ಭಾರತ ಸರ್ವ ಜನಾಂಗದ ಶಾಂತಿಯ ತೋಟ. ಸರ್ವಧರ್ಮದವರೂ ಒಟ್ಟಾಗಿ ಹಲವು ಶತಮಾನಗಳಿಂದ ಕೂಡಿ ಬಾಳಿರುವ ತಾಣ. ಪೋರ್ಚುಗೀಸರು, ಡಚ್ಚರು, ಫ್ರೆಂಚರು ಹಾಗೂ ಬ್ರಿಟಿಷರು ಬಂದು ಆಳಿ ಹೋದರೂ ದೇಶದಲ್ಲಿನ ಯಾವುದೇ ಧರ್ಮದವರೂ ಕೋಮುಗಲಭೆಯಿಂದ ಹೊಡೆದಾಡಿಕೊಳ್ಳದೇ ಒಗ್ಗಟ್ಟಿನಿಂದ ಉಳಿದುಕೊಂಡ ನೆಲ.
ಆದರೆ ಕೆಲ ಕಿಡಿಗೇಡಿಗಳು ತಮ್ಮ ಧರ್ಮದ ಮೇಲಿನ ಪ್ರೀತಿಯನ್ನು ಬೇರೆ ಧರ್ಮದ ಮೇಲಿನ ದ್ವೇಷವನ್ನಾಗಿ ಪರಿವರ್ತಿಸಿಕೊಂಡು ಕೋಮುಗಲಭೆಗೆ ಪ್ರಚೋದನೆ ನೀಡುವಂತಹ ಕೆಲಸಗಳನ್ನು ಮಾಡಿ ದ್ವೇಷದ ಬೀಜ ಭಿತ್ತನೆ ಮಾಡತೊಡಗಿದ್ದಾರೆ.
ಇಂಥವರನ್ನು ಮಟ್ಟಹಾಕಿ ಭ್ರಾತೃತ್ವ ಕಾಪಾಡಿಕೊಳ್ಳಲೆಂದೇ ಸರ್ಕಾರಗಳು ಕೋಮುಗಲಭೆಗೆ ಪ್ರಚೋದನೆ ನೀಡುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಕಾನೂನಿನಡಿ ಆದೇಶಗಳನ್ನು ಹೊರಡಿಸಿದೆ.
ಆದರೂ ಸಹ ಕಿಡಿಗೇಡಿಗಳು ಭ್ರಾತೃತ್ವ ಕದಡುವ ಕೆಲಸ ಮಾಡುತ್ತಲೇ ಇದ್ದಾರೆ. ಕೇವಲ ಒಂದು ಧರ್ಮವಲ್ಲ, ಎಲ್ಲ ಧರ್ಮಗಳಲ್ಲೂ ಈ ದುಷ್ಕೃತ್ಯಕ್ಕೆ ಕೈಹಾಕಿದ ಉದಾಹರಣೆಗಳು ಸಾಕಷ್ಟಿವೆ.
ಇದೀಗ ಅಂತಹ ಉದಾಹರಣೆಗಳಿಗೆ ಮತ್ತೊಂದು ಸೇರ್ಪಡೆ ಶ್ರೀರಾಮನ ಭಕ್ತನೊಬ್ಬ ಐಫೋನ್ ಜಿಹಾದಿ ಎಂದು ಆರೋಪಿಸಿ ಮಾಡಿರುವ ವಿಡಿಯೊ. ಹೌದು, ಅಂತಾರಾಷ್ಟ್ರೀಯ ಸೆಲ್ಫೋನ್ ಬ್ರಾಂಡ್ ಐ ಫೋನ್ನ ಆಪ್ಷನ್ ಆದ ಸಿರಿ ಮುಸ್ಲಿಮರ ‘ಅಸ್ಸಲಾಮ್ಅಲೈಕುಂ’ ಎಂದರೆ ಅದಕ್ಕೆ ‘ವ ಅಲೈಕುಮುಸ್ಸಲಾಂ’ ಎಂದು ಪ್ರತಿಕ್ರಿಯಿಸುತ್ತದೆ, ಆದರೆ ಜೈ ಶ್ರೀರಾಮ್ ಅಥವಾ ಜೈ ಮಹಾಕಾಲ್ ಎಂದರೆ ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದು ವಿಡಿಯೊ ಮಾಡಿ ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಐಫೋನ್ ಹಿಡಿದು ಸಿರಿಗೆ ಪ್ರಶ್ನೆ ಕೇಳಿರುವ ಈತ ಪ್ರತಿಕ್ರಿಯೆ ಬರುತ್ತಿಲ್ಲ, ಯಾರೂ ಸಹ ಐ ಫೋನ್ ಬಳಸಬೇಡಿ ಎಂದು ಕರೆಕೊಟ್ಟಿದ್ದಾರೆ. ಅಲ್ಲದೇ ಕೋಟ್ಯಂತರ ಹಿಂದೂಗಳು ಐ ಫೋನ್ಗಳನ್ನು ಮುಗಿಬಿದ್ದು ಖರೀದಿ ಮಾಡಿ ನಿಮ್ಮ ಡೇಟಾಗಳನ್ನು ನೀವೇ ಕೊಡುತ್ತಿದ್ದೀರ ಎಂದೂ ಸಹ ಆರೋಪಿಸಿದ್ದಾರೆ.