ಬೆಂಗಳೂರು: ರಾಜ್ಯದಲ್ಲಿ ಮುಂಬರುವ ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಲು ರಾಜ್ಯ ಚುನಾವಣಾ ಆಯೋಗ ಪೂರ್ವಭಾವಿ ಸಿದ್ಧತೆಗಳನ್ನು ಆರಂಭಿಸಿದ್ದು, ಜಿಲ್ಲಾ ವ್ಯಾಪ್ತಿಯಲ್ಲಿ ಲಭ್ಯವಿರುವ ಮತಪೆಟ್ಟಿಗೆಗಳ (ಬ್ಯಾಲೆಟ್ ಬಾಕ್ಸ್) ನಿಖರ ವಿವರವನ್ನು ತುರ್ತಾಗಿ ಸಲ್ಲಿಸುವಂತೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದೆ.
ಸರ್ಕಾರದ ಅಧಿಸೂಚನೆಯನ್ವಯ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಬ್ಯಾಲೆಟ್ ಬಾಕ್ಸ್ಗಳನ್ನು ಬಳಸಿ ನಡೆಸಬೇಕಿದೆ. ಈ ಹಿಂದೆ ಗ್ರಾಮ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ದೊಡ್ಡ ಗಾತ್ರದ ಮತಪೆಟ್ಟಿಗೆಗಳ ವರದಿಯನ್ನು ಇ-ಮೇಲ್ ಮೂಲಕ ಪಡೆಯಲಾಗಿತ್ತು. ಆದರೆ, ಇತ್ತೀಚೆಗೆ ಆಯೋಗದ ಕಾರ್ಯದರ್ಶಿಗಳು ಕೆಲವು ಜಿಲ್ಲೆಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ, ಕೆಲವೆಡೆ ಮತಪೆಟ್ಟಿಗೆಗಳನ್ನು ದಾಸ್ತಾನು ಪಟ್ಟಿಗೆ ಒಳಪಡಿಸದೆ ತಪ್ಪು ಮಾಹಿತಿ ನೀಡಿರುವುದು ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಆಯೋಗ, ಗ್ರಾಮ ಪಂಚಾಯಿತಿ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಸಾರ್ವತ್ರಿಕ ಚುನಾವಣೆಗಳಿಗೆ ಅಗತ್ಯವಿರುವ ಎಲ್ಲ ಮತಪೆಟ್ಟಿಗೆಗಳ ಸಮಗ್ರ ವಿವರವನ್ನು ಆಯೋಗ ನೀಡಿರುವ ನಮೂನೆ 1 ರಿಂದ 4 ರಲ್ಲಿ ಭರ್ತಿ ಮಾಡಿ ಕಳುಹಿಸಬೇಕು ಎಂದು ಸೂಚಿಸಿದೆ.
ಮುಂಬರುವ ಸಾರ್ವತ್ರಿಕ ಚುನಾವಣೆಗಳ ಸಿದ್ಧತೆಗೆ ಇದು ಅತ್ಯಂತ ನಿರ್ಣಾಯಕ ವಿಷಯವಾಗಿರುವುದರಿಂದ, ಇದನ್ನು "ಅತೀ ಜರೂರು" ಎಂದು ಪರಿಗಣಿಸಿ ಯಾವುದೇ ವಿಳಂಬಕ್ಕೆ ಆಸ್ಪದ ನೀಡದೆ ಸೆಪ್ಟೆಂಬರ್ 11, 2026ರ ಒಳಗೆ ತಪ್ಪದೇ ವರದಿ ಸಲ್ಲಿಸುವಂತೆ ಆಯೋಗದ ಉಪನಿರ್ದೇಶಕರು ಆದೇಶ ಹೊರಡಿಸಿದ್ದಾರೆ.


