ಧಾರವಾಡ: ಮಲ್ಲಕಂಭ ಕ್ರೀಡೋತ್ಸವ ಧಾರವಾಡ ಜಿಲ್ಲೆಯ ಜಿಲ್ಲಾ ಕ್ರೀಡಾ ಸಂಕೀರ್ಣದಲ್ಲಿ ಆಯೋಜಿಸಿರುವುದು ಸಂತಸದ ಸಂಗತಿ. ಈ ಕ್ರೀಡಾ ಸಂಕೀರ್ಣವನ್ನು ಬಹಳ ಪ್ರಯತ್ನದೊಂದಿಗೆ ಧಾರವಾಡದಲ್ಲಿ ನಿರ್ಮಿಸಲಾಗಿದೆ. ಕ್ರೀಡಾ ಸಂಕೀರ್ಣದಲ್ಲಿ ಕೆಲವೊಂದು ನ್ಯೂನ್ಯತೆಗಳನ್ನು ಸರಿಪಡಿಸಿ, ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಕ್ರೀಡಾ ಸಂಕೀರ್ಣವನ್ನು ಪ್ರಾರಂಭಿಸಲಾಗುವುದು ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಹೊಸ ಹಾಗೂ ನೂತನ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಅವರು ಹೇಳಿದರು.
ಅವರು ಇಂದು ನೂತನ ಕ್ರೀಡಾ ಸಂಕೀರ್ಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಧಾರವಾಡ ಹಾಗೂ ಕರ್ನಾಟಕ ರಾಜ್ಯ ಅಮೆಚೂರ ಮಲ್ಲಕಂಭ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಮಲ್ಲಕಂಭ ಕ್ರೀಡೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.
ಮಲ್ಲಕಂಭ ಕ್ರೀಡೆಯು ಇತ್ತೀಚಿನ ಕ್ರೀಡೆಯಲ್ಲ. ಇದು ಬಹಳ ಹಿಂದಿನ ಕಾಲದ ರಾಮಾಯಣ ಪುರಾಣಗಳಲ್ಲಿ ಮಾನಸ-ಉಲ್ಲಾಸ ಗ್ರಂಥಗಳಲ್ಲಿ ಇರುವುದು. ಈ ಕ್ರೀಡೆಯಲ್ಲಿ ಮಾನಸಿಕ ಏಕಾಗ್ರತೆ ಬಹಳ ಮುಖ್ಯವಾಗಿದೆ. ಈ ಮಲ್ಲಕಂಭ ಕ್ರೀಡೋತ್ಸವ ಕಾರ್ಯಕ್ರಮದಲ್ಲಿ ರಾಜ್ಯದ 14 ಜಿಲ್ಲೆಯ ಒಟ್ಟು 252 ಕ್ರೀಡಾಪಟುಗಳು ಭಾಗವಹಿಸಿದ್ದಾರೆ ಎಂದು ಹೇಳಿದರು.
ಬಾಜಿರಾವ್ ಪೇಶ್ವೆಯವರ ಗುರುಗಳಾದ ಬಾಳಭಟ್ಟ ಈ ಕಲೆಯನ್ನು ಪುನರುಜ್ಜೀವನಗೊಳಿಸಿ ಸೈನಿಕರಿಗೆ ಮನೋಬಲವನ್ನು ತುಂಬಿಸಲಿಕ್ಕೆ ಮತ್ತು ಹೊರಾಟದ ಕೆಚ್ಚನ್ನು ಹೆಚ್ಚಿಸಲಿಕ್ಕೆ ಹಾಗೂ ಸೈನಿಕರ ಏಕಾಗ್ರತೆಯನ್ನು ಹೆಚ್ಚಿಸಲಿಕ್ಕೆ ಈ ಕ್ರೀಡೆಯನ್ನು ನಮ್ಮ ಭಾಗದಲ್ಲಿ ಹೆಚ್ಚು ಪ್ರಚಲಿತ ಪಡಿಸಿದರು. ಪ್ರಧಾನ ಮಂತ್ರಿಗಳು ಮಲ್ಲಕಂಭ ಕ್ರೀಡೆಯನ್ನು ಖೇಲೋ ಇಂಡಿಯಾ ಕ್ರೀಡೆಯಲ್ಲಿ ಸೇರ್ಪಡೆಗೊಳಿಸಿದರು. ಹಾಗೂ ಇದನ್ನು ಆದಿವಾಸಿಗಳು (ಬುಡಕಟ್ಟು ಜನಾಂಗದವರಿಗೂ) ಸಹ ಮಲ್ಲಕಂಭ ಕ್ರೀಡೆಯನ್ನು ಆಡಲು ಅನುಕೂಲ ಮಾಡಿಕೊಟ್ಟರು ಎಂದು ಹೇಳಿದರು.
ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರು ಮಾತನಾಡಿ, ಧಾರವಾಡದಲ್ಲಿ ರಾಜ್ಯ ಮಟ್ಟದ ಮಲ್ಲಕಂಭ ಕ್ರೀಡೋತ್ಸವವನ್ನು ಮೊಟ್ಟ ಮೊದಲ ಭಾರಿಗೆ ಆಯೋಜಿಸಲಾಗಿದೆ. ಮಲ್ಲಕಂಭ ಮತ್ತು ರೋಪ್ ಕ್ರೀಡೆಗಳು ಬಹಳ ಪ್ರಾಚೀನವಾಗಿದ್ದು, ಈ ಮಲ್ಲಕಂಭ ವಿದ್ಯೆಯನ್ನು 1965 ನೇ ಇಸ್ವಿಯಲ್ಲಿ ಧಾರವಾಡದ ಮಲ್ಲಸಜ್ಜನ ವ್ಯಾಯಾಮ ಶಾಲೆಯಲ್ಲಿ ಎನ್.ಎಚ್.ಪಾಟೀಲ ಅವರೊಂದಿಗೆ ಪ್ರಾರಂಭಿಸಲಾಯಿತು. ಈ ಮಲ್ಲಕಂಭ ಕ್ರೀಡೋತ್ಸವವನ್ನು ಉಳಿಸಿ ಬೆಳಸಲು ಲಕ್ಷೇಶ್ವರದಲ್ಲಿ ಕಾರ್ಯಕ್ರಮ ಮಾಡಿ ಆಲ್ ಇಂಡಿಯಾ ಅಧ್ಯಕ್ಷರಾದ ಗೋಪೆ ಅವರ ಸಮ್ಮುಖದಲ್ಲಿ ಮಲ್ಲಕಂಭ ಕ್ರೀಡೆಯನ್ನು ನಡೆಸಲಾಯಿತು ಎಂದು ಹೇಳಿದರು.
ಈಗಿನ ಪಾಲಕರು ಮಕ್ಕಳನ್ನು ಕ್ರೀಡೆಯಲ್ಲಿ ಭಾಗವಹಿಸಿ, ಹೆಚ್ಚಿನ ಪ್ರೋತ್ಸಾಹ ನೀಡಿ, ಕ್ರೀಡೆಯಲ್ಲಿ ಭಾಗವಹಿಸಲು ಪ್ರಚೋದನೆ ನೀಡಿದ್ದಲ್ಲಿ ಅವರು ಆರೋಗ್ಯ ಮತ್ತು ಮಾನಸಿಕ ನೆಮ್ಮದಿಯಿಂದ ಜೀವಿಸಬಹುದು. ಕ್ರೀಡಾಪಟುಗಳು ವಿದ್ಯಾಭ್ಯಾಸದೊಂದಿಗೆ ಕ್ರೀಡೆಯಲ್ಲಿ ಹೆಚ್ಚಿನ ಸಾಧನೆಯನ್ನು ಮಾಡಬೇಕು. ಸೋಲು ಗೆಲುವು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ. ಇಲಾಖೆಯ ತರಬೇತುದಾರರು ಅಧಿಕಾರಿಗಳು ಎಲ್ಲರೂ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ, ಹೆಚ್ಚು ಹೆಚ್ಚು ಪದಕಗಳನ್ನು ಜಿಲ್ಲೆಗೆ ತರಲು ಶ್ರಮಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಅಮೆಚೂರ ಮಲ್ಲಕಂಭ ಸಂಸ್ಥೆ ಅಧ್ಯಕ್ಷ ಪ್ರಕಾಶ ಮ್ಯಾಗೇರಿ, ಕಾರ್ಯದರ್ಶಿ ಎಸ್.ಎಪ್.ಕೊಡ್ಲಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸದಸ್ಯರಾದ ಸುರೇಶ ಬೇದರೆ, ಹಾಗೂ ವಿಷ್ಣು ಕೇರಳೆ, ಸಿ.ಕೆ.ಚನ್ನಾಳ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ತರಬೇತುದಾರರು ಹಾಗೂ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸದಾನಂದ ಹೆಚ್. ಅಮರಾಪುರ ಅವರು ಸ್ವಾಗತಿಸಿದರು. ಶಾಂಭಯ್ಯ ಹಿರೇಮಠ ಅವರು ನಿರೂಪಿಸಿದರು. ಬಾಳಬಳಗ ವಿದ್ಯಾರ್ಥಿಗಳು ಪ್ರಾರ್ಥಿಸಿದರು.