ಬೆಂಗಳೂರು: ಒಂದು ಸಿನಿಮಾ ನೂರು ದಿನ ಪೂರೈಸಿದರೆ ಬಾಕ್ಸ್ ಆಫೀಸ್ ಕಲೆಕ್ಷನ್ ಸಂಭ್ರಮವಿರುತ್ತದೆ, ಆದರೆ, ಈ ಸರ್ಕಾರದ ಆಡಳಿತದಲ್ಲಿ ಒಂದೇ ಒಂದು ಉತ್ತಮ ಯೋಜನೆಯಿಲ್ಲ; ಬದಲಾಗಿ ಕೇವಲ ಹಗರಣಗಳನ್ನು ಕೊಡಲಾಗಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಹಗರಣಗಳನ್ನೇ ಕೊಟ್ಟಿದ್ದೀರಿ. ನಿಮ್ಮ ಸಾಧನೆ ಏನು ಎಂದು ಪ್ರಶ್ನಿಸಿದರು. ‘ಭಾರತ್ ಜೋಡೋ' ಹೆಸರಿನಲ್ಲಿ ಕಾಂಗ್ರೆಸ್ ಬೂತ್ ಕಮಿಟಿಗಳಿಗೆ ತಲಾ ಹತ್ತು ಲಕ್ಷ ರೂ. ನೀಡುವ ಕಾರ್ಯಕ್ರಮ ರೂಪಿಸಿದ್ದಾರೆ. ಇದು ಕಾಂಗ್ರೆಸ್ ಕಾರ್ಯಕ್ರಮ. ಈ ಮೂಲಕ ಜನಸಾಮಾನ್ಯರ ತೆರಿಗೆ ಹಣಕ್ಕೆ ಮಾಡುತ್ತಿರುವ ದೊಡ್ಡ ದ್ರೋಹವಾಗಿದೆ ಎಂದು ದೂರಿದರು.
ಘೋಷಣೆ ಮಾಡಿ ಶೋಷಣೆ ಮಾಡಿದ ಸರಕಾರವಿದು. ಪಾರ್ಕ್ ಜಾಗ ಅನ್ಯ ಉದ್ದೇಶಕ್ಕೆ ಬಳಸಲು ಮುಂದಾಗಿದ್ದರು. ನಮ್ಮ ನಿರಂತರ ಹೋರಾಟದ ಭಯದಿಂದಾಗಿ ಹಾಗೂ ಸಚಿವರ 'ವಿಕೆಟ್' ಬೀಳುವ ಆತಂಕದಿಂದ ಸದನದಲ್ಲಿ ಮಂಜೂರಾಗಿದ್ದ ಬಿಲ್ ಅನ್ನು ಕೂಡ ಸರ್ಕಾರ ವಾಪಸ್ ಪಡೆದುಕೊಂಡಿದೆ. ಇದು ಬಿಜೆಪಿ, ವಿಪಕ್ಷಗಳ ಭಯವನ್ನು ತಿಳಿಸುತ್ತದೆ ಎಂದು ನುಡಿದರು.
ಬಿಡಿಎ, ಕೆಐಎಡಿಬಿ ಮತ್ತು ಭೂ ಹಗರಣಗಳು
ಬಿಡಿಎ, ಹೌಸಿಂಗ್ ಬೋರ್ಡ್ ಮತ್ತು ಕೆಐಎಡಿಬಿ ಗಳಲ್ಲಿ ಪಾರ್ಕ್ ಜಾಗಗಳನ್ನು ಉಳಿಸದೆ, ತಮಗೆ ಇಷ್ಟ ಬಂದಂತೆ ನಿವೇಶನಗಳಾಗಿ ಬದಲಾಯಿಸಿ ಹಂಚಿಕೆ ಮಾಡಲಾಗುತ್ತಿದೆ ಎಂದು ಆಕ್ಷೇಪಿಸಿದರು. ಕೆಐಎಡಿಬಿಯಲ್ಲಿ ಪಾರ್ಕ್ ಇರುವ ಜಾಗವನ್ನು ಲೇಔಟ್ ನಕ್ಷೆಯಲ್ಲಿಯೇ ತಿದ್ದಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆಸಲಾಗುತ್ತಿದೆ ಎಂದು ದೂರಿದರು. ಚುನಾವಣಾ ದೇಣಿಗೆ ಸಂಗ್ರಹದ ಉದ್ದೇಶದಿಂದ ಖಾತೆಗಳನ್ನು ಬದಲಾಯಿಸಲಾಗಿದ್ದು, ಬಿಡಿಎ, ಪವರ್ ಕಾರ್ಪೊರೇಷನ್ ಮತ್ತು ಕಾರ್ಮಿಕರ ಇಲಾಖೆಗಳಲ್ಲಿ ನಿರೀಕ್ಷಿತ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ಟೀಕಿಸಿದರು.
ಗೃಹ ಸಚಿವರ ವೈಫಲ್ಯ ಮತ್ತು ಕಾನೂನು ಸುವ್ಯವಸ್ಥೆ
ಗೃಹ ಸಚಿವರು ಕಾನೂನು ಸುವ್ಯವಸ್ಥೆ ಕಾಪಾಡುವುದನ್ನು ಬಿಟ್ಟು, ಕೇವಲ ಆರೆಸ್ಸೆಸ್ ಅನ್ನು ಟೀಕಿಸುವುದರಲ್ಲೇ ಸಂಪೂರ್ಣವಾಗಿ ಮಗ್ನರಾಗಿದ್ದಾರೆ. ಪೊಲೀಸ್ ಠಾಣೆಗಳು (ಉದಾಹರಣೆಗೆ ವೈಟ್ಫೀಲ್ಡ್ ಠಾಣೆ) ರಿಯಲ್ ಎಸ್ಟೇಟ್ ದಂಧೆಯ ಕೇಂದ್ರಗಳಾಗಿದ್ದು, ಸಿವಿಲ್ ಸಮಸ್ಯೆಗಳಿಗೆ ಪೊಲೀಸ್ ಠಾಣೆಗಳಲ್ಲೇ ಪಂಚಾಯಿತಿ ಮಾಡುವ ಅಕ್ರಮ ವ್ಯವಸ್ಥೆ ಸೃಷ್ಟಿಯಾಗಿದೆ. ದಲಿತ ಹೆಣ್ಮಕ್ಕಳ ಮೇಲೆ ಅತ್ಯಾಚಾರ, ಕೊಲೆಗಳಂತಹ ಗಂಭೀರ ಪ್ರಕರಣಗಳು ನಡೆಯುತ್ತಿದ್ದರೂ ಗಮನ ಹರಿಸದ ಈ ನಾಯಕರಿಗೆ, ಕನಿಷ್ಠ ಮೂರು ನಿಮಿಷದ 'ವಂದೇ ಮಾತರಂ' ಹಾಡಲು ಕೂಡ ಸಮಯಾವಕಾಶವಿಲ್ಲ ಎಂದು ದೂರಿದರು. ಈಗಿನ ಗೃಹ ಸಚಿವರನ್ನು ಆರೆಸ್ಸೆಸ್ ಉಸ್ತುವಾರಿ ಸಚಿವರನ್ನಾಗಿ ಮಾಡಿ. ಬೇರೆ ಗೃಹ ಸಚಿವರನ್ನು ನೇಮಿಸಿ ಎಂದು ಆಗ್ರಹಿಸಿದರು.
ಅಧಿಕಾರಿಗಳ ಮೇಲಿನ ದಬ್ಬಾಳಿಕೆ, ಭ್ರಷ್ಟಾಚಾರದ ಸಮರ್ಥನೆ
ಹಿಂದಿನ ಸರ್ಕಾರ 14,000 ಪೌರಕಾರ್ಮಿಕರನ್ನು ಕಾಯಂಗೊಳಿಸಿದರೆ, ಇಂದಿನ ಸಚಿವ ಕೃಷ್ಣ ಬೈರೇಗೌಡರು ಕೇವಲ ಕೆಲಸಕ್ಕೆ ಬಂದಿಲ್ಲ ಎಂಬ ನೆಪವೊಡ್ಡಿ 30 ಜನರನ್ನು ಏಕಾಏಕಿ ವಜಾ ಮಾಡಿದ್ದಾರೆ. ಭ್ರಷ್ಟಾಚಾರದ ಆರೋಪಗಳು ಬಂದಾಗ ಅಥವಾ ಇ.ಡಿ ದಾಳಿಗಳು ನಡೆದಾಗ ದಲಿತ ಕಾರ್ಡ್ ಬಳಸಿ, ಭ್ರಷ್ಟಾಚಾರಕ್ಕೆ ಜಾತಿಯ ಬಣ್ಣ ಬಳಿದು ಸಮರ್ಥಿಸಿಕೊಳ್ಳುವ ಕೀಳುಮಟ್ಟದ ರಾಜಕಾರಣ ನಡೆಯುತ್ತಿದೆ ಎಂದು ಆರೋಪಿಸಿದರು. ಅವರನ್ನು ವಜಾ ಮಾಡುತ್ತೀರಿ. ನೀವು ಮಜಾ ಮಾಡುತ್ತೀರಿ ಎಂದು ಆಕ್ಷೇಪಿಸಿದರು. ಇನ್ನೊಬ್ಬ ಸಚಿವ ಬಸವರಾಜ ರಾಯರೆಡ್ಡಿಯವರು ಅಧಿಕಾರಿಗಳು ಮಾತು ಕೇಳದೇ ಇದ್ದರೆ ಶೂಟ್ ಮಾಡುವ ಸಚಿವರು. ಮುಖ್ಯಮಂತ್ರಿಗಳೇ ಒಳ್ಳೆಯ ಶಸ್ತ್ರಾಸ್ತ್ರ ಕೊಟ್ಟಿದ್ದೀರಾ ಅವರಿಗೆ ಎಂದು ಕೇಳಿದರು.
ಪ್ರಜ್ಞಾಹೀನರ ಮಂತ್ರಿಮಂಡಲವೇ?
ಈ ಸಚಿವಸಂಪುಟವು ಪ್ರಜ್ಞಾವಂತರದೇ ಅಥವಾ ಪ್ರಜ್ಞಾಹೀನರ ಮಂತ್ರಿಮಂಡಲವೇ ಎಂಬುದು ನನಗೆ ಅರ್ಥವಾಗುತ್ತಿಲ್ಲ ಎಂದರು. ವಂದೇ ಮಾತರಂಗೆ ಕತ್ತರಿ ಹಾಕಿದ ಕ್ರಮವನ್ನೂ ಅವರು ಖಂಡಿಸಿದರು.
ಕೇಂದ್ರದ ಸೂಚನೆಗಳಿದ್ದರೂ ಮಾನ್ಯ ರಾಜ್ಯಪಾಲರ ಅನುಮತಿಯಿಲ್ಲದೆ ಅಧೀನ ಕಾರ್ಯದರ್ಶಿಗಳ ಮಟ್ಟದಲ್ಲಿ ಸಂದೀಪ್ ಅವರ ಹೆಸರಿನಲ್ಲಿ ಏಕಾಏಕಿ ಆದೇಶ ಹೊರಡಿಸುತ್ತಿರುವುದು ಆಡಳಿತ ವ್ಯವಸ್ಥೆಯ ಅರಾಜಕತೆಯನ್ನು ತೋರಿಸುತ್ತದೆ ಎಂದು ದೂರಿದರು. ಅಧೀನ ಕಾರ್ಯದರ್ಶಿ ಸಂದೀಪ್ ಅವರನ್ನು ವಜಾ ಮಾಡಲು ಆಗ್ರಹಿಸಿದರು.
ಸರ್ಕಾರದ ಈ ವೈಫಲ್ಯಗಳನ್ನು ಕೇವಲ ಭಾಷಣಕ್ಕೆ ಸೀಮಿತಗೊಳಿಸದೆ, ಪ್ರಬಲ ಹೋರಾಟದ ಮೂಲಕ ಪ್ರಶ್ನಿಸುವ ಅಗತ್ಯವಿದೆ ಎಂದರು. ಅಧಿಕಾರ ದುರುಪಯೋಗ ಮತ್ತು ಭ್ರಷ್ಟಾಚಾರವನ್ನು ತಡೆಗಟ್ಟಲು ಆಡಳಿತ ಯಂತ್ರದಲ್ಲಿ ವ್ಯವಸ್ಥಿತ ಬದಲಾವಣೆಯ ಅವಶ್ಯಕತೆಯಿದೆ ಎಂದು ನುಡಿದರು.