ಸಾಗರ: ಕಳೆದ ಹತ್ತು-ಹನ್ನೆರಡು ದಿನಗಳಿಂದ ಸ್ಥಗಿತಗೊಂಡಿದ್ದ ಹಲ್ಕೆ-ಮುಪ್ಪಾಣೆ ನಡುವಿನ ಲಾಂಚ್ ಸೇವೆಯನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಮುತುವರ್ಜಿಯಿಂದ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಪುನರಾರಂಭಿಸಲಾಗಿದ್ದು, ಇದರ ಶ್ರೇಯಸ್ಸನ್ನು ಮಾಜಿ ಶಾಸಕ ಹರತಾಳು ಹಾಲಪ್ಪ ಕಸಿದುಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಕರೂರು ಹೋಬಳಿಯ ಕಾಂಗ್ರೆಸ್ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಲ್ಕೆ-ಮುಪ್ಪಾನೆ ಲಾಂಚ್ ಪುನರಾರಂಭದ ವೇಳೆಯಲ್ಲಿ ಸೇರಿದಂತ ಕೆಡಿಪಿ ಸದಸ್ಯ ಜಿ.ಟಿ ಸತ್ಯನಾರಾಯಣ ಕರೂರು, ತಬ್ದೂರು ದೇವರಾಜ್, ತುಮರಿ ಕಾಂಗ್ರೆಸ್ ಘಟದ ಅಧ್ಯಕ್ಷ ಓಂಕಾರ್ ಜೈನ್, ಭರತ್ ಕುಮಾರ್ ಜೈನ್, ಅಣ್ಣಪ್ಪ ಆಚಾರ್ಯ, ಸಂತೋಷ್ ಕುಮಾರ್ ಶೆಟ್ಟಿ, ಮಧು ದೇವಾಡಿ, ಸುಧಾಕರ ತುಮರಿ, ಜನ್ ಜಿ ಯುವ ಬಳಗದ ಉದಯ್ ಕುಮಾರ್ ಮತ್ತು ಗೆಳೆಯರು, ರಾಜೀವ್ ಜೈನ್ ಸೇರಿದಂತೆ ಕಾಂಗ್ರೆಸ್ ಮುಖಂಡರು ತಮ್ಮ ಆಕ್ರೋಶವನ್ನು ಹೊರ ಹಾಕಿದರು.

ಘಟನೆಯ ಹಿನ್ನೆಲೆ:
ತಾಂತ್ರಿಕ ದೋಷ ಹಾಗೂ ರಂಧ್ರ ಬಿದ್ದು ನೀರು ನುಗ್ಗುತ್ತಿದ್ದ ಕಾರಣ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಹಲ್ಕೆ-ಮುಪ್ಪಾಣೆ ಲಾಂಚ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಇಲಾಖೆಯ ಟೆಂಡರ್ ಪ್ರಕ್ರಿಯೆಯಿಂದ ಸಾರ್ವಜನಿಕರಿಗೆ ವಿಳಂಬವಾಗಬಾರದು ಎಂಬ ಕಾರಣಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ತಕ್ಷಣವೇ ದುರಸ್ತಿ ಕಾರ್ಯಕ್ಕೆ ಸೂಚನೆ ನೀಡಿದ್ದಾರೆ. ಅಲ್ಲದೆ, ನದಿ ಪಾತ್ರದ ಜನರಿಗೆ ಹಾಗೂ ಪ್ರವಾಸಿಗರಿಗೆ ತೊಂದರೆಯಾಗದಂತೆ ಹೊಳೆಬಾಗಿಲು-ಅಂಬಾರಗೋಡ್ಲು ಭಾಗದಲ್ಲಿದ್ದ 'ಶರಾವತಿ' ಹೆಸರಿನ ಪರ್ಯಾಯ ಲಾಂಚ್ ಅನ್ನು ಒಳನಾಡು ಜಲಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ ಇಲ್ಲಿಗೆ ತರಿಸಿ ಸೇವೆ ಆರಂಭಿಸಿದ್ದಾರೆ.
ಹಾಲಪ್ಪ ವಿರುದ್ಧ ಗಂಭೀರ ಆರೋಪಗಳು:
-
ಕ್ರೆಡಿಟ್ ರಾಜಕೀಯ ಮತ್ತು ಹಸಿ ಸುಳ್ಳು: ಕರೂರು ಹೋಬಳಿಯ 50ಕ್ಕೂ ಹೆಚ್ಚು ಸಾರ್ವಜನಿಕರು ಶಾಸಕರನ್ನು ಭೇಟಿ ಮಾಡಿ ಮನವಿ ಮಾಡಿದ ನಂತರವೇ ಶಾಸಕರು ಅಧಿಕಾರಿಗಳಿಗೆ ಸೂಚಿಸಿ ಪರ್ಯಾಯ ಲಾಂಚ್ ತರಿಸಿದ್ದಾರೆ. ಆದರೆ, ನಿನ್ನೆ ಮಾಧ್ಯಮಗಳ ಮುಂದೆ ಬಂದು ತಾವೇ ಲಾಂಚ್ ಬಿಡಿಸಿದ್ದಾಗಿ ಹೇಳಿಕೆ ನೀಡುತ್ತಿರುವ ಮಾಜಿ ಶಾಸಕ ಹರತಾಳು ಹಾಲಪ್ಪ ಅವರ ಮಾತು ಶುದ್ಧ ಸುಳ್ಳು ಹಾಗೂ ರಾಜಕೀಯ ಮೇಲಾಟದ ಪ್ರದರ್ಶನ ಎಂದು ಮುಖಂಡರು ಕಿಡಿಕಾರಿದ್ದಾರೆ.
-
ಕಾಗೋಡು ತಿಮ್ಮಪ್ಪರ ಅನುದಾನ: ಈ ಹಿಂದೆ ಲಾಂಚ್ ಮಂಜೂರು ಮಾಡಿಸಿದ್ದು ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪನವರು. ಆಗಿನ ಸಚಿವ ಬಾಬುರಾವ್ ಚಿಂಚನಸೂರ್ ಅವರ ಮೂಲಕ ಅನುದಾನ ಕೊಡಿಸಿ ಲಾಂಚ್ ನಿರ್ಮಿಸಲಾಗಿತ್ತು. ಆದರೆ ಹಾಲಪ್ಪನವರು ಕೇವಲ ಕತ್ತರಿ ಹಾಕಿ ಉದ್ಘಾಟನೆ ಮಾಡುವ ಕೆಲಸ ಮಾತ್ರ ಮಾಡಿದ್ದರು ಎಂದು ಜನತೆಗೆ ನೆನಪಿಸಿದರು.
-
ಲಾಂಚ್ ಸ್ಥಳಾಂತರ ವೇಳೆ ಮೌನ: ಹಾಲಪ್ಪನವರ ಅವಧಿಯಲ್ಲೇ ಸಚಿವರಾಗಿದ್ದ ಅಂಗಾರ ಅವರು ಈ ಭಾಗದ ಡಬಲ್ ಇಂಜಿನ್ ಲಾಂಚನ್ನು ಬೇರೆಡೆಗೆ ಕೊಂಡೊಯ್ಯಲು ಮುಂದಾದಾಗ ಸಾರ್ವಜನಿಕರು ಹೋರಾಟ ಮಾಡಿ ಉಳಿಸಿಕೊಂಡಿದ್ದರು. ಆಗ ಜನರ ಪರ ನಿಲ್ಲದೆ ಮೌನ ವಹಿಸಿದ್ದ ಹಾಲಪ್ಪನವರಿಗೆ ಈಗ ಜನರ ಹಿತ ನೆನಪಾಗಿದೆಯೇ ಎಂದು ಪ್ರಶ್ನಿಸಿದರು.

ಚುನಾವಣಾ ಸೋಲಿನ ಹತಾಶೆಯಿಂದಾಗಿ ಹಾಲಿ ಶಾಸಕರು ಮಾಡಿದ ಕೆಲಸಗಳಿಗೆ ಮಾಜಿ ಶಾಸಕರು ಕ್ರೆಡಿಟ್ ಪಡೆಯುವ ಚಾಳಿ ಬಿಡಬೇಕು. ಸಕಾರಾತ್ಮಕ ರಾಜಕಾರಣ ಮಾಡುವುದನ್ನು ಬಿಟ್ಟು ಇತರರು ನಿರ್ಮಿಸಿದ ಸಾಧನೆಯ ಕಿರೀಟವನ್ನು ತಾವೇಕೆ ಧರಿಸಿಕೊಳ್ಳಲು ಮುಂದಾಗುತ್ತಿದ್ದೀರಿ ಎಂದು ಪ್ರಶ್ನಿಸಿರುವ ಕಾಂಗ್ರೆಸ್ ಮುಖಂಡರು, ತಾಲ್ಲೂಕಿನ ಪ್ರಗತಿ ಮತ್ತು ಅನುದಾನದ ಕುರಿತು ಸಾರ್ವಜನಿಕ ಚರ್ಚೆಗೆ ಬರುವುದಾದರೆ ತಾವು ಸಿದ್ಧ ಎಂದು ಸವಾಲು ಹಾಕಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..