ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ ಹಾಗೂ ಗಿಡಗಳನ್ನು ನೆಡುವಲ್ಲಿ ಅಧಿಕಾರಿಗಳು ತೋರಿಸುತ್ತಿರುವ ಬೇಜವಾಬ್ದಾರಿಗೆ ಗರಂ ಆದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬೀದಿ ನಾಯಿಗಳ ಸಂತಾನ ಹರಣ ಕಾರ್ಯಕ್ರಮದ ವಿಚಾರವಾಗಿ ಜಿಬಿಎ ಸಭೆಗೆ ಅಂಕಿಅಂಶಗಳು ಇಲ್ಲದೆ ಬರಿಗೈನಲ್ಲಿ ಬಂದ ಅಧಿಕಾರಿಗಳ ವಿರುದ್ಧ ಗುಡುಗಿದ ಸಚಿವರು, ಪಶುಸಂಗೋಪನೆ ಇಲಾಖೆಯಲ್ಲಿ 19 ಜನ ಅಧಿಕಾರಿಗಳಿದ್ದು ಸಚಿವರ ಸಭೆಗೆ ಕನಿಷ್ಠ ಡಾಟಾವೂ ಇಲ್ಲದೇ ಬಂದಿದ್ದೀರ? ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 20 ವರ್ಷದಿಂದಲೂ ಸಂತಾನ ಹರಣ ಮಾಡಿಯೂ ನಾಯಿಗಳ ಸಂಖ್ಯೆ ಅಷ್ಟೇ ಇರಲು ಹೇಗೆ ಸಾಧ್ಯ? ನಾನೇನು ಕಿವಿಯಲ್ಲಿ ದಾಸವಾಳ ಇಟ್ಟುಕೊಂಡು ಕೂತಿದ್ದೀನಾ? ಎಂದು ಕಿಡಿಕಾರಿದರು.
ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ಬೀದಿ ನಾಯಿಗಳ ಸಮಸ್ಯೆಗೆ ಕಾನೂನಾತ್ಮಕ ಪರಿಹಾರ ಮತ್ತು ನಗರದಲ್ಲಿ ಗಿಡ ನೆಡುವ ಕಾರ್ಯದ ವಿಚಾರವಾಗಿ ಸುದೀರ್ಘ ಚರ್ಚೆ ಆಗಿದೆ. ನಗರದಲ್ಲಿ ಬೀದಿ ನಾಯಿಗಳ ಸಮಸ್ಯೆ ಕಳೆದ 50 ವರ್ಷಗಳಿಂದ ಇದ್ದು, ನಾನು ಕಾಲೇಜು ದಿನಗಳಿಂದ ಈ ಸಮಸ್ಯೆ ನೋಡುತ್ತಿದ್ದೇನೆ. 2000ನೇ ಇಸವಿಯಿಂದಲೂ ನಾಯಿಗಳ ಸಂತಾನ ಹರಣ ಚಿಕಿತ್ಸೆ ಆಗುತ್ತಿದೆ. ಈ ಸಂಬಂಧ ಅಧಿಕಾರಿಗಳಿಂದ ಮಾಹಿತಿ ಕೇಳಿದ್ದು, ಬಿಬಿಎಂಪಿ ಆದ ಬಳಿಕ 8.80 ಲಕ್ಷ ನಾಯಿಗಳಿಗೆ ಮತ್ತು 2016ರಿಂದ 2023ರ ವರೆಗೆ 3.33 ಲಕ್ಷ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಆಗಿದೆ ಎಂದಿದ್ದಾರೆ.
2019ರ ಸರ್ವೆ ಪ್ರಕಾರ 3.10 ಲಕ್ಷ, 2023ರ ಸರ್ವೆ ಪ್ರಕಾರ 2.79 ಲಕ್ಷ ಬೀದಿ ನಾಯಿಗಳು ಇವೆ. ಇವರು ಹೇಳುತ್ತಿರುವ ಪ್ರಕಾರ ಇರುವ ನಾಯಿಗಳಿಗಿಂತ ಹೆಚ್ಚಾಗಿ ಸಂತಾನಹರಣ ಚಿಕಿತ್ಸೆ ನಡೆದಿದ್ದು, ಈ ಕುರಿತಾಗಿ ಅಧಿಕಾರಿಗಳ ಬಳಿ ಸಮರ್ಪಕ ಮಾಹಿತಿ ಇಲ್ಲ. ಕಳೆದ 5 ವರ್ಷಗಳಲ್ಲಿ 42 ಕೋಟಿ ಇದಕ್ಕಾಗಿ ಖರ್ಚು ಮಾಡಿದ್ದಾರೆ. ಜನರ ತೆರಿಗೆ ದುಡ್ಡು ಖರ್ಚಾಗುತ್ತಲೇ ಇದೆ. ಆದರೆ ನಾಯಿಗಳ ಸಂತಾನ ಮುಂದುವರೆದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೀದಿ ನಾಯಿಗಳ ಸಂತಾನ ಹರಣ ಚಿಕಿತ್ಸೆ ಸಂಖ್ಯೆ ದ್ವಿಗುಣಕ್ಕೆ ಸೂಚಿಸಿದ್ದೇನೆ. ಇದಕ್ಕೆ ಬೇಕಾದ ಮೂಲ ಸೌಕರ್ಯಗಳನ್ನು ಹೆಚ್ಚಿಸಿಕೊಳ್ಳಿ ಅಂತಲೂ ಹೇಳಿದ್ದೇನೆ. ಜೊತೆಗೆ ಬೇರೆ ಸಂಸ್ಥೆಗಳನ್ನು ಆಹ್ವಾನ ಮಾಡಬಹುದು. ವೈದ್ಯಕೀಯ ಸಿಬ್ಬಂದಿ ಸಾಲದೇ ಹೋದರೆ ಹೊರಗುತ್ತಿಗೆ ಮೇಲೆ ಮಾಡಿ ಎಂದೂ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು.
ನೆಟ್ಟ ಗಿಡಗಳು ನಾಪತ್ತೆ:
ಬೆಂಗಳೂರು ನಗರದಲ್ಲಿ 2008ರಿಂದ 20 ಲಕ್ಷ ಗಿಡ ನೆಟ್ಟಿದ್ದೇವೆ ಎಂದು ಅಧಿಕಾರಿಗಳು ಹೇಳುತ್ತಾರೆ. ಮರಗಣತಿ ಪ್ರಕಾರ ಎಷ್ಟು ಆಗಿದೆ ಅಂತ ಕೇಳಿದರೆ 9 ಲಕ್ಷ ಮರಗಳು ಇವೆಯೆಂದು ಅವರೇ ಹೇಳುತ್ತಿದ್ದಾರೆ. ಹಾಗಾದರೆ ನೆಟ್ಟ ಗಿಡಗಳು ಎಲ್ಲಿ ಹೋದವು? ಎಂದೂ ಸಚಿವ ಕೃಷ್ಣಭೈರೇಗೌಡ ಪ್ರಶ್ನಿಸಿದ್ದಾರೆ.
ಒಂದು ಗಿಡ ಬೆಳೆಸಲು 2,300 ರೂಪಾಯಿ ಖರ್ಚಾಗುತ್ತೆ. ಅರಣ್ಯ ಕಾರ್ಯಕ್ರಮದಲ್ಲಿ ನೆಟ್ಟರೆ 3,300 ರೂ. ವೆಚ್ಚ ಮಾಡುತ್ತೇವೆ. ಗುಂಡಿ ತೊಡೋಕೆ 300 ರೂ., 1064 ರೂ. ನೀರು ಹಾಕಲು, ಟ್ರೀ ಗಾರ್ಡ್ ಹಾಕೋಕೆ 452 ರೂ. ಸೇರಿ 3 ವರ್ಷದ ನಿರ್ವಹಣೆಗೆ ಹಣ ವ್ಯಯಮಾಡಲಾಗುತ್ತೆ. 2.5 ಅಡಿ ಆಳ 2.5 ಅಡಿ ಉದ್ದ ತೆಗೆದು ಗಿಡ ನೆಡಬೇಕು ಎಂದಿದೆ. ಆದರೆ ನನ್ನ ಕ್ಷೇತ್ರದಲ್ಲಿ ಈ ರೀತಿ ನೆಟ್ಟಿರೋದನ್ನು ನಾನು ನೋಡಿಲ್ಲ ಎಂದು ಸಚಿವರು ಹೇಳಿದ್ದಾರೆ.
ಇದಕ್ಕೂ ಮುನ್ನ ಸಭೆ ವೇಳೆ ಫುಟ್ಪಾತ್ ಅಥವಾ ಮೀಡಿಯನ್ಗಳಲ್ಲಿ ಮೇಲ್ನೋಟಕ್ಕೆ ಗಿಡಗಳನ್ನು ಇರಿಸಲಾಗಿದೆಯೇ ಹೊರತು, ನಿಯಮದ ಪ್ರಕಾರ ಗುಂಡಿಗಳನ್ನು ತೋಡಿಲ್ಲ ಎಂದು ಸಚಿವರು ಆರೋಪಿಸಿದರು.
ಗುಂಡಿ ತೋಡಲು ಮೀಸಲಿಟ್ಟ 300 ರೂ. ಹಣವನ್ನು ಅಧಿಕಾರಿಗಳು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಳೆದ 20 ವರ್ಷಗಳಲ್ಲಿ ಬಿಬಿಎಂಪಿ (ಹಿಂದಿನ ಬಿಎಂಪಿ ಸೇರಿದಂತೆ) ಎಷ್ಟು ಗಿಡಗಳನ್ನು ನೆಟ್ಟಿದೆ, ಮರಗಣತಿ ಎಷ್ಟು ವರ್ಷಗಳಿಗೊಮ್ಮೆ ನಡೆಯುತ್ತದೆ ಮತ್ತು ನೆಟ್ಟ ಗಿಡಗಳು ಮರಗಣತಿಯಲ್ಲಿ ಪ್ರತಿಫಲಿಸುತ್ತಿವೆಯೇ ಎಂದು ಪ್ರಶ್ನಿಸಿದರು.
ಸಚಿವರ ಪ್ರಶ್ನೆಗಳಿಗೆ ಅಧಿಕಾರಿಗಳು ಸಮರ್ಪಕ ಉತ್ತರ ನೀಡಲು ವಿಫಲರಾದರು. ಸಾರ್ವಜನಿಕರ ಹಣದ ಪೋಲು ಮತ್ತು ನಿರ್ಲಕ್ಷ್ಯದ ಬಗ್ಗೆ ಸಚಿವರು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.