ಬೆಂಗಳೂರು: "ದೇವಸ್ಥಾನ, ನಾಮ ಹಾಗೂ ವಿಭೂತಿಯಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ 100 ದಿನಗಳನ್ನು ಕಳೆದಿದ್ದಾರೆ" ಎಂಬ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರ ಹೇಳಿಕೆಯು ಅವರ ರಾಜಕೀಯ ಹತಾಶೆಯ ಪರಮಾವಧಿ ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಮಂಜುನಾಥ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ (ಟ್ವಿಟರ್) ಪೋಸ್ಟ್ ಹಂಚಿಕೊಂಡಿರುವ ಅವರು, ವೈಯಕ್ತಿಕ ಧಾರ್ಮಿಕ ಆಚರಣೆಗಳನ್ನು ರಾಜಕೀಯ ಲಾಭಕ್ಕಾಗಿ ಟೀಕೆಯ ವಸ್ತುವನ್ನಾಗಿಸಿಕೊಳ್ಳುತ್ತಿರುವ ಬಿಜೆಪಿ ನಾಯಕರ ನಡವಳಿಕೆಯನ್ನು ನೈಜ ಹಿಂದೂಗಳು ಎಂದಿಗೂ ಕ್ಷಮಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಧಾರ್ಮಿಕ ನಂಬಿಕೆಗಳನ್ನು ಅಪಹಾಸ್ಯ ಮಾಡುವುದು ಸರಿಯೇ?
ಆರ್. ಅಶೋಕ್ ಹಾಗೂ ಬಿಜೆಪಿ ವಿರುದ್ಧ ನೇರ ಪ್ರಶ್ನೆಗಳನ್ನು ಎಸೆದಿರುವ ಯುವ ಕಾಂಗ್ರೆಸ್ ಅಧ್ಯಕ್ಷರು, "ದೇವಸ್ಥಾನಕ್ಕೆ ಭೇಟಿ ನೀಡುವುದು, ನಾಮ ಹಾಗೂ ವಿಭೂತಿ ಧರಿಸುವುದರ ಬಗ್ಗೆ ಬಿಜೆಪಿಯವರಿಗೆ ಯಾಕೆ ಇಷ್ಟು ಅಸಡ್ಡೆ? ಸರ್ಕಾರದ ಆಡಳಿತ ಅಥವಾ ಅಭಿವೃದ್ಧಿ ವಿಚಾರಗಳಲ್ಲಿ ಟೀಕೆ ಮಾಡಲು ವಿಷಯಗಳಿದ್ದರೆ ಅದರ ಬಗ್ಗೆ ಧೈರ್ಯವಾಗಿ ಮಾತನಾಡಲಿ. ಅದನ್ನು ಬಿಟ್ಟು, ಹಿಂದೂಗಳ ಪವಿತ್ರ ಭಕ್ತಿಯ ಆಚರಣೆಗಳನ್ನೇ ವ್ಯಂಗ್ಯ ಮಾಡುವ ಮೂಲಕ ಅಶೋಕ್ ಅವರು ಯಾರನ್ನು ಮೆಚ್ಚಿಸಲು ಹೊರಟಿದ್ದಾರೆ? ಇವರ ಮಾತುಗಳೇ ಇವರೊಳಗಿನ ಹಿಂದೂ ವಿರೋಧಿ ಮನಸ್ಥಿತಿಯನ್ನು ತೋರಿಸುತ್ತಿಲ್ಲವೇ?" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿಗೆ ದೇವರು ಕೇವಲ ಚುನಾವಣಾ ವಿಷಯ: ಮಂಜುನಾಥ್ ಆರೋಪ
ಅಯೋಧ್ಯೆಯ ಶ್ರೀರಾಮನ ಹುಂಡಿಯನ್ನೇ ಕದ್ದ ಆರೋಪ ಎದುರಿಸುತ್ತಿರುವ ಪಕ್ಷದಿಂದ ಧಾರ್ಮಿಕ ಶ್ರದ್ಧೆ ಹಾಗೂ ನೈಜ ಭಕ್ತಿಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದಿರುವ ಮಂಜುನಾಥ್, ಬಿಜೆಪಿಯವರಿಗೆ ದೇವಾಲಯ, ನಾಮ ಮತ್ತು ವಿಭೂತಿಗಳು ಕೇವಲ ಚುನಾವಣೆ ಬಂದಾಗ ಮತ ಗಳಿಸುವ ಸರಕಾಗಿರುವುದು ದುರ್ದೈವದ ಸಂಗತಿ ಎಂದು ಟೀಕಿಸಿದ್ದಾರೆ.
"ಬಿಜೆಪಿ ನಾಯಕರು ಮೊದಲು ತಮ್ಮ ಕಣ್ಣಿನ ಕಾಮಾಲೆ ರೋಗದ ಹಳದಿ ಕನ್ನಡಕವನ್ನು ಕಳಚಿ ನೋಡಲಿ. ಆಗ ಡಿ.ಕೆ. ಶಿವಕುಮಾರ್ ಅವರು ಅಧಿಕಾರಾವಧಿಯ 100 ದಿನಗಳಲ್ಲಿ ಕೈಗೊಂಡಿರುವ ಜನಪರ ಅಭಿವೃದ್ಧಿ ಕಾರ್ಯಕ್ರಮಗಳು ಕಣ್ಣಿಗೆ ಕಾಣುತ್ತವೆ. ಅದನ್ನು ಮೆಚ್ಚುವ ಸೌಜನ್ಯ ತೋರಲಿ. ಕೇವಲ ರಾಜಕೀಯ ಲಾಭಕ್ಕಾಗಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಪದೇಪದೇ ಧಕ್ಕೆ ತರುವ ಕೆಲಸ ಮುಂದುವರಿಸಿದರೆ ನಾಡಿನ ಪ್ರಜ್ಞಾವಂತ ಜನತೆ ಸುಮ್ಮನಿರುವುದಿಲ್ಲ" ಎಂದು ಅವರು ಎಚ್ಚರಿಸಿದ್ದಾರೆ.
https://twitter.com/manjunathansui/status/2098723191976001818