ವೆನೆಜುವೆಲಾದಲ್ಲಿ ಬುಧವಾರ ಸಂಭವಿಸಿದ ಅವಳಿ ಭೂಕಂಪಗಳಿಂದ ಭಾರೀ ಮೂಲಸೌಕರ್ಯ ಹಾನಿ ಹಾಗೂ ಜೀವಹಾನಿ ಉಂಟಾದ ಹಿನ್ನೆಲೆಯಲ್ಲಿ, ಭಾರತ ‘ಆಪರೇಶನ್ ಅಮಿಸ್ತಾದ್’ ಹೆಸರಿನ ಮಹತ್ವದ ಮಾನವೀಯ ಪರಿಹಾರ ಕಾರ್ಯಾಚರಣೆಯನ್ನು ಆರಂಭಿಸಿದೆ.
ಸ್ಪ್ಯಾನಿಷ್ ಭಾಷೆಯಲ್ಲಿ ‘ ಅಮಿಸ್ತಾದ್ ಎಂದರೆ ‘ಸ್ನೇಹ’ ಎಂಬ ಅರ್ಥ. ಈ ಕಾರ್ಯಾಚರಣೆಯ ಮೂಲಕ ಭಾರತವು ವೆನೆಜುವೆಲಾದೊಂದಿಗಿನ ದ್ವಿಪಕ್ಷೀಯ ಸ್ನೇಹ ಸಂಬಂಧವನ್ನು ಗೌರವಿಸುವುದರ ಜೊತೆಗೆ, ಸಂಕಷ್ಟದ ಸಮಯದಲ್ಲಿ ನೆರವಾಗುವ ತನ್ನ ಬದ್ಧತೆಯನ್ನು ಮತ್ತೊಮ್ಮೆ ವ್ಯಕ್ತಪಡಿಸಿದೆ.ರಕ್ಷಣಾ ಮೂಲಗಳ ಪ್ರಕಾರ, ಭಾರತೀಯ ವಾಯುಪಡೆಯ (IAF) ಎರಡು C-17 ಗ್ಲೋಬ್ಮಾಸ್ಟರ್ ವಿಮಾನಗಳು ಪರಿಹಾರ ಸಾಮಗ್ರಿ, ಭೀಷ್ಮ (BHISHM) ಕ್ಯೂಬ್ಗಳು, ಔಷಧಿಗಳು ಹಾಗೂ ವೈದ್ಯಕೀಯ ಉಪಕರಣಗಳನ್ನು ಹೊತ್ತು ವೆನೆಜುವೆಲಾಗೆ ತೆರಳಿವೆ.
ವೆನೆಜುವೆಲಾದಲ್ಲಿ ಕೇವಲ ಒಂದು ನಿಮಿಷದ ಅಂತರದಲ್ಲಿ ಎರಡು ಪ್ರಬಲ ಭೂಕಂಪಗಳು ಸಂಭವಿಸಿವೆ. ಅಲ್ಲಿನ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಇದುವರೆಗೆ 235 ಮಂದಿ ಮೃತಪಟ್ಟಿದ್ದು, 1,500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ‘ಎಕ್ಸ್’ (ಹಿಂದಿನ ಟ್ವಿಟರ್) ಸಾಮಾಜಿಕ ಜಾಲತಾಣದಲ್ಲಿ ಭಾರತ ಆರಂಭಿಸಿರುವ ಈ ಪರಿಹಾರ ಕಾರ್ಯಾಚರಣೆಗೆ ‘ಆಪರೇಶನ್ ಅಮಿಸ್ತಾದ್’ ಎಂದು ಹೆಸರಿಡಲಾಗಿದೆ ಎಂದು ಘೋಷಿಸಿದರು.
ಅವರು ತಮ್ಮ ಸಂದೇಶದಲ್ಲಿ,”ಆಪರೇಶನ್ ಅಮಿಸ್ತಾದ್ ಆರಂಭವಾಗಿದೆ. ಭಾರತೀಯ ವಾಯುಪಡೆಯ ಎರಡು C-17 ವಿಮಾನಗಳು ವೆನೆಜುವೆಲಾದ ಭೂಕಂಪ ಪರಿಹಾರ ಕಾರ್ಯಕ್ಕೆ ತುರ್ತು ನೆರವು ಹೊತ್ತು ಇಂದು ಹೊರಟಿವೆ. ಈ ನೆರವಿನಲ್ಲಿ ಭಾರತೀಯ ಸೇನೆಯ ಫೀಲ್ಡ್ ಆಸ್ಪತ್ರೆ ಘಟಕ, 35 ಟನ್ಗಿಂತ ಹೆಚ್ಚಿನ ಪರಿಹಾರ ಸಾಮಗ್ರಿ, ಔಷಧಿಗಳು, ವೈದ್ಯಕೀಯ ಉಪಕರಣಗಳು ಹಾಗೂ ಎರಡು ಭೀಷ್ಮ ಕ್ಯೂಬ್ಗಳು ಸೇರಿವೆ” ಎಂದು ತಿಳಿಸಿದ್ದಾರೆ.ಇದೇ ವೇಳೆ, 60 ಪ್ಯಾರಾ ಫೀಲ್ಡ್ ಆಸ್ಪತ್ರೆಯ ವೈದ್ಯಕೀಯ ತಂಡವನ್ನು ಹಿಂದನ್ ವಾಯುನೆಲೆಯಿಂದ ಎರಡು ಐಎಎಫ್ ವಿಮಾನಗಳ ಮೂಲಕ ವೆನೆಜುವೆಲಾಗೆ ಕಳುಹಿಸಲಾಗಿದೆ ಎಂದು ಭಾರತೀಯ ಸೇನೆ ಪ್ರಕಟಿಸಿದೆ.
ಈ ತಂಡದಲ್ಲಿ 41 ಸಿಬ್ಬಂದಿ, ಅದರಲ್ಲೂ 9 ವೈದ್ಯಾಧಿಕಾರಿಗಳು ಸೇರಿದ್ದಾರೆ. ತುರ್ತು ವೈದ್ಯಕೀಯ ಸೇವೆ, ಗಾಯಾಳುಗಳ ಚಿಕಿತ್ಸೆ, ಜೀವ ರಕ್ಷಕ ಶಸ್ತ್ರಚಿಕಿತ್ಸೆ ಹಾಗೂ ಅಗತ್ಯ ಆರೋಗ್ಯ ಸೇವೆಗಳನ್ನು ಒದಗಿಸುವ ಸಾಮರ್ಥ್ಯ ಈ ತಂಡಕ್ಕಿದೆ. ಇದಲ್ಲದೆ, ಸುಮಾರು 6 ಟನ್ ವೈದ್ಯಕೀಯ ಸಾಮಗ್ರಿ ಹಾಗೂ ಮಾನವೀಯ ಪರಿಹಾರ ವಸ್ತುಗಳನ್ನು ವಿದೇಶಾಂಗ ಸಚಿವಾಲಯ ಒದಗಿಸಿದೆ. ಭಾರತದ ‘ಆರೋಗ್ಯ ಮೈತ್ರಿ’ ಯೋಜನೆಯಡಿ ಅಭಿವೃದ್ಧಿಪಡಿಸಲಾದ ‘ಭೀಷ್ಮ ಕ್ಯೂಬ್’ ಸಹ ಈ ಕಾರ್ಯಾಚರಣೆಯ ಭಾಗವಾಗಿ ವೆನೆಜುವೆಲಾಗೆ ಕಳುಹಿಸಲಾಗಿದೆ. ಈ ಮಾನವೀಯ ನೆರವು ಕಾರ್ಯಾಚರಣೆಯ ಮೂಲಕ ಸಂಕಷ್ಟದ ಸಮಯದಲ್ಲಿ ವೆನೆಜುವೆಲಾ ಸರ್ಕಾರ ಮತ್ತು ಅಲ್ಲಿನ ಜನರೊಂದಿಗೆ ಭಾರತ ದೃಢವಾಗಿ ನಿಲ್ಲುವುದಾಗಿ ಕೇಂದ್ರ ಸರ್ಕಾರ ಪುನರುಚ್ಚರಿಸಿದೆ.