ಶಿವಮೊಗ್ಗ: ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಬೆಂಬಲ ಹಾಗೂ ಪ್ರೋತ್ಸಾಹ ನೀಡಿದರೆ, ಭವಿಷ್ಯದಲ್ಲಿ ಅವರು ಸಮಾಜಕ್ಕೆ ಹೆಮ್ಮೆ ತರುವಂತಹ ಮಹತ್ತರ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಪ್ರಾಂತ್ಯ ಆರ್ಯ ಈಡಿಗರ ಸಂಘದ ಅಧ್ಯಕ್ಷ ಹಾಗೂ ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಕಾರ್ಯದರ್ಶಿ ಹೆಚ್.ರವಿಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಈಡಿಗರ ಸಭಾಭವನದಲ್ಲಿ ಸಾಗರ ಪ್ರಾಂತ್ಯ ಆರ್ಯ ಈಡಿಗರ ಸಂಘದ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ಸಾಧಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹಿರಿಯ ಮುತ್ಸದ್ದಿ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶಿಕ್ಷಣದಿಂದ ಸಮುದಾಯದ ಪ್ರಗತಿ
ಹಿಂದಿನ ಕಾಲಕ್ಕೆ ಹೋಲಿಸಿದರೆ ಸಮುದಾಯದಲ್ಲಿ ಅಕ್ಷರಸ್ಥರ ಪ್ರಮಾಣ ಗಣನೀಯವಾಗಿ ವೃದ್ಧಿಸಿದೆ. ಪೋಷಕರು ತಮ್ಮ ಶ್ರಮದ ಫಲವಾಗಿ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿ ಉನ್ನತ ಹುದ್ದೆಗಳಲ್ಲಿ ಕಾಣುವ ಕನಸನ್ನು ನನಸು ಮಾಡಿಕೊಳ್ಳುತ್ತಿದ್ದಾರೆ. ಇಂತಹ ವೇದಿಕೆಗಳಲ್ಲಿ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವುದರಿಂದ ಇತರ ವಿದ್ಯಾರ್ಥಿಗಳಲ್ಲೂ ಸ್ಪರ್ಧಾತ್ಮಕ ಸ್ಪೂರ್ತಿ ಮತ್ತು ಓದಿನ ಆಸಕ್ತಿ ಹೆಚ್ಚುತ್ತದೆ ಎಂದು ರವಿಕುಮಾರ್ ತಿಳಿಸಿದರು.
ಇದೇ ವೇಳೆ ಸಮುದಾಯ ಹಾಗೂ ಸಮಾಜದ ಸರ್ವತೋಮುಖ ಏಳಿಗೆಗೆ ಶ್ರಮಿಸಿದ ಗಣ್ಯರನ್ನು ಸನ್ಮಾನಿಸಲಾಯಿತು. ಜತೆಗೆ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ 150ಕ್ಕೂ ಅಧಿಕ ಮಂದಿ ತಪಾಸಣೆ ಮಾಡಿಸಿಕೊಂಡು ಸದುಪಯೋಗ ಪಡೆದರು.
ಅತ್ಯುತ್ತಮ ಅಂಕಗಳ ಸಾಧನೆ: ಪ್ರತ್ಯೇಕ ದತ್ತಿನಿಧಿ ಸ್ಥಾಪನೆಗೆ ಕರೆ
ಪ್ರಾಸ್ತಾವಿಕವಾಗಿ ಮಾತನಾಡಿದ ಕಲಸೆ ಶಿವಪ್ಪ, ಈ ಬಾರಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಶೇ. 95ಕ್ಕಿಂತ ಹೆಚ್ಚಿನ ಅಂಕ ಪಡೆದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಮುದಾಯದಲ್ಲಿದ್ದಾರೆ. ಇವರಲ್ಲಿ ಶೇ. 97ಕ್ಕಿಂತ ಅಧಿಕ ಅಂಕಗಳಿಸಿದ ಸಾಧಕರನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಎಸ್ಎಸ್ಎಲ್ಸಿಯಲ್ಲಿ ಗರಿಷ್ಠ ಶೇ. 98.88 ಹಾಗೂ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ. 99ರಷ್ಟು ಅಂಕ ಗಳಿಸಿದ ಪ್ರತಿಭೆಗಳಿರುವುದು ಹೆಮ್ಮೆಯ ಸಂಗತಿ ಎಂದರು.
ಪ್ರತಿಭಾ ಪುರಸ್ಕಾರವನ್ನು ನಿರಂತರವಾಗಿ ನಡೆಸಿಕೊಂಡು ಹೋಗಲು ಪ್ರತ್ಯೇಕ ದತ್ತಿನಿಧಿ ರೂಪಿಸಲಾಗಿದ್ದು, ಈಗಾಗಲೇ ₹12 ಲಕ್ಷ ಸಂಗ್ರಹವಾಗಿದೆ. ಸಂಘದ ಸಾಮಾನ್ಯ ನಿಧಿಯನ್ನು ಬಳಸದೆ, ದಾನಿಗಳಿಂದ ಸಂಗ್ರಹವಾಗುವ ದತ್ತಿನಿಧಿಯ ಬಡ್ಡಿ ಹಣದಲ್ಲೇ ಪುರಸ್ಕಾರ ಮುಂದುವರಿಸುವ ಯೋಜನೆ ಹೊಂದಿದ್ದು, ಸಮುದಾಯದ ದಾನಿಗಳು ಉದಾರವಾಗಿ ನೆರವು ನೀಡುವಂತೆ ಅವರು ಮನವಿ ಮಾಡಿದರು.
ವೇದಿಕೆಯಲ್ಲಿ ಪ್ರಮುಖರಾದ ಪರಮೇಶ್ವರ ಟಿ., ಶಿವಪ್ಪ, ಟಿ.ವಿ. ಪಾಂಡುರಂಗ, ತಾರಾಮೂರ್ತಿ, ಬಿ.ಎಂ. ಮಂಜಪ್ಪ, ಕೆ. ಹೊಳೆಯಪ್ಪ, ಗಿರೀಶ್ ಕೋವಿ, ಮಹಾಬಲ ಕೌತಿ, ಅಶೋಕ ವೆಂಕಟೇಶಬೇಳೂರು, ನಾರಾಯಣಪ್ಪ, ಡಾ. ರಾಜನಂದಿನಿ ಕಾಗೋಡು, ವಿಶ್ವನಾಥ ಕುಗ್ವೆ, ಡಿ. ಗಣಪತಪ್ಪ, ತುಕಾರಾಮ ಶಿರವಾಳ, ಕಿರಣ್ ದೊಡ್ಮನೆ, ಸತೀಶ್ ನಾಯಕ್, ಆನಂದ ಭೀಮನೇರಿ, ಗಲ್ಲಿ ವೆಂಕಟೇಶ್, ಕೆ.ಎಂ. ಕರುಣಾಕರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..