ಸಾಗರ: ಆನಂದಪುರ ಹೋಬಳಿಯ ನಾನಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದಶಕಗಳಿಂದ ನೆಲೆಸಿರುವ ಪರಿಶಿಷ್ಟ ಜಾತಿ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ಬಡ ಕುಟುಂಬಗಳಿಗೆ ಹಕ್ಕುಪತ್ರ ದೊರಕಿಸಿಕೊಡುವ ಹೋರಾಟದಲ್ಲಿ ದಲಿತ ಸಂಘರ್ಷ ಸಮಿತಿಯು (ಡಿಎಸ್ಎಸ್) ಮುಂಚೂಣಿಯಲ್ಲಿ ನಿಲ್ಲಲಿದೆ ಎಂದು ಡಿಎಸ್ಎಸ್ ರಾಜ್ಯ ಸಂಘಟನಾ ಸಂಚಾಲಕ ಭರಮಪ್ಪ ಸ್ಪಷ್ಟಪಡಿಸಿದ್ದಾರೆ.
ಹೋರಾಟಕ್ಕೆ ಧುಮುಕಲು ಕಾರಣವಾದ ವಸ್ತುಸ್ಥಿತಿ
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆನಂದಪುರ ವ್ಯಾಪ್ತಿಯ ಯಡೇಹಳ್ಳಿಯಲ್ಲಿ ಮೂರ್ನಾಲ್ಕು ತಲೆಮಾರುಗಳಿಂದ ಸುಮಾರು ಎಪ್ಪತ್ತೆಂಬತ್ತು ವರ್ಷಗಳಿಂದ ಬಡವರು ವಾಸಿಸುತ್ತಿದ್ದಾರೆ. ಹಾಗೆಯೇ ಆಜಾದ್ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುರುಗಾಮಠ ಹಾಗೂ ಮಲಂದೂರು ಪಂಚಾಯಿತಿಯ ದಾಸನಕೊಪ್ಪ ಗ್ರಾಮಗಳಲ್ಲಿಯೂ ಸೇರಿ ಒಟ್ಟು ನೂರ ಎಪ್ಪತ್ತಕ್ಕೂ ಹೆಚ್ಚು ಕುಟುಂಬಗಳು ನೆಲೆಸಿವೆ. ಆದರೆ ಈ ಜಾಗಗಳು ಖಾಸಗಿ ವ್ಯಕ್ತಿಗಳ ಹೆಸರಿನಲ್ಲಿರುವುದರಿಂದ ಇಲ್ಲಿನ ನಿವಾಸಿಗಳಿಗೆ ಯಾವುದೇ ಹಕ್ಕುಪತ್ರವಾಗಲಿ, ಮೂಲಭೂತ ಸೌಕರ್ಯಗಳಾಗಲಿ ಸಿಕ್ಕಿಲ್ಲ. ಈ ಕುರಿತು ತಹಶೀಲ್ದಾರ್ ಅವರಿಗೆ ದಾಖಲೆ ಸಮೇತ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆದ್ದರಿಂದಲೇ ಇತ್ತೀಚೆಗೆ ಮಾಜಿ ಸಚಿವ ಹರತಾಳು ಹಾಲಪ್ಪ ಹಾಗೂ ರತ್ನಾಕರ ಹೊನಗೋಡು ಡಿಎಸ್ಎಸ್ ಧರಣಿ ಸತ್ಯಾಗ್ರಹಕ್ಕೆ ದಲಿತ ಸಮುದಾಯದ ನ್ಯಾಯಯುತ ಹಕ್ಕಿನ ರಕ್ಷಣೆಗಾಗಿ ಬೆಂಬಲ ಸೂಚಿಸಿ, ಸಕ್ರಿಯವಾಗಿ ಪಾಲ್ಗೊಂಡಿತ್ತು ಎಂದು ವಿವರಿಸಿದರು.
ಡಿಎಸ್ಎಸ್ ಇತಿಹಾಸ ತಿಳಿಯದೆ ಲಘುವಾಗಿ ಮಾತನಾಡಬೇಡಿ
ಬಿಜೆಪಿ ಮುಖಂಡರೊಂದಿಗೆ ಡಿಎಸ್ಎಸ್ ಕೈಜೋಡಿಸಿರುವುದನ್ನು ಕೆಲ ಮಾಜಿ ತಾಲೂಕು ಪಂಚಾಯಿತಿ ಸದಸ್ಯರು ಹಾಗೂ ಮಾಜಿ ಎಪಿಎಂಸಿ ಅಧ್ಯಕ್ಷರು ಸಾಮಾಜಿಕ ಜಾಲತಾಣಗಳಲ್ಲಿ ಕ್ಷುಲ್ಲಕವಾಗಿ ಮತ್ತು ಅವಹೇಳನಕಾರಿಯಾಗಿ ಟೀಕಿಸಿದ್ದಾರೆ. ಅಂತಹವರಿಗೆ ಡಿಎಸ್ಎಸ್ ಇತಿಹಾಸ ತಿಳಿದಿಲ್ಲ. 1974ರಿಂದಲೂ ರಾಜ್ಯ ಹಾಗೂ ಶಿವಮೊಗ್ಗ ಜಿಲ್ಲೆಯಾದ್ಯಂತ ಪರಿಶಿಷ್ಟ ಜಾತಿ ಮತ್ತು ಶೋಷಿತ ಸಮುದಾಯಗಳ ಪರವಾಗಿ ಹತ್ತಾರು ಐತಿಹಾಸಿಕ ಹೋರಾಟಗಳನ್ನು ಕಟ್ಟಿ ಬೆಳೆಸಿದ ಘನತೆ ಈ ಸಂಘಟನೆಗಿದೆ. ದಲಿತರಿಗೆ ಅನ್ಯಾಯವಾದಾಗ ಯಾರೇ ಧ್ವನಿ ಎತ್ತಿದರೂ ಅವರೊಂದಿಗೆ ಕೈಜೋಡಿಸುವುದು ನಮ್ಮ ಕರ್ತವ್ಯ. ಅಂತಹ ಬದ್ಧತೆಯನ್ನು ಯಾರೂ ಹಗುರವಾಗಿ ಕಾಣಬಾರದು ಎಂದು ಎಚ್ಚರಿಕೆ ನೀಡಿದರು.

ಶಾಸಕರು ಸರ್ಕಾರದ ಮಟ್ಟದಲ್ಲಿ ಜಮೀನು ಪರಿವರ್ತನೆಗೆ ಶ್ರಮಿಸಲಿ
ಈ ವಿವಾದ ನ್ಯಾಯಾಲಯದಲ್ಲಿದೆ ಎಂದು ಶಾಸಕರು ಸುಮ್ಮನಾಗಬಾರದು. 94ಡಿ ನಿಯಮಾವಳಿಗಳು ಹಾಗೂ ಸರ್ಕಾರದ ಹಿಂದಿನ ಸುತ್ತೋಲೆಗಳ ಪ್ರಕಾರ, ಖಾಸಗಿ ಜಾಗಗಳಲ್ಲಿ ಹತ್ತಕ್ಕೂ ಹೆಚ್ಚು ಕುಟುಂಬಗಳು ಗುಂಪಾಗಿ ವಾಸವಿದ್ದರೆ ಅಂತಹ ಭೂಮಿಯನ್ನು ಪರಿವರ್ತನೆ ಮಾಡಿ ಸರ್ಕಾರದ ವಶಕ್ಕೆ ಪಡೆದು ಬಡವರಿಗೆ ಹಕ್ಕುಪತ್ರ ನೀಡಲು ಅವಕಾಶವಿದೆ. ಶಾಸಕರು ನ್ಯಾಯಾಲಯದ ಖರ್ಚು ನೋಡಿಕೊಳ್ಳುವ ಮಾತುಗಳನ್ನಾಡುವ ಬದಲು, ವಿಧಾನಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿ ಆ ಖಾಸಗಿ ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆಯುವ ರಾಜಕೀಯ ಇಚ್ಛಾಶಕ್ತಿ ತೋರಬೇಕು.
ಆರು ತಿಂಗಳ ಗಡುವು ನೀಡಿದ ಸಂಘಟನೆ
ಪ್ರತಿಭಟನೆಯ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಉಪವಿಭಾಗಾಧಿಕಾರಿಗಳು (ಎಸಿ) ಆರು ತಿಂಗಳೊಳಗೆ ಭೂಪರಿವರ್ತನೆ ಪ್ರಕ್ರಿಯೆ ನಡೆಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ನಿಗದಿತ ಸಮಯದೊಳಗೆ ಬಡವರಿಗೆ ನ್ಯಾಯಯುತ ಹಕ್ಕುಪತ್ರ ದೊರೆಯದಿದ್ದರೆ, ಮುಂಬರುವ ದಿನಗಳಲ್ಲಿ ತಾಲೂಕಿನಾದ್ಯಂತ ಮತ್ತಷ್ಟು ಉಗ್ರ ಸ್ವರೂಪದ ಹೋರಾಟ ರೂಪಿಸಲಾಗುವುದು ಎಂದು ತಿಳಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಡಿಎಸ್ಎಸ್ ಸಾಗರ ತಾಲ್ಲೂಕು ಸಂಚಾಲಕ ರೇವಪ್ಪ ಹೊಸಕೊಪ್ಪ, ನಗರ ಮಹಿಳಾ ಸಂಚಾಲಕಿ ಪ್ರತಿಭಾ ದೇವರಾಜ್, ಪ್ರಧಾನ ಕಾರ್ಯದರ್ಶಿ ರವಿ ಬೆಳೆಯೂರು, ಆವಿನಹಳ್ಳಿ ಹೋಬಳಿ ಸಂಚಾಲಕ ಪ್ರಶಾಂತ್ ಹೊನ್ನೇಸರ ಹಾಗೂ ನಗರ ಸಂಚಾಲಕ ಕೆ.ಎಸ್. ಮೊಹಮ್ಮದ್ ಉಪಸ್ಥಿತರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು