ಮಂಡ್ಯ : ರಾಜ್ಯದಲ್ಲಿ ತೀವ್ರಗೊಂಡಿರುವ ವಿದ್ಯುತ್ ಕೊರತೆಯನ್ನು ಅಧಿಕೃತವಾಗಿ ಒಪ್ಪಿಕೊಂಡಿರುವ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ (CESC) ಅಧ್ಯಕ್ಷ ಹಾಗೂ ಶ್ರೀರಂಗಪಟ್ಟಣ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ, ನಗರ ಪ್ರದೇಶಗಳಲ್ಲೂ ಪ್ರಸ್ತುತ ಒಂದು ಗಂಟೆ ಕಾಲ ಲೋಡ್ಶೆಡ್ಡಿಂಗ್ ಅನಿವಾರ್ಯವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಹಾಗೂ ದೇಶ ಎದುರಿಸುತ್ತಿರುವ ಇಂಧನ ಬಿಕ್ಕಟ್ಟಿನ ವಾಸ್ತವ ಚಿತ್ರಣವನ್ನು ಬಿಚ್ಚಿಟ್ಟಿದ್ದಾರೆ.
ಪವನ ವಿದ್ಯುತ್ ಕುಸಿತ, ಭಾರಿ ಕೊರತೆ
ವಿದ್ಯುತ್ ಉತ್ಪಾದನೆಯಲ್ಲಿ ಉಂಟಾಗಿರುವ ಭಾರಿ ಕುಸಿತವೇ ಈ ಬಿಕ್ಕಟ್ಟಿಗೆ ಮುಖ್ಯ ಕಾರಣ ಎಂದಿರುವ ಅವರು, "ರಾಜ್ಯದಲ್ಲಿ ನಿತ್ಯ ಗಾಳಿಯಿಂದಲೇ ಸುಮಾರು 3,000 ಮೆಗಾವ್ಯಾಟ್ ಪವನ ವಿದ್ಯುತ್ ಉತ್ಪಾದನೆಯಾಗುತ್ತಿತ್ತು. ಆದರೆ ಇತ್ತೀಚೆಗೆ ಗಾಳಿಯ ವೇಗ ಕಡಿಮೆಯಾಗಿ ಕೇವಲ 500 ಮೆಗಾವ್ಯಾಟ್ ಮಾತ್ರ ಉತ್ಪಾದನೆಯಾಗಿದೆ. ಏಕಾಏಕಿ ಕೈಕೊಟ್ಟಿರುವ 2,500 ಮೆಗಾವ್ಯಾಟ್ ವಿದ್ಯುತ್ ಅನ್ನು ಎಲ್ಲಿಂದ ತರಲು ಸಾಧ್ಯ? ಮಳೆ ಕೊರತೆ ಜೊತೆಗೆ ಗಾಳಿಯ ಸಮಸ್ಯೆಯೂ ಇಂಧನ ಕ್ಷೇತ್ರಕ್ಕೆ ದೊಡ್ಡ ಹೊಡೆತ ನೀಡಿದೆ" ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಬೇರೆ ರಾಜ್ಯಗಳಿಗೆ ವಿದ್ಯುತ್ ಮರುಪಾವತಿ ಸಾಧ್ಯವಾಗಿಲ್ಲ
ಅಂತಾರಾಜ್ಯ ವಿದ್ಯುತ್ ವಿನಿಮಯ ಒಪ್ಪಂದದ ಸಂಕಷ್ಟವನ್ನು ವಿವರಿಸಿದ ಚೆಸ್ಕಾಂ ಅಧ್ಯಕ್ಷರು, "ಸಾಮಾನ್ಯವಾಗಿ ಮಳೆಗಾಲದಲ್ಲಿ ನಾವು ಅಸ್ಸಾಂ ಹಾಗೂ ಪಂಜಾಬ್ ರಾಜ್ಯಗಳಿಗೆ ಹೆಚ್ಚುವರಿ ಕರೆಂಟ್ ನೀಡುತ್ತಿದ್ದೆವು. ಪ್ರತಿಯಾಗಿ ಅವರು ಬೇಸಿಗೆಯಲ್ಲಿ ನಮಗೆ ವಿದ್ಯುತ್ ಪೂರೈಸುತ್ತಿದ್ದರು. ಆದರೆ ಈ ಬಾರಿ ನಾವು ಅವರಿಂದ ಮುಂಗಡವಾಗಿ ವಿದ್ಯುತ್ ಪಡೆದುಕೊಂಡಿದ್ದರೂ, ನಮ್ಮಲ್ಲೇ ಉತ್ಪಾದನೆ ಕುಸಿದ ಕಾರಣ ಅವರಿಗೆ ವಾಪಸ್ ನೀಡಲು ಸಾಧ್ಯವಾಗುತ್ತಿಲ್ಲ. ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲೂ (RTPS) ನಿರೀಕ್ಷಿತ ಮಟ್ಟದಲ್ಲಿ ಉತ್ಪಾದನೆಯಾಗುತ್ತಿಲ್ಲ" ಎಂದರು.
ಯೂನಿಟ್ಗೆ ₹10 ಕೊಟ್ಟು ಖರೀದಿಸಿದರೂ ಸಿಗುತ್ತಿಲ್ಲ ವಿದ್ಯುತ್
ರಾಜ್ಯಕ್ಕೆ ತುರ್ತಾಗಿ ಕನಿಷ್ಠ 2,000 ಮೆಗಾವ್ಯಾಟ್ ವಿದ್ಯುತ್ ಅಗತ್ಯವಿದ್ದರೂ, ಮಾರುಕಟ್ಟೆಯಲ್ಲಿ ಕೇವಲ 200 ಮೆಗಾವ್ಯಾಟ್ ಮಾತ್ರ ಲಭ್ಯವಾಗುತ್ತಿದೆ. ಸರ್ಕಾರವು ದುಬಾರಿ ಬೆಲೆ ತೆತ್ತು ಪ್ರತಿ ಯೂನಿಟ್ಗೆ ₹10 ರಂತೆ ಹೊರಗಿನಿಂದ ವಿದ್ಯುತ್ ಖರೀದಿ ಮಾಡುತ್ತಿದೆ. ಆದಾಗ್ಯೂ, ಮಾರುಕಟ್ಟೆಯಲ್ಲಿ ವಿದ್ಯುತ್ ಸಿಗುತ್ತಿಲ್ಲ. ಹೀಗಾಗಿ ನಗರ ಪ್ರದೇಶಗಳಲ್ಲಿ ಒಂದು ಗಂಟೆ ವಿದ್ಯುತ್ ಕಡಿತಗೊಳಿಸಿ, ಆ ಉಳಿತಾಯದ ವಿದ್ಯುತ್ ಅನ್ನು ಗ್ರಾಮೀಣ ಭಾಗದ ಕೃಷಿ ಪಂಪ್ಸೆಟ್ಗಳಿಗೆ ತ್ರಿಫೇಸ್ ಮೂಲಕ ಪೂರೈಕೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಇನ್ನೆರಡು ದಿನಗಳಲ್ಲಿ ಶೇ. 80ರಷ್ಟು ಸಮಸ್ಯೆ ಇತ್ಯರ್ಥ
ಕಳೆದ ಏಳೆಂಟು ವರ್ಷಗಳಲ್ಲಿ ಇಂತಹ ಭೀಕರ ವಿದ್ಯುತ್ ಕೊರತೆ ರಾಜ್ಯದಲ್ಲಿ ಎದುರಾಗಿರಲಿಲ್ಲ ಎಂದಿರುವ ಶಾಸಕರು, ಪರಿಸ್ಥಿತಿಯನ್ನು ಸಾರ್ವಜನಿಕರು ಅರ್ಥಮಾಡಿಕೊಳ್ಳಬೇಕೆಂದು ಮನವಿ ಮಾಡಿದರು. ಲೋಡ್ಶೆಡ್ಡಿಂಗ್ ಮಾಡಬಾರದು ಎಂಬುದು ಸರ್ಕಾರದ ದೃಢ ನಿರ್ಧಾರವಾಗಿದೆ. ಮುಂದಿನ ಎರಡು ದಿನಗಳಲ್ಲಿ ಶೇಕಡಾ 80 ರಷ್ಟು ವಿದ್ಯುತ್ ಸಮಸ್ಯೆ ಬಗೆಹರಿಯಲಿದ್ದು, ಪರಿಸ್ಥಿತಿ ಹತೋಟಿಗೆ ಬರಲಿದೆ ಎಂದು ಭರವಸೆ ನೀಡಿದರು.