ಬೆಳಗಾವಿ: ವಿವಾಹಿತ ಮಹಿಳೆಯೊಂದಿಗೆ ಓಡಿ ಹೋದ ಯುವಕನ ಮನೆಯ ಮೇಲೆ ದಾಳಿ ನಡೆಸಲಾಗಿದೆ. 30ಕ್ಕೂ ಅಧಿಕ ಜನರ ಗುಂಪಿನಿಂದ ಯುವಕನ ಮನೆ ಮೇಲೆ ದಾಳಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಯಮುಕನಮರಡಿ ಕ್ಷೇತ್ರದ ವ್ಯಾಪ್ತಿಯ ಭರಮ್ಯಾನಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ. ತಲ್ವಾರ್, ಕುಡುಗೋಲು, ಬಡಿಗೆ ಸಹಿತ ಯಲ್ಲಪ್ಪ ನಾಯ್ಕ್ ಮನೆಗೆ ನುಗ್ಗಿ ದಾಳಿ ಮಾಡಲಾಗಿದೆ. ಮಹಿಳೆಯ ಪೋಷಕರು, ಪತಿಯ ಕುಟುಂಬ ಸದಸ್ಯರು, ಸಂಬಂಧಿಕರಿಂದ ದಾಳಿ ನಡೆದಿದೆ. ಮನೆಗೆ ನುಗ್ಗಿ ದಾಂದಲೆ ನಡೆಸಿ ಪೀಠೋಪಕರಣಗಳಿಗೆ ಹಾನಿ ಮಾಡಿದ್ದಾರೆ. ಕಲ್ಲು ತೂರಿ ಮನೆಯ ಹೆಂಚುಗಳನ್ನು ಧ್ವಂಸಗೊಳಿಸಲಾಗಿದೆ. ಟಿವಿ, ತಿಜೋರಿಗೆ ಹಾನಿ ಮಾಡಲಾಗಿದೆ. ಮನೆಯಲ್ಲಿದ್ದ ಕುರಿಗಳನ್ನು ಕದ್ದೊಯ್ಯಲಾಗಿದೆ.
ದಾಳಿಯ ವೇಳೆ ಮನೆಯಲ್ಲಿದ್ದ ಯುವಕನ ಕುಟುಂಬ ಸದಸ್ಯರ ಹತ್ಯೆಗೆ ಯತ್ನ ನಡೆದಿದ್ದು, ಜಸ್ಟ್ ಮಿಸ್ ಆಗಿದ್ದಾರೆ. 6 ಪುಟ್ಟ ಮಕ್ಕಳು, ನಾಲ್ವರು ಹಿರಿಯರು ಸೇರಿ 10 ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಳೆದ ವರ್ಷ ಬಸಪ್ಪ ನಾಯ್ಕ್ ಜೊತೆಗೆ ನಾಗವ್ವನ ಮದುವೆಯಾಗಿತ್ತು. ಯಲ್ಲಪ್ಪ ನಾಯ್ಕ್ ಮತ್ತು ಬಸಪ್ಪ ನಾಯ್ಕ್ ಸ್ನೇಹಿತರಾಗಿದ್ದು, ಆತನ ಪತ್ನಿಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದ.
ಒಂದೇ ಕಂಪನಿಯಲ್ಲಿ ಯಲ್ಲಪ್ಪ ಮತ್ತು ಬಸಪ್ಪ ಕೆಲಸ ಮಾಡುತ್ತಿದ್ದರು. ಈ ವೇಳೆ ಆತನ ಪತ್ನಿಯೊಂದಿಗೆ ಸಲುಗೆ ಬೆಳೆದು 2 ದಿನಗಳ ಹಿಂದೆ ಓಡಿ ಹೋಗಿದ್ದರು. ಇದರಿಂದ ಆಕ್ರೋಶಗೊಂಡ ನಾಗವ್ವ ಪೋಷಕರು, ಬಸಪ್ಪನ ಕುಟುಂಬದವರು, ಸಂಬಂಧಿಕರು ಸೇರಿ 30ಕ್ಕೂ ಅಧಿಕ ಮಂದಿ ಯಲ್ಲಪ್ಪನ ಮನೆ ಮೇಲೆ ದಾಳಿ ಮಾಡಿದ್ದಾರೆ. ಮನೆಯಲ್ಲಿದ್ದ ವಸ್ತುಗಳನ್ನು ಧ್ವಂಸಗೊಳಿಸಿ, ಮನೆಯಲ್ಲಿದ್ದವರ ಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.
ನಾಗರಾಜ ನಾಯ್ಕ್, ರವಿ, ಈಶ್ವರ್, ಶಿವಪ್ಪ ಸೇರಿ ಹಲವರ ವಿರುದ್ಧ ದೂರು ನೀಡಲಾಗಿದ್ದು, ಬೆಳಗಾವಿಯ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.