ಬೆಂಗಳೂರು: ನಮ್ಮ ಮೆಟ್ರೋದ ಬಹುನಿರೀಕ್ಷಿತ ಗುಲಾಬಿ (ಪಿಂಕ್) ಮಾರ್ಗವು ಲೋಕಾರ್ಪಣೆಗೆ ಸಜ್ಜಾಗುತ್ತಿರುವ ಬೆನ್ನಲ್ಲೇ, ನಿಲ್ದಾಣವೊಂದರ ನಾಮಕರಣಕ್ಕೆ ಸಂಬಂಧಿಸಿದಂತೆ ಹೊಸ ಬೇಡಿಕೆಯೊಂದು ಮುನ್ನೆಲೆಗೆ ಬಂದಿದೆ. ಕಾಳೇನ ಅಗ್ರಹಾರದಿಂದ ಸಂಪರ್ಕ ಕಲ್ಪಿಸುವ ಮಾರ್ಗದ ಪ್ರಮುಖ ನಿಲ್ದಾಣವಾದ ‘ತಾವರೆಕೆರೆ’ ಮೆಟ್ರೋ ಸ್ಟೇಷನ್ಗೆ 'ಬಿಸ್ಮಿಲ್ಲಾ ನಗರ' ಎಂದು ಮರುನಾಮಕರಣ ಮಾಡುವಂತೆ ಸ್ಥಳೀಯ ನಿವಾಸಿಗಳು ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ (BMRCL) ಮನವಿ ಸಲ್ಲಿಸಿದ್ದಾರೆ.
ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಪತ್ರ
ಬಿಸ್ಮಿಲ್ಲಾ ನಗರದ ಮುಸ್ಲಿಂ ಸಮುದಾಯದ ಮುಖಂಡರು ಮತ್ತು ಸ್ಥಳೀಯ ನಿವಾಸಿಗಳ ನಿಯೋಗವು ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಿ.ಸಿ. ಜಾಫರ್ ಅವರನ್ನು ಭೇಟಿ ಮಾಡಿ ಈ ಸಂಬಂಧ ಅಧಿಕೃತ ಮನವಿ ಪತ್ರವನ್ನು ಹಸ್ತಾಂತರಿಸಿದೆ. ಪ್ರಸ್ತುತ ಗುರುತಿಸಲಾಗಿರುವ ತಾವರೆಕೆರೆ ನಿಲ್ದಾಣದ ಬದಲಿಗೆ 'ಬಿಸ್ಮಿಲ್ಲಾ ನಗರ' ಅಥವಾ 'ಬಿಸ್ಮಿಲ್ಲಾ ನಗರ ತಾವರೆಕೆರೆ' ಎಂದು ಅಧಿಕೃತವಾಗಿ ಹೆಸರು ಬದಲಾಯಿಸಬೇಕೆಂದು ಕೋರಲಾಗಿದೆ.
ಹೆಸರು ಬದಲಾವಣೆಗೆ ಸ್ಥಳೀಯರ ವಾದವೇನು?
ಈ ಮೆಟ್ರೋ ನಿಲ್ದಾಣ ಸ್ಥಾಪನೆಯಾಗಿರುವ ವ್ಯಾಪ್ತಿಯಲ್ಲಿ ಹಾಗೂ ಸುತ್ತಮುತ್ತಲಿನ ಬಡಾವಣೆಗಳಲ್ಲಿ ಮುಸ್ಲಿಂ ಜನಸಂಖ್ಯೆ ಗಣನೀಯ ಪ್ರಮಾಣದಲ್ಲಿದೆ. ಬಿಸ್ಮಿಲ್ಲಾ ನಗರದ ಸಾರ್ವಜನಿಕರಿಗೆ ಈ ನಿಲ್ದಾಣ ಅತ್ಯಂತ ಸಮೀಪ ಹಾಗೂ ಪ್ರಮುಖ ಸಂಪರ್ಕ ಕೊಂಡಿಯಾಗಿರುವುದರಿಂದ, ಸ್ಥಳೀಯ ಜನರ ಗುರುತನ್ನು ಪರಿಗಣಿಸಿ ನಿಲ್ದಾಣಕ್ಕೆ ಅದೇ ಹೆಸರಿಡುವುದು ಸೂಕ್ತ ಎಂಬುದು ನಿಯೋಗದ ವಾದವಾಗಿದೆ. ವಾಣಿಜ್ಯ ಸಂಚಾರಕ್ಕೆ ಮುಕ್ತವಾಗಲು ಸಿದ್ಧವಾಗುತ್ತಿರುವ ಪಿಂಕ್ ಲೈನ್ ಉದ್ಘಾಟನೆಗೂ ಮುನ್ನವೇ ಈ ಹೆಸರು ಬದಲಾವಣೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.