ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಿತ್ರದುರ್ಗ ವಿಭಾಗವು 2026-27ನೇ ಶೈಕ್ಷಣಿಕ ಸಾಲಿನಲ್ಲಿ ಸೇವಾಸಿಂಧು ಫೋರ್ಟಲ್ ಮೂಲಕ ಶುಲ್ಕ ಪಾವತಿಸಿ ಬಸ್ ಪಾಸ್ ಪಡೆದಿರುವ ವಿದ್ಯಾರ್ಥಿಗಳಿಗೆ ಆ ಪಾಸಿನ ಮೊತ್ತ ಮರುಪಾವತಿ ಮಾಡಲು ಕ್ರಮ ಕೈಗೊಂಡಿದೆ.
ರಾಜ್ಯ ಸರ್ಕಾರದ ಆದೇಶದನ್ವಯ, ರಾಜ್ಯದ ನಾಲ್ಕೂ ಸಾರಿಗೆ ಸಂಸ್ಥೆಗಳ ಬಸ್ಗಳಲ್ಲಿ ಪ್ರಯಾಣಿಸುವ ಶಾಲಾ-ಕಾಲೇಜುಗಳ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಈಗಾಗಲೇ ದಿನಾಂಕ 29-05-2026 ರಿಂದ ಶುಲ್ಕ ಪಾವತಿಸಿ ಪಾಸ್ ಪಡೆದಿರುವ ವಿದ್ಯಾರ್ಥಿಗಳಿಗೆ ಹಣವನ್ನು ಮರುಪಾವತಿ ಮಾಡಲು ಇಲಾಖೆ ಅನುಮೋದನೆ ನೀಡಿದೆ. ಇದಕ್ಕಾಗಿ ವಿದ್ಯಾರ್ಥಿಗಳು ಸರ್ಕಾರದ ಸೇವಾಸಿಂಧು ಫೋರ್ಟಲ್ ಲಿಂಕ್ (https://sevasindhuservices.karnataka.gov.in/buspassservices/) ಮೂಲಕ ತಮ್ಮ ಮೊಬೈಲ್ ಸಂಖ್ಯೆ ಹಾಗೂ ಒಟಿಪಿ ನಮೂದಿಸಿ ಆನ್ಲೈನ್ ಅರ್ಜಿ ಸಲ್ಲಿಸಬೇಕು. ನಂತರ ಆಧಾರ್ ಆಧಾರಿತ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ತಮ್ಮ ಅಥವಾ ತಮ್ಮ ಪೋಷಕರ ಬ್ಯಾಂಕ್ ಖಾತೆಯ ವಿವರಗಳನ್ನು ತಂತ್ರಾಂಶದಲ್ಲಿ ನಮೂದಿಸಬೇಕು.
ಅರ್ಜಿ ಸಲ್ಲಿಸಿದ 7 ದಿನಗಳ ಒಳಗಾಗಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಡಿಬಿಟಿ ಮೂಲಕ ಹಣ ಜಮೆಯಾಗಲಿದೆ ಹಾಗೂ ಈ ಬಗ್ಗೆ ಮೊಬೈಲ್ಗೆ ಎಸ್ಎಂಎಸ್ ಸಂದೇಶ ಬರಲಿದೆ. ಹಣವು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಆಗುವುದರಿಂದ ವಿದ್ಯಾರ್ಥಿಗಳು ಈ ಸಂಬಂಧ ಯಾವುದೇ ಕೌಂಟರ್ಗಳಿಗೆ ಭೇಟಿ ನೀಡುವ ಅವಶ್ಯಕತೆ ಇರುವುದಿಲ್ಲ ಎಂದು ಕೆಎಸ್ಆರ್ಟಿಸಿ ಚಿತ್ರದುರ್ಗ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.
ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ: ಜುಲೈ 31 ಕೊನೆಯ ದಿನ
2026-27ನೇ ಸಾಲಿನಲ್ಲಿ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಜಿಲ್ಲೆಯ ಬಹುವಾರ್ಷಿಕ ತೋಟಗಾರಿಕೆ ಬೆಳೆಗಳಾದ ಅಡಿಕೆ, ದಾಳಿಂಬೆ ಮತ್ತು ಮಾವು ಬೆಳೆಗಳಿಗೆ ಜಿಲ್ಲೆಯ ಎಲ್ಲಾ ತಾಳ್ಲೂಕುಗಳಲ್ಲಿ ಅನುಷ್ಠಾನಗೊಳಿಸಲಾಗಿದ್ದು, ವಿಮೆ ನೋಂದಣಿಗೆ ಜುಲೈ 31 ಕೊನೆಯ ದಿನವಾಗಿದೆ.
ಸ್ಥಳೀಯವಾಗಿ ಲಭ್ಯವಿರುವ ಟೆಲಿಮೆಟ್ರಿಕ್ ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಾಗುವ ಹವಾಮಾನ ಅಂಶಗಳಾದ ಮಳೆಯ ಪ್ರಮಾಣ, ಮಳೆಯ ಹಂಚಿಕೆ, ತಾಪಮಾನ, ಗಾಳಿಯ ವೇಗ ಮತ್ತು ಆದ್ರ್ರತೆ ಇತ್ಯಾದಿ ಮಾಹಿತಿಗಳ ಆಧಾರದ ಮೇಲೆ ಬೆಳೆ ವಿಮೆ ನಷ್ಟವನ್ನು ತೀರ್ಮಾನಿಸಲಾಗುತ್ತದೆ. ಜಿಲ್ಲೆಗೆ ‘ರಿಲಯನ್ಸ್ ಇನ್ಶೂರೆನ್ಸ್ ಕಂಪನಿ’ಯನ್ನು ನಿಗದಿಪಡಿಸಲಾಗಿದೆ.
ಪ್ರತಿ ಹೆಕ್ಟೇರ್ಗೆ ಅಡಿಕೆ ಬೆಳೆಗೆ ₹1,28,000 ವಿಮಾ ಮೊತ್ತವಿದ್ದು, ರೈತರು ₹6,400 ಪ್ರೀಮಿಯಂ ಪಾವತಿಸಬೇಕಾಗುತ್ತದೆ. ದಾಳಿಂಬೆ ಬೆಳೆಗೆ ₹1,27,000 ವಿಮಾ ಮೊತ್ತಕ್ಕೆ ₹6,350 ಹಾಗೂ ಮಾವು ಬೆಳೆಗೆ ₹80,000 ವಿಮಾ ಮೊತ್ತಕ್ಕೆ ₹4,000 ಪ್ರೀಮಿಯಂ ಪಾವತಿಸಬೇಕಾಗತ್ತದೆ.ವಿಮಾ ವ್ಯಾಪ್ತಿಗೆ ಒಳಪಡುವ ಬೆಳೆಗಳು ಫಸಲು ನೀಡುವ ಹಂತದಲ್ಲಿರಬೇಕು ಹಾಗೂ ಸಾಲ ಪಡೆದಿರುವ ಮತ್ತು ಸಾಲ ಪಡೆಯದ ಇಬ್ಬರೂ ರೈತರು ಈ ವಿಮೆಗೆ ಒಳಪಡಬಹುದು. ಆದರೆ, ನೋಂದಣಿ ಮಾಡಲು ಉದ್ದೇಶಿಸಿರುವ ಬೆಳೆಯು ಹಿಂದಿನ ವರ್ಷಗಳ ಅಥವಾ ಮುಂಗಾರಿನ ಬೆಳೆ ಸಮೀಕ್ಷೆಯಲ್ಲಿ ಕಂಡುಬರದಿದ್ದರೆ ಅಂತಹ ಬೆಳೆಗಳ ನೋಂದಣಿಗೆ ಅನುಮತಿ ಇರುವುದಿಲ್ಲ.
ಅರ್ಹ ರೈತರು ಪ್ರಸ್ತುತ ಸಾಲಿನ ಪಹಣಿ ಪತ್ರಿಕೆ, ಎಫ್.ಐ.ಡಿ ಸಂಖ್ಯೆ, ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಪುಸ್ತಕ (ಆಧಾರ್ ಜೋಡಣೆಯಾಗಿ ಎನ್.ಪಿ.ಸಿ.ಐ ಸಕ್ರಿಯವಾಗಿರಬೇಕು) ದಾಖಲೆಗಳೊಂದಿಗೆ ಹತ್ತಿರದ ಗ್ರಾಮ-1 ಕೇಂದ್ರ, ಬ್ಯಾಂಕುಗಳು ಅಥವಾ ಸಿ.ಎಸ್.ಸಿ ಕೇಂದ್ರಗಳಲ್ಲಿ ವಿಮೆ ಯೋಜನೆಗೆ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಹತ್ತಿರದ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳು ಅಥವಾ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.