ಸಾಗರ: ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದ ಸಂಘಟನೆಯಲ್ಲ. ತಾಲ್ಲೂಕಿನಲ್ಲಿ ಪಕ್ಷಾತೀತವಾಗಿ ಬಡವರು, ದಲಿತರು ಹಾಗೂ ಶೋಷಿತರ ಪರವಾಗಿ ಸಂಘಟನೆ ನಿಲ್ಲುತ್ತದೆಯೇ ಹೊರತು ಬಿಜೆಪಿಯ ಕಾರ್ಯಕ್ರಮಕ್ಕೆ ಬೆಂಬಲ ನೀಡುವ ಉದ್ದೇಶ ನಮ್ಮದಲ್ಲ ಎಂದು ಡಿಎಸ್ಎಸ್ ಸಾಗರ ತಾಲ್ಲೂಕು ಸಂಚಾಲಕ ರೇವಪ್ಪ ಹೊಸಕೊಪ್ಪ ಸ್ಪಷ್ಟಪಡಿಸಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ KUWJ ಸಂಘದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡರಾದ ಚೇತನ್ರಾಜ್ ಕಣ್ಣೂರು ಹಾಗೂ ಲಾವಿಗೆರೆ ಸೋಮಶೇಖರ್ ಅವರ ಹೇಳಿಕೆಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಗ್ರಾಮಸ್ಥರ ಸಂಕಷ್ಟಕ್ಕೆ ಡಿಎಸ್ಎಸ್ ನೈತಿಕ ಬೆಂಬಲ
ನಾಲ್ಕು ಗ್ರಾಮಗಳ ಗ್ರಾಮಸ್ಥರು ತಮ್ಮ ಹಕ್ಕೊತ್ತಾಯಕ್ಕಾಗಿ ಧ್ಯಾನ-ಪ್ರಾರ್ಥನೆ ಹಾಗೂ ಹೋರಾಟ ಹಮ್ಮಿಕೊಂಡಿದ್ದರು. ಆ ಗ್ರಾಮಗಳ ಜನರು ನಮ್ಮ ಕಚೇರಿಗೆ ಬಂದು ತಮ್ಮ ಅಳಲು ತೋಡಿಕೊಂಡು ಬೆಂಬಲ ಕೋರಿದ್ದರಿಂದ ನಾವು ಅವರ ಪರವಾಗಿ ನಿಂತೆವು. ಆದರೆ ಕಾಂಗ್ರೆಸ್ ಮುಖಂಡ ಚೇತನ್ರಾಜ್ ಅವರು ಡಿಎಸ್ಎಸ್ ಬಿಜೆಪಿಗೆ ಬೆಂಬಲ ನೀಡಿದೆ ಎಂದು ಆರೋಪಿಸಿರುವುದು ಸರಿಯಲ್ಲ. ಹಿಂದೆ ಕಸ್ತೂರಿ ರಂಗನ್ ವರದಿ ವಿರೋಧಿಸಿ ಸಹಕಾರ ಸಂಘಗಳು ಹೋರಾಟ ನಡೆಸಿದಾಗ ಇದೇ ಚೇತನ್ರಾಜ್ ಅವರು ಬೆಂಬಲ ಕೇಳಿದ್ದರು; ಅಂದು ಎಲ್ಲ ಪಕ್ಷಗಳ ಜೊತೆಗೂಡಿ ನಾವೂ ಬೆಂಬಲ ವ್ಯಕ್ತಪಡಿಸಿದ್ದೆವು. ಹೀಗಿರುವಾಗ ಈಗ ಇಂತಹ ಆಧಾರರಹಿತ ಆರೋಪ ಮಾಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಹೇಳಿದರು.


ಶಾಸಕರು ಹಕ್ಕುಪತ್ರ ಕೊಡಿಸಿ ಬದ್ಧತೆ ತೋರಲಿ
ಶಾಸಕ ಬೇಳೂರು ಗೋಪಾಲಕೃಷ್ಣ ಹಾಗೂ ಕಾಂಗ್ರೆಸ್ ಪಕ್ಷದ ಬಗ್ಗೆ ತಮಗೆ ವೈಯಕ್ತಿಕವಾಗಿ ಅಪಾರ ಗೌರವವಿದೆ. ಬಡವರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತರು ವಾಸಿಸುತ್ತಿರುವ ಈ ನಾಲ್ಕು ಗ್ರಾಮಗಳ ಜನರಿಗೆ ನ್ಯಾಯ ಒದಗಿಸುವ ನಿಜವಾದ ಕಾಳಜಿ ಶಾಸಕರಿಗಿದ್ದರೆ, ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರೊಂದಿಗೆ ನೇರವಾಗಿ ಮಾತನಾಡಿ ತಕ್ಷಣವೇ ಹಕ್ಕುಪತ್ರ ಕೊಡಿಸುವ ಕೆಲಸ ಮಾಡಲಿ. ರತ್ನಾಕರ್ ಹೊನಗೋಡು ಅವರ ವಿರುದ್ಧ ಮಾತನಾಡುವುದನ್ನು ಬಿಟ್ಟು, ನೂರಾರು ವರ್ಷಗಳಿಂದ ನೆಲೆಸಿರುವ ಬಡ ಜನರಿಗೆ ಸರ್ಕಾರದಿಂದ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಶಾಸಕರು ಕಾರ್ಯಪ್ರವೃತ್ತರಾಗಬೇಕು ಎಂದು ಆಗ್ರಹಿಸಿದರು.
ಲಾವಿಗೆರೆ ಸೋಮಶೇಖರ್ ಹೇಳಿಕೆಗೆ ಕಟು ಎಚ್ಚರಿಕೆ
ಹೋರಾಟಗಾರ ರತ್ನಾಕರ್ ಅವರು ಯಾವುದೇ ಪಕ್ಷದ ಹಂಗಿಲ್ಲದೆ ಬಡವರ ಪರವಾಗಿ ಹೋರಾಟ ನಡೆಸುತ್ತಿದ್ದಾರೆ. ಅವರ ವಿರುದ್ಧ ಮಾಜಿ ತಾಪಂ ಸದಸ್ಯ ಲಾವಿಗೆರೆ ಸೋಮಶೇಖರ್ ವೈಯಕ್ತಿಕವಾಗಿ ಮಾತನಾಡಿರುವುದು ಖಂಡನೀಯ. ಮಲಂದೂರು ಸರ್ವೇ ನಂಬರ್ನಲ್ಲಿರುವ ಗ್ರಾಮಠಾಣ ಜಾಗಕ್ಕೆ ಕಾಂಗ್ರೆಸ್ ಮುಖಂಡರೇ ಬೇಲಿ ಹಾಕಿರುವ ವಿಚಾರ ಜನರಿಗೆ ಗೊತ್ತಿದೆ. ಇಂತಹ ಕೃತ್ಯಗಳನ್ನು ಮುಚ್ಚಿಟ್ಟು ಬಡವರ ಪರ ನಿಲ್ಲುವವರ ವಿರುದ್ಧ ನಾಲಿಗೆ ಹದ್ದುಮೀರಿ ಮಾತನಾಡಿದರೆ ಮುಂದಿನ ದಿನಗಳಲ್ಲಿ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ರೇವಪ್ಪ ಹೊಸಕೊಪ್ಪ ಎಚ್ಚರಿಕೆ ನೀಡಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಡಿಎಸ್ಎಸ್ ರಾಜ್ಯ ಸಂಚಾರ ಭರಮಪ್ಪ, ನಗರ ಮಹಿಳಾ ಸಂಚಾಲಕಿ ಪ್ರತಿಭಾ ದೇವರಾಜ್, ಪ್ರಧಾನ ಕಾರ್ಯದರ್ಶಿ ರವಿ ಬೆಳೆಯೂರು, ಆವಿನಹಳ್ಳಿ ಹೋಬಳಿ ಸಂಚಾಲಕ ಪ್ರಶಾಂತ್ ಹೊನ್ನೇಸರ ಹಾಗೂ ನಗರ ಸಂಚಾಲಕ ಕೆ.ಎಸ್. ಮೊಹಮ್ಮದ್ ಉಪಸ್ಥಿತರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..