ಬೆಳಗಾವಿ: ಕಳೆದ ಎರಡು ತಿಂಗಳ ಹಿಂದೆ ನಿಗೂಢವಾಗಿ ಕಾಣೆಯಾಗಿದ್ದ ಮೂಡಲಗಿ ತಾಲೂಕಿನ ಕೌಜಲಗಿ ಗ್ರಾಮದ ಗೃಹಿಣಿಯೊಬ್ಬರ ನಾಪತ್ತೆ ಪ್ರಕರಣ ಭೀಕರ ಕೊಲೆಯಲ್ಲಿ ಅಂತ್ಯವಾಗಿದೆ. ಬೈಕ್ ಇಎಂಐ ಪಾವತಿಸಲು ಹಣ ನೀಡಲು ನಿರಾಕರಿಸಿದ ಕಾರಣಕ್ಕೆ ಪ್ರಿಯಕರನೇ ಆಕೆಯನ್ನು ಕಬ್ಬಿನ ಗದ್ದೆಯಲ್ಲಿ ಕತ್ತು ಹಿಸುಕಿ ಹತ್ಯೆ ಮಾಡಿರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.
ಕೌಜಲಗಿಯ ಅನ್ನಪೂರ್ಣ ಹತ್ಯೆಯಾದ ದುರ್ದೈವಿ. ಗೋಕಾಕ್ ತಾಲೂಕಿನ ಶಿಂಗಳಾಪುರ ಮೂಲದ ದಿಲೀಪ್ ಗಡಕರಿ ಎಂಬಾತನೇ ಕೊಲೆಗಡುಕ ಎಂದು ಗುರುತಿಸಲಾಗಿದ್ದು, ಪೊಲೀಸರು ಆತನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಅನೈತಿಕ ಸಂಬಂಧದ ಬೆನ್ನಲ್ಲೇ ಶುರುವಾದ ಪೀಡನೆ:
ಅನ್ನಪೂರ್ಣ ಹಾಗೂ ಸಿದ್ದಪ್ಪ ದಂಪತಿಗೆ ಇಬ್ಬರು ಮಕ್ಕಳಿದ್ದು, ಕೃಷಿ ಮಾಡಿಕೊಂಡು ಅನ್ಯೋನ್ಯವಾಗಿದ್ದರು. ನಾಲ್ಕು ವರ್ಷಗಳ ಹಿಂದೆ ಗ್ರಾಮದಲ್ಲಿ ಮನೆ ನಿರ್ಮಾಣ ಕೆಲಸಕ್ಕೆ ಬಂದಿದ್ದ ನಾಲ್ಕು ಮಕ್ಕಳ ತಂದೆಯಾಗಿದ್ದ ದಿಲೀಪ್ನೊಂದಿಗೆ ಅನ್ನಪೂರ್ಣಳಿಗೆ ಪರಿಚಯವಾಗಿ, ಅನೈತಿಕ ಸಂಬಂಧಕ್ಕೆ ತಿರುಗಿತ್ತು. ಇತ್ತೀಚೆಗೆ ಕಂತಿನ ಆಧಾರದಲ್ಲಿ ಹೊಸ ಬೈಕ್ ಖರೀದಿಸಿದ್ದ ದಿಲೀಪ್, ಅದರ ಇಎಂಐ ಕಟ್ಟಲು ಹಣ ನೀಡುವಂತೆ ಅನ್ನಪೂರ್ಣಳಿಗೆ ನಿರಂತರವಾಗಿ ಪೀಡಿಸುತ್ತಿದ್ದ. ಇದಕ್ಕೆ ಆಕೆ ಸತತವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಳು.
ಕಬ್ಬಿನ ಗದ್ದೆಯಲ್ಲಿ ಹತ್ಯೆ, ಆಭರಣ ದೋಚಿ ಎಸ್ಕೇಪ್:
ಜುಲೈ 23ರಂದು ಹಣದ ವಿಚಾರವಾಗಿ ಮಾತನಾಡಲೆಂದು ಅನ್ನಪೂರ್ಣಳನ್ನು ಊರ ಹೊರಗಿನ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡಿದ್ದ ಆರೋಪಿ ದಿಲೀಪ್, ಜಗಳ ವಿಕೋಪಕ್ಕೆ ತಿರುಗುತ್ತಿದ್ದಂತೆ ಕಬ್ಬಿನ ಗದ್ದೆಯೊಳಗೆ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಆಕೆಯ ಮೈಮೇಲಿದ್ದ ಚಿನ್ನದ ಸರ, ಓಲೆ ಹಾಗೂ ಮೊಬೈಲ್ ದೋಚಿ ಪರಾರಿಯಾಗಿದ್ದ. ಶವ ಕೊಳೆತು ಕೇವಲ ಅಸ್ಥಿಪಂಜರದ ರೂಪದಲ್ಲಿ ಪತ್ತೆಯಾಗಿದೆ.
ಮೊಬೈಲ್ ಜಾಡು ಹಿಡಿದು ಆರೋಪಿ ಬಂಧನ:
ಪತಿ ನೀಡಿದ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಅನ್ನಪೂರ್ಣಳ ಕರೆ ವಿವರಗಳನ್ನು (CDR) ಪರಿಶೀಲಿಸಿದಾಗ ಕೊನೆಯದಾಗಿ ದಿಲೀಪ್ ಜೊತೆ ಮಾತನಾಡಿದ್ದು ಬೆಳಕಿಗೆ ಬಂದಿದೆ. ಮತ್ತೊಂದೆಡೆ, ಆಕೆಯ ಮೊಬೈಲ್ಗೆ ಬೇರೊಂದು ಸಿಮ್ ಕಾರ್ಡ್ ಹಾಕಿ ಮಧ್ಯಪ್ರದೇಶದಲ್ಲಿ ಚಾಲನೆ ಮಾಡಲಾಗಿತ್ತು. ಆ ನಂಬರ್ ಬೆನ್ನತ್ತಿದಾಗ, ಕೊಲ್ಲಾಪುರದ ಸತ್ಯಪ್ಪ ಎಂಬಾತನ ಮೂಲಕ ಮೊಬೈಲ್ ಕೈಬದಲಾಗಿದ್ದು ಖಚಿತವಾಯಿತು. ಸತ್ಯಪ್ಪನನ್ನು ವಿಚಾರಿಸಿದಾಗ ದಿಲೀಪ್ ತನಗೆ ಮೊಬೈಲ್ ಕೊಟ್ಟಿದ್ದಾಗಿ ಬಾಯ್ಬಿಟ್ಟಿದ್ದಾನೆ.
ಕೂಡಲೇ ದಿಲೀಪ್ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದಾಗ, ಬೈಕ್ ಇಎಂಐ ಹಣಕ್ಕಾಗಿ ಪ್ರೇಯಸಿಯನ್ನು ಹತ್ಯೆಗೈದ ತಪ್ಪೊಪ್ಪಿಕೊಂಡಿದ್ದಾನೆ. ಬೆಳಗಾವಿ ಎಸ್ಪಿ ಕೆ. ರಾಮರಾಜನ್ ಮಾರ್ಗದರ್ಶನದಲ್ಲಿ ಪೊಲೀಸರು ಆರೋಪಿಯನ್ನು ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ರವಾನಿಸಿದ್ದಾರೆ. ಕ್ಷುಲ್ಲಕ ಹಣದಾಸೆ ಹಾಗೂ ಅಕ್ರಮ ಸಂಬಂಧದ ಪರಿಣಾಮವಾಗಿ ಎರಡೂ ಕುಟುಂಬಗಳ ಮುಗ್ಧ ಮಕ್ಕಳು ಅನಾಥವಾಗಿ ಬೀದಿಗೆ ಬೀಳುವಂತಾಗಿದೆ.