕಾಲ ಬೇಯಿಸಿ.
ಈ ಮಸಾಲೆ ಮಿಶ್ರಣಕ್ಕೆ ಬೇಯಿಸಿದ ಕಡಲೆಯನ್ನು ಸೇರಿಸಿ ಚೆನ್ನಾಗಿ ಕೈಯಾಡಿಸಿ. ನಂತರ ಉಳಿದ ಕಡಲೆ ಬೇಯಿಸಿದ ನೀರನ್ನು ಸೇರಿಸಿ, ಪಾತ್ರೆಯನ್ನು ಮುಚ್ಚಿ ಸಣ್ಣ ಉರಿಯಲ್ಲಿ 8 ರಿಂದ 10 ನಿಮಿಷಗಳ ಕಾಲ ಬೇಯಲು ಬಿಡಿ.
ಕೊನೆಯದಾಗಿ ಒಂದು ಸಣ್ಣ ಪಾತ್ರೆಯಲ್ಲಿ ಒಗ್ಗರಣೆಗೆ ಎಣ್ಣೆ ಕಾಯಿಸಿ, ಅದಕ್ಕೆ ಹಸಿಮೆಣಸಿನಕಾಯಿ ಮತ್ತು ಶುಂಠಿ ಸೀಳುಗಳನ್ನು ಹಾಕಿ ಕೆಲವು ಸೆಕೆಂಡುಗಳ ಕಾಲ ಹುರಿಯಿರಿ. ಈ ಒಗ್ಗರಣೆಯನ್ನು ಸಿದ್ಧವಾಗಿರುವ ಛೋಲೆ ಗ್ರೇವಿಯ ಮೇಲೆ ಹಾಕಿ, ಮೇಲಿಂದ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ ಬಿಸಿಬಿಸಿಯಾದ ಅಮೃತಸರಿ ಪಿಂಡಿ ಛೋಲೆ ಸವಿಯಲು ಸಿದ್ಧವಾಗುತ್ತದೆ.