ಬೆಂಗಳೂರು: ನಟ ದರ್ಶನ್ ಆರೋಪಿತರಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತನಿಖಾಧಿಕಾರಿ ಪಟ್ಟಿ ಮಾಡಿರುವ ಪ್ರಾಸಿಕ್ಯೂಷನ್ ಸಾಕ್ಷಿ ಮೇಲೆ ಪ್ರಭಾವ ಬೀರುವ ಮತ್ತು ಸಾಕ್ಷ್ಯ ನಾಶ ಯತ್ನ ನಡೆದಿದೆ.
ಒತ್ತಡಕ್ಕೆ ಒಳಗಾದ ಸಾಕ್ಷಿಯೇ ನ್ಯಾಯಾಲಯದ ಮುಂದೆ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಬೆಂಗಳೂರಿನ 58ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ಪ್ರಕರಣಕ್ಕೆ ಸಂಬಂಧಿಸಿದ ಅಥವಾ ಸಂಬಂಧಪಡದ ವ್ಯಕ್ತಿಯಾಗಲಿ ಯಾವುದೇ ರೀತಿ ಸಾಕ್ಷ್ಯ ತಿರುಚಲು ಪ್ರಯತ್ನಿಸಿದರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದೆ. ಸಾಕ್ಷಿಗೆ ರಕ್ಷಣೆ ಒದಗಿಸುವಂತೆ ಪ್ರಕರಣದ ತನಿಖಾ ಅಧಿಕಾರಿಗೆ ನಿರ್ದೇಶನ ನೀಡಲಾಗಿದೆ.
49ನೇ ಸಾಕ್ಷಿಯಾಗಿರುವ ಚಿತ್ರದುರ್ಗದ ದುರ್ಗಾ ಬಾರ್ ಅಂಡ್ ರೆಸ್ಟೋರೆಂಟ್ ನ ಕ್ಯಾಶಿಯರ್ ಸಂದೀಪ್ ಮಂಗಳವಾರ ವಿಚಾರಣೆಗೆ ಹಾಜರಾಗಿದ್ದರು. ಆತನನ್ನು ಪ್ರಾಸಿಕ್ಯೂಷನ್ ಪರ ಎಸ್.ಪಿ.ಪಿ. ಪ್ರಸನ್ನಕುಮಾರ್ ಪರೀಕ್ಷೆಗೆ ಗುರಿಪಡಿಸಿದ್ದು, ಆಗ ಸಂದೀಪ್ ನನಗೆ ಪರಿಚಯವಿರುವ ಆಕರ್ಷ್ ಎಂಬ ವ್ಯಕ್ತಿ ಮೂಲಕ ದೂರವಾಣಿಯೊಂದಿಗೆ ಮಾತನಾಡಿದ ಕೆಲವು ವ್ಯಕ್ತಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡುವ ಸಾಕ್ಷ್ಯದ ಬಗ್ಗೆ ಮಾಹಿತಿ ಕೇಳಿದ್ದು, ತಾವು ಹೇಳಿದಂತೆ ಸಾಕ್ಷ್ಯ ನುಡಿಯಬೇಕು ಎಂದು ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ.