ಬೆಂಗಳೂರು: ಲಂಚಕ್ಕೆ ಬೇಡಿಕೆ ಇಟ್ಟಿದ್ದಕ್ಕೆ ಮತ್ತು ಸ್ವೀಕರಿಸುವುದಕ್ಕೆ ಸಾಕ್ಷ್ಯ ಕಡ್ಡಾಯ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಭ್ರಷ್ಟಾಚಾರ ಪ್ರಕರಣಗಳಲ್ಲಿ ತನಿಖಾ ಸಂಸ್ಥೆಗಳು ಸರ್ಕಾರಿ ಅಧಿಕಾರಿಗಳಿಂದ ಕೇವಲ ಹಣ ವಶಪಡಿಸಿಕೊಂಡರೆ ಅಪರಾಧ ಸಾಬೀತಾಗುವುದಿಲ್ಲ. ಆರೋಪಿಗಳು ಲಂಚಕ್ಕೆ ಬೇಡಿಕೆ ಇಟ್ಟ ಮತ್ತು ಲಂಚ ಸ್ವೀಕರಿಸಿದ ಸಾಕ್ಷ್ಯಗಳು ಕಡ್ಡಾಯವಾಗಿ ಇರಬೇಕೆಂದು ಹೈಕೋರ್ಟ್ ತಿಳಿಸಿದೆ.
ಭ್ರಷ್ಟಾಚಾರ ಪ್ರಕರಣದಲ್ಲಿ ಚಿಕ್ಕಬಳ್ಳಾಪುರದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತಮಗೆ ವಿಧಿಸಿದ ಶಿಕ್ಷೆ ರದ್ದು ಕೋರಿ ಶಿಡ್ಲಘಟ್ಟ ತಾಲೂಕು ಕಚೇರಿ ಬೆರಳಚ್ಚುಗಾರರ ಜಯಚಂದ್ರ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಸ್. ರಾಚ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಪ್ರಕರಣದಲ್ಲಿ ಜಯಚಂದ್ರರನ್ನು ಖುಲಾಸೆಗೊಳಿಸಲಾಗಿದೆ. ರೈತರೊಬ್ಬರು ಕೃಷಿಕರೆಂಬುದನ್ನು ದೃಢೀಕರಿಸಿ ಪ್ರಮಾಣ ಪತ್ರ ವಿತರಿಸಲು ಕೋರಿದಾಗ ಜಯಚಂದ್ರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು.