ಶಿವಮೊಗ್ಗ: ಅಕ್ರಮ ಬೇಟೆ ಪ್ರಕರಣದ ಆರೋಪಿಯನ್ನು ಗುರುವಾರ ಜೈಲಿಗೆ ಕರೆದೊಯ್ಯುವಾಗ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಆಡುಗೋಡಿ ಗ್ರಾಮದ ವೆಂಕಟೇಶ್(36) ಪರಾರಿಯಾದ ಆರೋಪಿ. ಕಳ್ಳ ಬೇಟೆ ಪ್ರಕರಣವೊಂದರ ವಿಚಾರಣೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಆರೋಪಿಯನ್ನು ಹೊಸನಗರ ಜೆಎಮ್ಎಫ್ಸಿ ಕೋರ್ಟ್ ಗೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದ್ದು, ಉಪ ವಲಯ ಅರಣ್ಯಾಧಿಕಾರಿ ಸುನೀಲ್ ಡಿ. ಕುಂಬಾರ್, ಇಬ್ರಾಹಿಂ, ಅರಣ್ಯ ವೀಕ್ಷಕ ಅಯಾನ್ ಮತ್ತು ಕಳ್ಳ ಬೇಟೆ ತಡೆ ಶಿಬಿರದ ಸಿಬ್ಬಂದಿ ಚಕ್ರಪಾಣಿ ಅವರನ್ನೊಳಗೊಂಡ ಸಿಬ್ಬಂದಿ ಅರಣ್ಯ ಇಲಾಖೆ ವಾಹನದಲ್ಲಿ ಆರೋಪಿಯನ್ನು ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಕರೆದುಕೊಂಡು ಹೋಗುತ್ತಿದ್ದರು.
ಮಧ್ಯಾಹ್ನ 2 ಗಂಟೆ ವೇಳೆಗೆ ಹೊಸನಗರ ತಾಲೂಕಿನ ಬಟ್ಟೆಮಲ್ಲಪ್ಪ ಗ್ರಾಮದ ಬಳಿ ವಾಹನ ಬಂದಾಗ ನನಗೆ ಹಸಿವಾಗುತ್ತಿದೆ ಊಟ ಕೊಡಿಸಿ ಎಂದು ಆರೋಪಿ ಕೇಳಿದ್ದಾನೆ. ಜೀಪ್ ನಿಲ್ಲಿಸಿ ಇಬ್ಬರು ಸಿಬ್ಬಂದಿ ಸಮೀಪದ ಹೋಟೆಲ್ ಗೆ ಊಟ ತರಲು ಹೋದಾಗ ಆರೋಪಿ ಜೀಪ್ ನಲ್ಲಿ ಆರೋಪಿಯ ಕಾವಲಿಗೆ ಇದ್ದ ಅರಣ್ಯ ವೀಕ್ಷಕ ಅಯಾನ್ ಮತ್ತು ಚಕ್ರಪಾಣಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.
ತಕ್ಷಣವೇ ಅರಣ್ಯ ಇಲಾಖೆ ಸಿಬ್ಬಂದಿ ಬಟ್ಟೆಮಲ್ಲಪ್ಪ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಆದರೆ ಆತ ಪತ್ತೆಯಾಗಿಲ್ಲ. ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.