ರಾಯಚೂರು: ತುಂಗಭದ್ರಾನದಿಗೆ ನಿರ್ಮಿಸಿದ್ದ ಸ್ಟೀಲ್ ಬ್ರಿಡ್ಜ್ ಸರಳುಗಳು ಮುರುದು ಬಿದ್ದಿದ್ದ ಘಟನೆ ರಾಯಚೂರು ಜಿಲ್ಲೆಯ ಗಿಲ್ಲೆಸುಗೂರು ಬಳಿ ಆಂಧ್ರ ಪ್ರದೇಶ ಹಾಗೂ ಕರ್ನಾಟಕ ಮಾರ್ಗದಲ್ಲಿ ನಡೆದಿದೆ.
ಇಲ್ಲಿ ತುಂಗಭದ್ರಾ ನದಿಗೆ ನಿರ್ಮಿಸಿದ ಉಕ್ಕಿನ ಸೇತುವೆಯ ಸರಳುಗಳು ತುಂಡಾಗಿ ಬಿದ್ದಿವೆ. ಇದರಿಂದ ರಾಯಚೂರು – ಮಂತ್ರಾಲಯ ಮಾರ್ಗದಲ್ಲಿ ಎರಡು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಸಂಭವಿಸಿದ್ದು, ವಾಹನ ಸವಾಅರರು ಪರದಾಡುವ ಸ್ಥಿತಿ ನಿರ್ಮಾಣವಾಯಿತು.
ರಾಯಚೂರು – ಮಂತ್ರಾಲಯಕ್ಕೆ ತೆರಳುವ ಮಾರ್ಗದ ಮುಖ್ಯ ಸೇತುವೆ ಇದಾಗಿದ್ದು, ನಿರ್ವಹಣೆ ಇಲ್ಲದೇ ತುಕ್ಕು ಹಿಡಿದು ಸೇತುವೆಯ ಸರಳುಗಳು ಮುರಿದುಬಿದ್ದಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಸ್ಥಳಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುರಿದು ಬಿದ್ದ ಸರಳನ್ನು ಪುನಃ ಜೋಡಿಸಿದ್ದಾರೆ. ಸೇತುವೆ ನಿರ್ವಹಣೆಗೆ ಮುಂದಾಗದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
2009ರಲ್ಲಿ ಸಂಭವಿಸಿದ್ದ ಮಹಾ ಪ್ರವಾಹದ ವೇಳೆ ಸೇತುವೆ ಕೊಚ್ಚಿ ಹೋಗಿತ್ತು. ಬಳಿಕ 2012ರಲ್ಲಿ ಹೊಸ ಸೇತುವೆ ಲೋಕಾರ್ಪಣೆ ಮಾಡಲಾಗಿತ್ತು. ಆದರೆ ಈಗ ಸೇತುವೆ ಸರಳುಗಳು ಮುರಿದು ಬಿದ್ದಿದ್ದು, ಆತಂಕಕ್ಕೆ ಕಾರಣವಾಗಿದೆ.