ಸಾಗರ: ಇಡೀ ವಿಶ್ವದಲ್ಲೇ ಸತ್ಯವನ್ನೇ ಆಧಾರವಾಗಿಟ್ಟುಕೊಂಡು ನಿರಂತರ ಪ್ರಯೋಗಗಳನ್ನು ನಡೆಸಿದ ವಿಶಿಷ್ಟ ಚೇತನ ಮಹಾತ್ಮ ಗಾಂಧೀಜಿ ಮಾತ್ರ ಎಂದು ಖ್ಯಾತ ಕವಯತ್ರಿ ಸವಿತಾ ನಾಗಭೂಷಣ ಅಭಿಪ್ರಾಯಪಟ್ಟಿದ್ದಾರೆ.
ಸಾಗರದ ಎಸ್.ಎನ್. ನಗರದ ಭೂಮಿ ರಂಗಮನೆಯಲ್ಲಿ ಲೋಹಿಯಾ ಜನ್ಮಶತಾಬ್ಧಿ ಪ್ರತಿಷ್ಠಾನ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಹಾಗೂ ಸ್ಪಂದನ ರಂಗ ತಂಡದ ಸಂಯುಕ್ತ ಆಶ್ರಯದಲ್ಲಿ ಶನಿವಾರ ಆಯೋಜಿಸಲಾಗಿದ್ದ ಗಾಂಧೀಜಿಯವರ ಆತ್ಮಕಥನ ‘ನನ್ನ ಸತ್ಯಾನ್ವೇಷಣೆ’ ಕುರಿತ ಓದು, ಅಭಿವ್ಯಕ್ತಿ ಮತ್ತು ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಂತರಂಗದಲ್ಲೂ ಸತ್ಯವಂತಿಕೆ ಅನಿವಾರ್ಯ
ದೇವರು ಹಾಗೂ ಸತ್ಯದ ನಡುವೆ ಒಂದನ್ನು ಆರಿಸಿಕೊಳ್ಳಬೇಕಾದಾಗ ಸತ್ಯಕ್ಕೇ ಆದ್ಯತೆ ನೀಡುತ್ತೇನೆ ಎಂದಿದ್ದ ಗಾಂಧೀಜಿಯವರ ಚಿಂತನೆ ಇಂದಿನ ಕಾಲಘಟ್ಟಕ್ಕೆ ಅತ್ಯಂತ ಪ್ರಸ್ತುತವಾಗಿದೆ. ಸತ್ಯ ಕೇವಲ ಹೊರಗಿನ ಆಚರಣೆಯಾಗದೆ ಅಂತರಂಗದ ಶೋಧನೆಯಾಗಬೇಕು ಎಂದು ಅವರು ಪ್ರತಿಪಾದಿಸಿದ್ದರು. ಯಾವುದೇ ಸಮೂಹ ಮಾಧ್ಯಮಗಳಿಲ್ಲದ ಕಾಲದಲ್ಲೂ ದೇಶದ ಮೂವತ್ತಮೂರು ಕೋಟಿ ಜನರನ್ನು ಒಗ್ಗೂಡಿಸಿದ ಅವರ ನಾಯಕತ್ವ ಯುವಪೀಳಿಗೆಗೆ ಪ್ರೇರಣೆಯಾಗಬೇಕು. ನೈತಿಕ ಮತ್ತು ಭ್ರಷ್ಟಾಚಾರ ಮುಕ್ತ ಸಮಾಜದ ಕನಸು ಕಂಡಿದ್ದ ಅವರ ಆತ್ಮಕಥೆಗೆ ಶತಮಾನ ತುಂಬಿರುವ ಈ ಹೊತ್ತಿನಲ್ಲಿ, ಯುವಜನರಲ್ಲಿ ಕೃತಿಯ ಕುರಿತು ಗಂಭೀರ ಚರ್ಚೆಗಳು ನಡೆಯಬೇಕಿದೆ ಎಂದು ಹೇಳಿದರು.
ಗಾಂಧಿ ವ್ಯಕ್ತಿತ್ವಕ್ಕೆ ಧಕ್ಕೆ ತರುವ ವ್ಯವಸ್ಥಿತ ಷಡ್ಯಂತ್ರ: ಪ್ರಶ್ನಿಸುವ ಗುಣ ಬೆಳೆಯಲಿ
ಹೆಗ್ಗೋಡಿನ ಅಂಬರ ಚಿತ್ತಾರ ಸಂಸ್ಥೆಯ ಎನ್.ಎಂ. ಕುಲಕರ್ಣಿ ಮಾತನಾಡಿ, ಸಣ್ಣ ಹೆಜ್ಜೆಗಳ ಮೂಲಕವೇ ಬದುಕಿನಲ್ಲಿ ಮಹತ್ತರವಾದುದನ್ನು ಸಾಧಿಸಬಹುದು ಎಂಬ ಪಾಠ ಗಾಂಧಿ ಆತ್ಮಕತೆಯಲ್ಲಿದ್ದು, ಶಿಕ್ಷಣ ಸಂಸ್ಥೆಗಳಲ್ಲಿ ಈ ಕೃತಿಯ ನಿರಂತರ ಅಧ್ಯಯನ ನಡೆಯಬೇಕು ಎಂದರು. ಸ್ಪಂದನ ರಂಗ ತಂಡದ ರಿಯಾಜ್ ಸಾಗರ್ ಮಾತನಾಡಿ, ರಾಜಕೀಯ ಲಾಭಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಗಾಂಧೀಜಿ ಬಗ್ಗೆ ಸುಳ್ಳುಗಳನ್ನು ಹರಡಿ ಅಪಪ್ರಚಾರ ಮಾಡುವ ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ; ವಿದ್ಯಾರ್ಥಿಗಳು ಎಲ್ಲವನ್ನೂ ಕುರುಡಾಗಿ ನಂಬದೆ ವೈಚಾರಿಕವಾಗಿ ಪ್ರಶ್ನಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಗಾಂಧೀಜಿಯವರ ಆತ್ಮಕಥೆಯ ಆಯ್ದ ಭಾಗಗಳನ್ನು ವಾಚಿಸಿ, ತಮ್ಮ ವಿಚಾರಗಳನ್ನು ಹಂಚಿಕೊಂಡರು. ವೇದಿಕೆಯಲ್ಲಿ ಪ್ರಮುಖರಾದ ಎಂ.ವಿ. ಪ್ರತಿಭಾ, ಚೂಡಾಮಣಿ ರಾಮಚಂದ್ರ, ದೀಪಕ್ ಡೋಂಗ್ರೆ, ಭಾವನಾ ಮರಾಠೆ ಹಾಗೂ ನಿಖಿಲ್ ಉಪಸ್ಥಿತರಿದ್ದರು.