ಬೆಂಗಳೂರು: ನೀರಿನ ಸಂಪ್ ಸರಿಯಾಗಿ ನಿರ್ಮಿಸಿಲ್ಲ ಎಂಬ ಕಾರಣಕ್ಕೆ ಗಲಾಟೆ ನಡೆದು ಮನೆ ಮಾಲೀಕ ಗಾರೆ ಮೇಸ್ತ್ರಿಯ ತಮ್ಮನನ್ನೇ ಹತ್ಯೆ ಮಾಡಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು ಉತ್ತರ ತಾಲೂಕು ಕಿತ್ತನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ರವಿ (35) ಕೊಲೆಯಾದ ಗಾರೆ ಮೇಸ್ತ್ರಿ ಸಹೋದರ. ಮನೆಯ ಮಾಲೀಕ ದೇವರಾಜ್ ಹಾಗೂ ಆತನ ಮಗ ಸೇರಿದಂತೆ ನಾಲ್ವರು ರವಿಯನ್ನು ಕೊಲೆ ಮಾಡಿರುವ ಆರೋಪಿಗಳು.
ಮನೆಯ ನೀರಿನ ಸಂಪಿನ ಚೇಂಬರ್ ಕವರ್ ಸರಿಯಾಗಿ ಕಟ್ಟಿಲ್ಲ ಎಂದು ರವಿ ಮೇಲೆ ದೇವರಾಜು ಮತ್ತು ಗ್ಯಾಂಗ್ ಏಕಾಏಕಿ ಹಲ್ಲೆ ಮಾಡಿದೆ. ಹಲ್ಲೆಯಿಂದಾಗಿ ಗಂಭೀರವಾಗಿ ಗಾಯಗೊಂಡ ರವಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನು ವಿಕ್ಟೋರಿಯಾ ಶವಾಗಾರಕ್ಕೆ ರವಾನಿಸಿದ್ದಾರೆ. ಆರೋಪಿಗಳಾದ ದೇವರಾಜ್ ಮತ್ತು ಆತನ ಮಗ ಸೇರಿದಂತೆ ನಾಲ್ವರ ಬಂಧಿಸಿ ವಿಚಾರಣೆ ನಡೆಸಲಾಗಿದೆ.