ಬೆಂಗಳೂರು: ಭಾರತದ ಮೂಲ ನಿವಾಸಿಗಳಾದ ದಲಿತರು, ಬುಡಕಟ್ಟು ಹಾಗೂ ಅಲೆಮಾರಿ ಸಮುದಾಯದವರೇ ಈ ನೆಲದ ನೈಜ ಯಜಮಾನರು ಎಂದು ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.
ನಮಗೆ ರಾಜಕೀಯ ಸ್ವಾತಂತ್ರ್ಯ ಸಿಕ್ಕಿದ್ದರೂ ಸಾಮಾಜಿಕ ಹಾಗೂ ಆರ್ಥಿಕ ಸ್ವಾತಂತ್ರ್ಯ ಇನ್ನೂ ಪೂರ್ಣ ಪ್ರಮಾಣದಲ್ಲಿ ದಕ್ಕಿಲ್ಲ ಎಂದು ಅವರು ಹೇಳಿದ್ದಾರೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಲೆಮಾರಿ, ಅರೆ ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟು ಘಟಕದ ನೂತನ ಅಧ್ಯಕ್ಷರಾಗಿ ಎಲ್ಲಪ್ಪ ಅವರು ಅಧಿಕಾರ ಸ್ವೀಕರಿಸಿದ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಾರ್ಯಕ್ರಮದ ಆರಂಭದಲ್ಲಿ ಸಮಾಜ ಸುಧಾರಕರಾದ ಬಿರ್ಸಾ ಮುಂಡಾ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಿ. ದೇವರಾಜ ಅರಸು ಅವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಲಾಯಿತು.
ಮೂಲ ನಿವಾಸಿಗಳಲ್ಲಿ ಕೀಳರಿಮೆ ಸಲ್ಲದು
ಸ್ವಾತಂತ್ರ್ಯ ಬಂದು ದಶಕಗಳು ಕಳೆದರೂ ಈ ದೇಶದ ನಾಯಕತ್ವ ಮತ್ತು ಮಾಲೀಕತ್ವ ಮೂಲ ನಿವಾಸಿಗಳ ಕೈ ತಪ್ಪಿ ಬೇರೆಯವರ ಪಾಲಾಗಿದೆ. ಸ್ವಾತಂತ್ರ್ಯ ಹೋರಾಟದ ಮೂಲ ಆಶಯವೇ ಎಲ್ಲರಿಗೂ ಸಮಪಾಲು ಮತ್ತು ಸಮಬಾಳು ನೀಡುವುದಾಗಿತ್ತು. ಅಲೆಮಾರಿ ಹಾಗೂ ಬುಡಕಟ್ಟು ಸಮುದಾಯದವರು ಯಾವುದೇ ಕಾರಣಕ್ಕೂ ಕೀಳರಿಮೆ ಬೆಳೆಸಿಕೊಳ್ಳದೆ ಸ್ವಾವಲಂಬಿಗಳಾಗಿ ಬದುಕಬೇಕು. ಈ ಸಮುದಾಯಗಳ ಸಂಸ್ಕೃತಿ ಮತ್ತು ಕಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದು, ಜಾಗತಿಕ ವೇದಿಕೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಮತದಾನದ ಹಕ್ಕು ಭವಿಷ್ಯದ ಅಸ್ತ್ರ
ಪ್ರಜಾಪ್ರಭುತ್ವ ವ್ಯವಸ್ಥೆಯೇ ಶೋಷಿತರಿಗೆ ರಕ್ಷಾಕವಚ ಎಂದ ಹರಿಪ್ರಸಾದ್, ಪ್ರಜಾಪ್ರಭುತ್ವವಿಲ್ಲದ ದೇಶಗಳಲ್ಲಿ ದುರ್ಬಲ ವರ್ಗಗಳನ್ನು ಇಂದಿಗೂ ಗುಲಾಮರಂತೆ ನೋಡಲಾಗುತ್ತಿದೆ ಎಂದು ಎಚ್ಚರಿಸಿದರು. ಐದು ವರ್ಷಕ್ಕೊಮ್ಮೆ ಸಿಗುವ ಮತದಾನದ ಹಕ್ಕನ್ನು ಮದ್ಯ ಅಥವಾ ಹಣದ ಆಮಿಷಕ್ಕೆ ಬಲಿಯಾಗಿಸಬಾರದು. ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ನ್ಯಾಯ ಒದಗಿಸುವ ನಾಯಕರಿಗೆ ಮಾತ್ರ ಮತ ನೀಡಬೇಕು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಂತೆ ಸಮುದಾಯದ ಪ್ರತಿಯೊಬ್ಬರಲ್ಲೂ ಅದ್ಭುತ ನಾಯಕತ್ವದ ಶಕ್ತಿಯಿದ್ದು, ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್ನಿಂದ ಸಾಮಾಜಿಕ ಭದ್ರತೆ
ಕಾಂಗ್ರೆಸ್ ಪಕ್ಷವು ಯಾವಾಗಲೂ ಹಿಂದುಳಿದ ಮತ್ತು ಬುಡಕಟ್ಟು ವರ್ಗಗಳ ಪರವಾಗಿ ದೃಢವಾಗಿ ನಿಂತಿದೆ. ಸೋನಿಯಾ ಗಾಂಧಿ ಹಾಗೂ ಡಾ. ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರ ಜಾರಿಗೆ ತಂದ ಅರಣ್ಯ ಹಕ್ಕು ಕಾಯ್ದೆ ಹಾಗೂ ಆಹಾರ ಭದ್ರತಾ ಕಾಯ್ದೆಗಳು ಕೋಟ್ಯಂತರ ಶೋಷಿತರಿಗೆ ಬದುಕು ಕಲ್ಪಿಸಿವೆ. ಇಂತಹ ಐತಿಹಾಸಿಕ ಯೋಜನೆಗಳನ್ನು ತಂದ ಪಕ್ಷದ ಬಾಗಿಲು ಸದಾ ಶೋಷಿತರ ಪರವಾಗಿ ತೆರೆದಿರುತ್ತದೆ ಎಂದು ತಿಳಿಸಿದ ಅವರು, ನೂತನ ಅಧ್ಯಕ್ಷ ಎಲ್ಲಪ್ಪ ಅವರ ಕಾರ್ಯವೈಖರಿಗೆ ಶುಭ ಹಾರೈಸಿದರು.