ನೇಪಾಳದಲ್ಲಿ ಸಂಭವಿಸಿದ ಭೀಕರ ಜಲಪ್ರಳಯ ಮತ್ತು ಸರಣಿ ಭೂಕುಸಿತದ ನಡುವೆ 24 ವರ್ಷದ ಯುವಕನೊಬ್ಬ ಪವಾಡಸದೃಶವಾಗಿ ಜೀವ ಉಳಿಸಿಕೊಂಡ ಘಟನೆ ವರದಿಯಾಗಿದೆ. ಕಾಠ್ಮಂಡುವಿನ ಬಿದುರ್ ಪ್ರದೇಶದಲ್ಲಿ ಕಟ್ಟಡ ಕಾಮಗಾರಿ ನಡೆಸುತ್ತಿದ್ದ ಬಿಬೇಕ್ ಕುಮಾಲ್ ಎಂಬ ಕಾರ್ಮಿಕ, ಕ್ಷಣಾರ್ಧದಲ್ಲಿ ಧಾವಿಸಿ ಬಂದ ನೀರು, ಕೆಸರು ಮತ್ತು ಕಲ್ಲುಗಳ ಸಾಗರದಿಂದ ಪಾರಾಗಿ ಮಾವಿನ ಮರವನ್ನು ಗಟ್ಟಿಯಾಗಿ ಹಿಡಿದುಕೊಳ್ಳುವ ಮೂಲಕ ಬದುಕಿಳಿದಿದ್ದಾರೆ.
ಕಾಮಗಾರಿ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದಾಗ ಎದುರಾದ ಪ್ರವಾಹದ ಅಲೆಗಳನ್ನು ಕಂಡ ಸಹದ್ಯೋಗಿಗಳು ತಕ್ಷಣ ಓಡಿಹೋಗುವಂತೆ ಎಚ್ಚರಿಸಿದ್ದರು. ಆದರೆ ಆ ಕ್ಷಣದಲ್ಲೇ ಭೂಕಂಪದಂತೆ ಆರ್ಭಟಿಸಿ ಬಂದ ಭಾರಿ ಪ್ರಮಾಣದ ನೀರು ಅವರನ್ನು ಕೊಚ್ಚಿಕೊಂಡು ಹೋಯಿತು. ಕೆಸರು ಮತ್ತು ಕಲ್ಲುಗಳ ನಡುವೆ ಕೊಚ್ಚಿಹೋಗುತ್ತಿದ್ದ ಬಿಬೇಕ್ ಅದೃಷ್ಟವಶಾತ್ ಪ್ರವಾಹದ ಹರಿವಿನಲ್ಲಿ ಸಿಲುಕಿದ್ದ ಮಾವಿನ ಮರ ಒಂದನ್ನು ಗಟ್ಟಿಯಾಗಿ ಅಪ್ಪಿಕೊಂಡರು. ನಾನು ಕೆಲಸ ಮಾಡುತ್ತಿದ್ದ ಕಟ್ಟಡ ಕಣ್ಣೆದುರೇ ಕೊಚ್ಚಿಹೋಯಿತು, ಮಾವಿನ ಮರ ಸಿಗದಿದ್ದರೆ ನನ್ನ ಪ್ರಾಣ ಉಳಿಯುತ್ತಿರಲಿಲ್ಲ ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಬೇಕ್ ನೆನಪಿಸಿಕೊಂಡಿದ್ದಾರೆ.
ನಂತರ ಸ್ಥಳಕ್ಕೆ ಧಾವಿಸಿದ ಪೊಲೀಸರು ಯುವಕನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಠಾತ್ ಬಂದ ಈ ಭೀಕರ ಪ್ರವಾಹಕ್ಕೆ ಕಲ್ಲು ಮತ್ತು ಮಣ್ಣಿನ ದಿಬ್ಬ ಕುಸಿದು ನದಿಗೆ ಬಿದ್ದಿದ್ದೇ ಕಾರಣ ಎನ್ನಲಾಗಿದ್ದು, ಘಟನೆಗೂ ಮುನ್ನ ಸಣ್ಣ ಪ್ರಮಾಣದ ಭೂಕಂಪನದ ಅನುಭವವೂ ಆಗಿತ್ತು. ಈ ಜಲಪ್ರಳಯದಲ್ಲಿ ನೂರಾರು ಜನರು ಸಂಕಷ್ಟಕ್ಕೆ ಸಿಲುಕಿದ್ದು, ರಕ್ಷಣಾ ಪಡೆಗಳು ಹಲವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಿವೆ.