ಬಳ್ಳಾರಿ : ಜಿಲ್ಲಾದ್ಯಂತ ನಾಗರಿಕರಿಗೆ ಉತ್ತಮ ಸೇವೆಗಳನ್ನು ನೀಡುತ್ತಿರುವ ‘ಗ್ರಾಮ ಒನ್’ ಕೇಂದ್ರಗಳ ಪೈಕಿ, ಪ್ರಸ್ತುತ ಖಾಲಿ ಇರುವ ಗ್ರಾಮ ಒನ್ ಕೇಂದ್ರಕ್ಕೆ ಫ್ರಾಂಚೈಸಿಗಳನ್ನು ನೇಮಕ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಾರ್ಯಾಲಯ ತಿಳಿಸಿದೆ.
ಸರ್ಕಾರದ ಇ-ಆಡಳಿತ ಇಲಾಖೆಯ ಇಡಿಸಿಎಸ್ ನಿರ್ದೇಶನಾಲಯದ ಸೂಚನೆಯಂತೆ ಈ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಜಿಲ್ಲೆಗೆ ಒಟ್ಟು 177 ಗ್ರಾಮ ಒನ್ ಕೇಂದ್ರಗಳು ಮಂಜೂರಾಗಿದ್ದು, ಈ ಪೈಕಿ ಈಗಾಗಲೇ 167 ಕೇಂದ್ರಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ.ಉಳಿದ ಕೇಂದ್ರಗಳ ಪೈಕಿ 09 ಕೇಂದ್ರಗಳಿಗೆ ಆನ್ಲೈನ್ ಮೂಲಕ ಸ್ವೀಕರಿಸಲಾದ ಅರ್ಜಿಗಳು ಸದ್ಯ ಪರಿಶೀಲನಾ ಹಂತದಲ್ಲಿದ್ದು, ಬಾಕಿ ಇರುವ 01 ಕೇಂದ್ರಕ್ಕೆ ಹೊಸದಾಗಿ ಅರ್ಜಿ ಆಹ್ವಾನಿಸಲಾಗಿದೆ.
*ಖಾಲಿ ಇರುವ ಕೇಂದ್ರದ ವಿವರ:*
ಸಂಡೂರು ತಾಲ್ಲೂಕಿನ ನರಸಿಂಗಪುರ ಗ್ರಾಮ ಪಂಚಾಯಿತಿ.ಖಾಲಿ ಇರುವ ಗ್ರಾಮ ಒನ್ ಕೇಂದ್ರದ ಸಂಪೂರ್ಣ ವಿವರಗಳನ್ನು https://sevasindhuservices.karnataka.gov.in/directApply… ವೆಬ್ಸೈಟ್ನಲ್ಲಿ ನೀಡಲಾಗಿದ್ದು, ಆಸಕ್ತರು ಅಧಿಕೃತ ಲಿಂಕ್ ಬಳಸಿ ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.ಅರ್ಜಿ ಸಲ್ಲಿಸಲು ಜುಲೈ 15 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಡೂರು ತಹಶೀಲ್ದಾರರ ಕಚೇರಿ ಅಥವಾ ಜಿಲ್ಲಾಧಿಕಾರಿಗಳ ಕಾರ್ಯಾಲಯವನ್ನು ಸಂಪರ್ಕಿಸಬಹುದಾಗಿದೆ.
ಬಳ್ಳಾರಿ ಜಿಲ್ಲೆಯ ರೈತರಿಗೆ ಕೃಷಿ ಇಲಾಖೆ ಸಲಹೆ: ಮಳೆ ಕೊರತೆ ಹಿನ್ನೆಲೆ ‘ಪರ್ಯಾಯ ಬೆಳೆ ಪದ್ಧತಿ’ ಅಳವಡಿಕೆಗೆ ಕರೆ
ಬಳ್ಳಾರಿ : ಜಿಲ್ಲೆಯಲ್ಲಿ ಪ್ರಸ್ತುತ ವರ್ಷ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಿರುವ ಹಿನ್ನೆಲೆಯಲ್ಲಿ, ರೈತರು ಆತಂಕಕ್ಕೆ ಒಳಗಾಗದೆ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಶಿಫಾರಸ್ಸು ಮಾಡಿರುವ ‘ಪರ್ಯಾಯ ಬೆಳೆ ಪದ್ಧತಿ’ಯನ್ನು ಅಳವಡಿಸಿಕೊಳ್ಳಬೇಕಾಗಿ ಜಂಟಿ ಕೃಷಿ ನಿರ್ದೇಶಕ ಸೋಮಸುಂದರ್ ಅವರು ಕೋರಿದ್ದಾರೆ.
*ಮಳೆ ಅಭಾವ ಮತ್ತು ಬಿತ್ತನೆ ಕುಂಠಿತ:*
ಜಿಲ್ಲೆಯ ವಾರ್ಷಿಕ ವಾಡಿಕೆ ಮಳೆ 599.0 ಮಿ.ಮೀ ಇದ್ದು, ಜೂನ್-30ರ ಅಂತ್ಯದ ವೇಳೆಗೆ 146.1 ಮಿ.ಮೀ ವಾಡಿಕೆ ಮಳೆಗೆ ಎದುರಾಗಿ 140.7 ಮಿ.ಮೀ (ಶೇ.97) ಮಳೆಯಾಗಿದೆ. ಒಟ್ಟಾರೆ ಬಿದ್ದ ಮಳೆಯ ಪ್ರಮಾಣ ಹೆಚ್ಚಾಗಿದ್ದರೂ ಸಹ, ಮಳೆ ದಿನಗಳು ಕಡಿಮೆಯಿರುವುದು, ಹೆಚ್ಚು ದಿನಗಳ ಅಂತರ ಮತ್ತು ಸಮಪ್ರಮಾಣದ ಹಂಚಿಕೆ ಇಲ್ಲದಿರುವುದರಿಂದ ಜಿಲ್ಲೆಯಲ್ಲಿ ಕೇವಲ ಶೇ.24 ರಷ್ಟು ಮಾತ್ರ ಬಿತ್ತನೆಯಾಗಿದೆ.
ವಿಶೇಷವಾಗಿ ಸಂಡೂರು ತಾಲ್ಲೂಕಿನಲ್ಲಿ 221.6 ಮಿ.ಮೀ ವಾಡಿಕೆ ಮಳೆಗೆ ಎದುರಾಗಿ ಕೇವಲ 88.0 ಮಿ.ಮೀ ಮಳೆಯಾಗಿದ್ದು, ಶೇ. 60 ರಷ್ಟು ಮಳೆ ಕೊರತೆ ಉಂಟಾಗಿದೆ. ಉಳಿದ ತಾಲ್ಲೂಕುಗಳಲ್ಲೂ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಿದೆ.
*‘ಎಲ್ ನಿನೋ’ ಮುನ್ಸೂಚನೆ – ಪರ್ಯಾಯ ಬೆಳೆಗೆ ಒತ್ತು:*
ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಪ್ರಸ್ತುತ ವರ್ಷವು ‘ಎಲ್ ನಿನೋ’ ವರ್ಷವಾಗಿದ್ದು, ಇನ್ನು ಮುಂದೆಯೂ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಂಭವವಿದೆ. ಹಾಗಾಗಿ ರೈತರು ಸಾಂಪ್ರದಾಯಿಕ ಬೆಳೆಗಳನ್ನೇ ನಂಬಿ ಕೂರದೆ, ತಿಂಗಳು ಮತ್ತು ವಾರವಾರು ಬೀಳುವ ಮಳೆಯ ಪ್ರಮಾಣಕ್ಕೆ ಅನುಗುಣವಾಗಿ ಕೆಳಗಿನ ಪರ್ಯಾಯ ಬೆಳೆಗಳನ್ನು ಆಯ್ಕೆ ಮಾಡಿಕೊಳ್ಳಲು ಸೂಚಿಸಲಾಗಿದೆ.ಜುಲೈ 3ನೇ ಅಥವಾ 4ನೇ ವಾರದಲ್ಲಿ ಮಳೆಯಾದರೆ ತೊಗರಿ, ಶೇಂಗಾ, ಸಜ್ಜೆ, ಸೂರ್ಯಕಾಂತಿ ಮತ್ತು ನವಣೆ ಬೆಳೆಗಳನ್ನು ಬೆಳೆಯಬಹುದು. ಮೆಕ್ಕೆಜೋಳವನ್ನೂ ಸಹ ಪರಿಗಣಿಸಬಹುದು.
ಆಗಸ್ಟ್ 1ನೇ ವಾರದಲ್ಲಿ ಮಳೆಯಾದರೆ ತೊಗರಿ, ಶೇಂಗಾ, ಸಜ್ಜೆ, ಸೂರ್ಯಕಾಂತಿ, ನವಣೆ ಮತ್ತು ರಾಗಿ ಬೆಳೆಗಳಿಗೆ ಆದ್ಯತೆ ನೀಡಬೇಕು ಅಂತರಬೆಳೆ ಪದ್ಧತಿ:* ತೊಗರಿ ಮತ್ತು ಶೇಂಗಾ ಬೆಳೆಯನ್ನು (3:1) ಅನುಪಾತದಲ್ಲಿ ಅಂತರಬೆಳೆಯಾಗಿ ಬೆಳೆಯಲು ವಿಜ್ಞಾನಿಗಳು ಶಿಫಾರಸ್ಸು ಮಾಡಿದ್ದಾರೆ. ನವಣೆ ಮತ್ತು ರಾಗಿ ಬೆಳೆಗಳನ್ನೂ ಪರಿಸ್ಥಿತಿಗೆ ತಕ್ಕಂತೆ ಬಳಸಿಕೊಳ್ಳಬಹುದು. ರೈತ ಬಾಂಧವರು ಹವಾಮಾನದ ವೈಪರೀತ್ಯವನ್ನು ಸಮರ್ಥವಾಗಿ ಎದುರಿಸಲು ಈ ಶಿಫಾರಸ್ಸುಗಳನ್ನು ಕಡ್ಡಾಯವಾಗಿ ಅನುಸರಿಸಬೇಕಾಗಿ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.