ಮಂಡ್ಯ: ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಸತತ ಸಾಲು ಸಾಲು ರಜೆಗಳು ಬಂದಿರುವ ಕಾರಣ, ರಾಜಧಾನಿ ಬೆಂಗಳೂರಿನಿಂದ ಲಕ್ಷಾಂತರ ಮಂದಿ ಒಟ್ಟಿಗೆ ತಮ್ಮ ಊರುಗಳತ್ತ ಮುಖ ಮಾಡಿದ್ದಾರೆ. ಇದರ ನೇರ ಪರಿಣಾಮವಾಗಿ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ವಾಹನ ದಟ್ಟಣೆ ಮಿತಿಮೀರಿದ್ದು, ಮಂಡ್ಯ ಜಿಲ್ಲಾ ವ್ಯಾಪ್ತಿಯ ಹೆದ್ದಾರಿಯುದ್ದಕ್ಕೂ ಭಾರಿ ಸಂಚಾರ ದಟ್ಟಣೆ (ಟ್ರಾಫಿಕ್ ಜಾಮ್) ಉಂಟಾಗಿದೆ.
ಗಣಂಗೂರು ಟೋಲ್ ಬಳಿ ಕಿಲೋಮೀಟರ್ಗಟ್ಟಲೆ ನಿಂತ ವಾಹನಗಳು
ಬೆಂಗಳೂರಿನಿಂದ ಮೈಸೂರು ಕಡೆಗೆ ಸಾಗುವ ಮಾರ್ಗದಲ್ಲಿ ಸಾವಿರಾರು ವಾಹನಗಳು ಏಕಕಾಲಕ್ಕೆ ಲಗ್ಗೆ ಇಟ್ಟ ಪರಿಣಾಮ, ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಟೋಲ್ ಪ್ಲಾಜಾ ಬಳಿ ಪರಿಸ್ಥಿತಿ ಅಸ್ತವ್ಯಸ್ತಗೊಂಡಿದೆ. ಟೋಲ್ ಕ್ರಾಸ್ ಮಾಡಲು ಸಾಧ್ಯವಾಗದೆ ಕಿಲೋಮೀಟರ್ಗಟ್ಟಲೆ ಉದ್ದಕ್ಕೆ ವಾಹನಗಳು ಸಾಲುಗಟ್ಟಿ ನಿಂತಿದ್ದು, ಗಂಟೆಗಟ್ಟಲೆ ಬಿಸಿಲಿನಲ್ಲಿ ಕಾದು ಸವಾರರು ಕಂಗಾಲಾಗಿದ್ದಾರೆ. ದಶಪಥ ಹೆದ್ದಾರಿಯ ಹಲವು ಕಡೆಗಳಲ್ಲಿ ಸಂಚಾರ ಸಂಪೂರ್ಣ ಮಂದಗತಿಯಲ್ಲಿ ಸಾಗುತ್ತಿದೆ.
ಕೊಲಂಬಿಯಾ ಸಿಗ್ನಲ್ ಬಳಿಯೂ ಸವಾರರ ಪರದಾಟ
ಹೆದ್ದಾರಿಯ ಮುಕ್ತಾಯದ ಭಾಗವಾದ ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಜಂಕ್ಷನ್ ಸಿಗ್ನಲ್ ಬಳಿಯೂ ವಾಹನಗಳು ಗುಂಪುಗೂಡಿದ್ದು, ಸಾಲು ಸಾಲು ಕಾರು, ಬಸ್ಗಳು ಮುಂದೆ ಸಾಗಲಾಗದೆ ಚಾಲಕರು ತೀವ್ರ ಹೈರಾಣಾಗಿದ್ದಾರೆ. ಹೆದ್ದಾರಿಯಿಂದ ನಗರ ಪ್ರವೇಶಿಸುವ ಜಂಕ್ಷನ್ನಲ್ಲಿ ವಾಹನಗಳು ಸಾಲುಗಟ್ಟಿ ನಿಂತಿರುವುದು ಸಂಚಾರವನ್ನು ಸಂಪೂರ್ಣ ಸ್ತಬ್ಧಗೊಳಿಸಿದೆ.
ಟ್ರಾಫಿಕ್ ಕ್ಲಿಯರ್ ಮಾಡಲು ಪೊಲೀಸರ ಹರಸಾಹಸ
ನಿರೀಕ್ಷೆಗೂ ಮೀರಿ ವಾಹನಗಳ ಪ್ರವಾಹ ಹರಿದುಬಂದಿರುವುದರಿಂದ ಸಂಚಾರ ನಿಯಂತ್ರಿಸಲು ಟ್ರಾಫಿಕ್ ಪೊಲೀಸರು ಅಕ್ಷರಶಃ ಹರಸಾಹಸ ಪಡುವಂತಾಗಿದೆ. ಟೋಲ್ ಬಳಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿ ವಾಹನಗಳನ್ನು ತ್ವರಿತವಾಗಿ ತೆರವುಗೊಳಿಸಲು ಪ್ರಯತ್ನಿಸುತ್ತಿದ್ದರೂ ದಟ್ಟಣೆ ನಿಯಂತ್ರಣಕ್ಕೆ ಬರುತ್ತಿಲ್ಲ. ರಜೆಯ ಖುಷಿಯಲ್ಲಿ ಊರುಗಳಿಗೆ ಹೊರಟಿದ್ದ ಸಾರ್ವಜನಿಕರು ಹಾಗೂ ಪ್ರವಾಸಿಗರು ಹೆದ್ದಾರಿಯಲ್ಲೇ ಗಂಟೆಗಟ್ಟಲೆ ಕಾಲ ಕಳೆಯುವಂತಾಗಿದೆ.
ವರದಿ: ಗಿರೀಶ್ ರಾಜ್, ಮಂಡ್ಯ