ಬೆಂಗಳೂರು: ರಾಜ್ಯದಲ್ಲಿ ಭೂ ದಾಖಲೆಗಳ ನಿರ್ವಹಣೆಗೆ ಸಂಬಂಧಿಸಿದಂತೆ 'ಪಹಣಿ ಸೃಜನೆ'ಗೆ (ಹೊಸ ಪಹಣಿ ರಚನೆಗೆ) ಅವಕಾಶ ಕಲ್ಪಿಸುವ ಕುರಿತು ಕಂದಾಯ ಆಯುಕ್ತಾಲಯವು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿ ಮಹತ್ವದ ಸುತ್ತೋಲೆ ಹೊರಡಿಸಿದೆ.
ಇತ್ತೀಚೆಗೆ ಪಹಣಿ ಸೃಜನೆ ಕೋರಿ ಇಲಾಖೆಗೆ ಹಲವು ಪ್ರಸ್ತಾವನೆಗಳು ಸಲ್ಲಿಕೆಯಾಗುತ್ತಿದ್ದು, ಇವುಗಳಲ್ಲಿ ಹೆಚ್ಚಿನ ಪ್ರಕರಣಗಳನ್ನು 'ಪೋಡಿ ಇಂದೀಕರಣ' ಹಾಗೂ 'ಪಹಣಿ ತಿದ್ದುಪಡಿ' ತಂತ್ರಾಂಶದ ಮೂಲಕವೇ ಇತ್ಯರ್ಥಪಡಿಸಲು ಅವಕಾಶವಿದೆ. ಆದ್ದರಿಂದ ಪ್ರತಿಯೊಂದಕ್ಕೂ ಹೊಸದಾಗಿ ಪಹಣಿ ಸೃಜನೆ ಮಾಡುವ ಅಗತ್ಯವಿಲ್ಲ ಎಂದು ಕಂದಾಯ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.
ಯಾವ ಸಂದರ್ಭಗಳಲ್ಲಿ ಪಹಣಿ ಸೃಜನೆ ಅಗತ್ಯವಿಲ್ಲ?
ಮೂಲ ಸರ್ವೇ ನಂಬರ್ ಲಭ್ಯವಿದ್ದಾಗ: ಭೂಮಿ ತಂತ್ರಾಂಶದಲ್ಲಿ ಈಗಾಗಲೇ ಮೂಲ ಸರ್ವೇ ನಂಬರ್ ಲಭ್ಯವಿದ್ದರೆ, ಹಿಸ್ಸಾಗಳನ್ನು ಒಟ್ಟುಗೂಡಿಸಿ, ಪಹಣಿ ತಿದ್ದುಪಡಿ ತಂತ್ರಾಂಶದ (RRT Correction Module) ಮೂಲಕ ಖಾತೇದಾರರ ವಿವರ ಹಾಗೂ ವಿಸ್ತೀರ್ಣ ಸರಿಪಡಿಸಿ, ಬಳಿಕ ಪೋಡಿ ವಿಭಜನೆ ಕೈಗೊಳ್ಳಬೇಕು.
ದರಖಾಸ್ತು ಪೋಡಿ ಪ್ರಕರಣಗಳು: ಮಂಜೂರಿಯಾದ ಬಳಿಕ ಹೊಸ ಸರ್ವೇ ನಂಬರ್ಗೆ ಟಿಪ್ಪಣಿ ಮತ್ತು ಆಕಾರ್ ಬಂದ್ ಸೃಜನೆಯಾಗಿ ಪಹಣಿ ಇಂದೀಕರಣ ಬಾಕಿ ಇದ್ದರೆ, ಅದನ್ನು ಪೋಡಿ ಇಂದೀಕರಣ ತಂತ್ರಾಂಶದ ಮೂಲಕವೇ ಮಾಡಬೇಕು. ಯಾವುದೇ ಕಾರಣಕ್ಕೂ ಹೊಸದಾಗಿ ಪಹಣಿ ಸೃಜನೆ ಮಾಡಬಾರದು.
ಡಿಲೀಟ್ ಆದ ಪಹಣಿಗಳು: ಈ ಹಿಂದೆ RTC MANAGEMENT ತಂತ್ರಾಂಶದಲ್ಲಿ ಪಹಣಿ ಡಿಲೀಟ್ ಮಾಡಿದ್ದರೆ, ಮರು ಸೃಜನೆಗೆ ಅವಕಾಶವಿಲ್ಲ. ಬದಲಿಗೆ ಉಪವಿಭಾಗಾಧಿಕಾರಿಗಳ (AC) ಲಾಗಿನ್ ಮೂಲಕ 'RTC Retrieval' ಆಯ್ಕೆ ಬಳಸಿ ಪಹಣಿಯನ್ನು ಪುನರ್ ಸ್ಥಾಪಿಸಬೇಕು.
ಪಹಣಿ ಸೃಜನೆಗೆ ಯಾವಾಗ ಅವಕಾಶ?
ಕಂದಾಯ ದಾಖಲೆಗಳಲ್ಲಿ ಸರ್ವೇ ನಂಬರ್ ಹಾಗೂ ಅದರ ಹಿಸ್ಸಾ ಪಹಣಿಗಳು ಭೂಮಿ ತಂತ್ರಾಂಶದಲ್ಲಿ ಸಂಪೂರ್ಣವಾಗಿ ಲಭ್ಯವಿಲ್ಲದೇ ಇರುವ ಸಂದರ್ಭದಲ್ಲಿ ಮಾತ್ರವೇ ಜಿಲ್ಲಾಧಿಕಾರಿಗಳ ಲಾಗಿನ್ ಮೂಲಕ ಆಕಾರ್ ಬಂದ್ ನಂತರ ಹೊಸದಾಗಿ ಪಹಣಿ ಸೃಜನೆ ಮಾಡಲು ಅವಕಾಶ ನೀಡಲಾಗಿದೆ.
ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹಾಗೂ ವ್ಯಾಪ್ತಿಯ ಉಪವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರರಿಗೆ ಸೂಕ್ತ ನಿರ್ದೇಶನ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಕಂದಾಯ ಆಯುಕ್ತರು ಸೂಚಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ತಾಂತ್ರಿಕ ಸಮಸ್ಯೆಗಳೇನಾದರೂ ಎದುರಾದರೆ ಜಿಲ್ಲಾ ಭೂಮಿ ಸಮಾಲೋಚಕರನ್ನು ಸಂಪರ್ಕಿಸಲು ತಿಳಿಸಲಾಗಿದೆ.

