ತೆಲುಗು ಚಿತ್ರರಂಗದ ಹಿರಿಯ ನಿರ್ದೇಶಕ ಕೆ. ರಾಘವೇಂದ್ರ ರಾವ್ ಅವರು ಹೈದರಾಬಾದ್ನಲ್ಲಿ ನಡೆದ ಸಿನಿಮಾ ಕಾರ್ಯಕ್ರಮವೊಂದರಲ್ಲಿ ನಡೆದುಕೊಂಡ ರೀತಿಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಖ್ಯಾತ ನಿರ್ದೇಶಕ ಅನಿಲ್ ರವಿಪುಡಿ ಅವರ ಹೊಸ ಚಿತ್ರದ ಮುಹೂರ್ತ ಸಮಾರಂಭದ ವಿಡಿಯೋ ಒಂದು ವೈರಲ್ ಆಗಿದ್ದು, ಅದರಲ್ಲಿ 84 ವರ್ಷದ ರಾಘವೇಂದ್ರ ರಾವ್ ಅವರು ನಟಿಯರಾದ ಕೀರ್ತಿ ಸುರೇಶ್ ಮತ್ತು ಕೃತಿ ಶೆಟ್ಟಿ ಅವರ ಕೈಗಳನ್ನು ಬಲವಂತವಾಗಿ ಹಿಡಿದು ಎಳೆಯುತ್ತಿರುವ ದೃಶ್ಯಾವಳಿಗಳು ಸಾರ್ವಜನಿಕರ ಆ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ.
ವೈರಲ್ ವಿಡಿಯೋ ಮತ್ತು ನೆಟ್ಟಿಗರ ಆಕ್ರೋಶ
ಚಿತ್ರದ ಮುಹೂರ್ತದ ಮೊದಲ ದೃಶ್ಯವನ್ನು ನಿರ್ದೇಶಿಸುವಾಗ ರಾಘವೇಂದ್ರ ರಾವ್ ಅವರು ನಟಿ ಕೀರ್ತಿ ಸುರೇಶ್ ಅವರ ಕೈಯನ್ನು ಹಿಡಿದು ಎಳೆದು ನಿಲ್ಲಿಸಿದ್ದಾರೆ. ಆ ಬಳಿಕ ಮತ್ತೊಬ್ಬ ನಟಿ ಕೃತಿ ಶೆಟ್ಟಿ ಅವರ ಕೈಯನ್ನು ಅದೇ ರೀತಿ ಹಿಡಿದು ನಡೆಸಿಕೊಂಡು ಬಂದಿದ್ದಾರೆ. ಅಲ್ಲದೆ ದೃಶ್ಯದ ವಿವರಣೆ ನೀಡುವಾಗ ನಟರಾದ ವೆಂಕಟೇಶ್ ಮತ್ತು ನಂದಮೂರಿ ಕಲ್ಯಾಣ್ ರಾಮ್ ಅವರಿಗೆ ಕೈಗಳನ್ನು ಹೇಗೆ ಇಟ್ಟುಕೊಳ್ಳಬೇಕು ಎಂದು ತೋರಿಸುವ ನೆಪದಲ್ಲಿ ಕೃತಿ ಶೆಟ್ಟಿ ಅವರ ಹೆಗಲ ಮೇಲೆ ಕೈ ಇಟ್ಟಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ಹಿರಿಯ ನಿರ್ದೇಶಕರ ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಮಹಿಳೆಯರನ್ನು ಈ ರೀತಿ ಮುಟ್ಟುವುದು ಎಷ್ಟು ಸರಿ ಎಂದು ಪ್ರಶ್ನಿಸಿರುವ ನೆಟ್ಟಿಗರು, ದೃಶ್ಯದ ವಿವರಣೆಯನ್ನು ಮುಟ್ಟದೆಯೂ ನೀಡಬಹುದಿತ್ತು ಎಂದು ಕಮೆಂಟ್ ಮಾಡುತ್ತಿದ್ದಾರೆ. ಹಿಂದೆ ನಿಹಾರಿಕಾ ಅವರ ವಿಡಿಯೋ ವೈರಲ್ ಆದಾಗಲೂ ಇಂತಹದ್ದೇ ವಿವಾದ ನಡೆದಿತ್ತು, ಆದರೂ ಇವರು ಪಾಠ ಕಲಿತಿಲ್ಲ ಎಂದು ಎಕ್ಸ್ (ಟ್ವಿಟರ್) ತಾಣದಲ್ಲಿ ಜನರು ಕಿಡಿಕಾರಿದ್ದಾರೆ.
ಸಿನಿಮಾ ಗಣ್ಯರ ಉಪಸ್ಥಿತಿ
ವೆಂಕಟೇಶ್, ನಂದಮೂರಿ ಕಲ್ಯಾಣ್ ರಾಮ್, ಕೀರ್ತಿ ಸುರೇಶ್ ಮತ್ತು ಕೃತಿ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿರುವ ಈ ಬಹುನಿರೀಕ್ಷಿತ ಚಿತ್ರದ ಮುಹೂರ್ತ ಸಮಾರಂಭ ಗುರುವಾರ ಹೈದರಾಬಾದ್ನಲ್ಲಿ ಅದ್ಧೂರಿಯಾಗಿ ನೆರವೇರಿತು. ಕಾರ್ಯಕ್ರಮದಲ್ಲಿ ಹಿರಿಯ ನಿರ್ಮಾಪಕ ಅಲ್ಲು ಅರವಿಂದ್ ಮೊದಲ ಚಪ್ಪಾಳೆ ತಟ್ಟಿದರೆ, ದಿಲ್ ರಾಜು, ಸುರೇಶ್ ಬಾಬು ಸೇರಿದಂತೆ ಟಾಲಿವುಡ್ನ ಹಲವು ಪ್ರಮುಖರು ಭಾಗವಹಿಸಿದ್ದರು.
ಒಂದು ಕಡೆ ರಾಘವೇಂದ್ರ ರಾವ್ ಅವರ ವರ್ತನೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದರೆ, ಮತ್ತೊಂದು ಕಡೆ ಅವರ ಬೆಂಬಲಕ್ಕೆ ನಿಂತಿರುವ ಕೆಲವರು, ಅವರು ಹಿರಿಯ ನಿರ್ದೇಶಕರಾಗಿದ್ದು ಕೇವಲ ದೃಶ್ಯದ ಪೊಸಿಷನ್ ತೋರಿಸಲು ನಟ-ನಟಿಯರಿಗೆ ಮಾರ್ಗದರ್ಶನ ನೀಡುತ್ತಿದ್ದಾರಷ್ಟೆ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಸದ್ಯದ ಮಾಹಿತಿಯ ಪ್ರಕಾರ ಈ ವಿವಾದದ ಕುರಿತು ನಿರ್ದೇಶಕ ರಾಘವೇಂದ್ರ ರಾವ್ ಅವರಾಗಲಿ ಅಥವಾ ನಟಿಯರಾದ ಕೀರ್ತಿ ಸುರೇಶ್ ಮತ್ತು ಕೃತಿ ಶೆಟ್ಟಿ ಅವರಾಗಲಿ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.



