ಬಾಗಲಕೋಟೆ: ಮನುಷತ್ವವನ್ನೇ ಮರೆತ ಪತಿ ಮಹಾಶಯನೊಬ್ಬ ಪತ್ನಿಗೆ ನೇಣು ಹಾಕಿ ಆಕೆ ಸಾವು-ಬದುಕಿನ ನಡುವೆ ಪರದಾಡುತ್ತಿರುವುದನ್ನು ಅತ್ತೆ – ಮಾವನಿಗೆ ವಿಡಿಯೋ ಕಾಲ್ ಮಾಡಿ ತೋರಿಸಿದ ಅಮಾನವೀಯ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಗಲಗಲಿ ಗ್ರಾಮದಲ್ಲಿ ನಡೆದಿದೆ.
ಭಾಗ್ಯಶ್ರೀ ಜಿಗಳೂರು (23) ಪತಿಯಿಂದಲೇ ಕೊಲೆಯಾದ ಮಹಿಳೆ. ಪತಿ ಪ್ರವೀಣ್ ಜಿಗಳೂರು ಪತ್ನಿಗೆ ನೇಣು ಗಿದು ಕೊಲೆಗೈದ ಆರೋಪಿ. ಪತ್ನಿ ಮೇಲಿನ ಅನುಮಾನಕ್ಕೆಆಕೆ ಮೇಲೆ ಕಟ್ಟಿಗೆಯಿಂದ ಹೊಡೆದು ಹಲ್ಲೆ ನಡೆಸಿ ಆಕೆಗೆ ನೇಣು ಬಿಗಿದಿದ್ದ. ಬಳಿಕ ಆಕೆ ಪ್ರಾಣಸಂಕಟದಲ್ಲಿ ಒದ್ದಾಡುವುದನ್ನು ಅತ್ತೆ – ಮಾವನಿಗೆ ವಿಡಿಯೋ ಕಾಲ್ ಮಾಡಿ ತೋರಿಸಿದ್ದಾನೆ.
ಪತಿಯ ಕಾಟಕ್ಕೆ ಬೇಸತ್ತು ಪತ್ನಿ ಭಾಗ್ಯಶ್ರೀ ಎರಡು ತಿಂಗಳ ಹಿಂದೆ ತವರುಮನೆ ಮಹಾಲಿಂಗಪುರಕ್ಕೆ ಹೋಗಿದ್ದಳು. ಚೆನ್ನಾಗಿ ಬಾಳೋಣ ಎಂದು ನಂಬಿಸಿ ಜು.27 ರಂದು ಪತಿ ಗಲಗಲಿಗೆ ಕರೆತಂದಿದ್ದ . ಅದೇ ದಿನ ಸಂಜೆ ಆಕೆಯನ್ನು ಕೊಲೆ ಮಾಡಿ ವಿಕೃತಿ ಮೆರೆದಿದ್ದಾನೆ.
ಘಟನಾ ಸ್ಥಳಕ್ಕೆ ಬೀಳಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಆರೋಪಿ ಪತಿಯನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ.