ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ಹೋರಾಟ ಬಿಜೆಪಿ ನಾಯಕರ ಹೋರಾಟಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟಾಂಗ್ ಕೊಟ್ಟಿದ್ದಾರೆ.
ಪಕ್ಷದ ಎಲ್ಲಾ ನಾಯಕರಿಗೆ ಹೈಕಮಾಂಡ್ ಮಂಗಳಾರತಿ ಮಾಡಿದೆ. ಹೀಗಾಗಿ ಕೆಲವರು ಇದೀಗ ಹೋರಾಟ ಆರಂಭಿಸಿದ್ದಾರೆ ಎಂದು ಬೈರಮಂಗಲದಲ್ಲಿ ಹೇಳಿದ್ದಾರೆ.
ಬಿಜೆಪಿ ನಾಯಕರ ಹೋರಾಟಕ್ಕೆ ಟಾಂಗ್ ಕೊಟ್ಟ ಯತ್ನಾಳ್, ಅಧಿವೇಶನದ ಮೊದಲ ದಿನದಿಂದಲೇ ಹೋರಾಟ ಮಾಡುತ್ತೇವೆ. ಅಧಿವೇಶನವೇ ನಡೆಯದಂತೆ ನಾವು ನೋಡಿಕೊಳ್ಳುತ್ತೇವೆ. ಜನಶಕ್ತಿ ಮುಂದೆ ಯಾವ ಗೂಂಡಾ ಶಕ್ತಿಯೂ ನಡೆಯುವುದಿಲ್ಲ. ಈ ಯೋಜನೆಯನ್ನು ಕೈಬಿಡುತ್ತೇವೆ ಎನ್ನುವವರೆಗೂ ಹೋರಾಟ ಕೈಬಿಡುವುದಿಲ್ಲ ಎಂದು ಹೇಳಿದ್ದಾರೆ.
ಅಭಿವೃದ್ಧಿ ನೆಪದಲ್ಲಿ ರಿಯಲ್ ಎಸ್ಟೇಟ್ ಮಾಡಲು ಭೂಸ್ವಾಧೀನಕ್ಕೆ ಹೊರಟಿದ್ದಾರೆ. ಹೈಕಮಾಂಡ್ ಗೆ ಗಿಫ್ಟ್ ಕೊಡಲು ಟೌನ್ ಶಿಪ್ ಮಾಡುತ್ತಿದ್ದಾರೆ. ಭೂಸ್ವಾಧೀನ ಮಾಡಲ್ಲ ಎಂದು ರೈತರಿಗೆ ಚೆಕ್ ಕೊಡುತ್ತಿದ್ದಾರೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಪೊರಕೆ ಸೇವೆ ಆಗಿದ್ದಕ್ಕೆ ಎರಡು ತಿಂಗಳು ಮುಂದೂಡಿಕೆಯಾಗಿದೆ. ದೇವೇಗೌಡರು ಧರಣಿ ಮಾಡುತ್ತೇವೆ ಎಂದಿದ್ದಕ್ಕೆ ಹೋರಾಟಕ್ಕೆ ಶಕ್ತಿ ಬಂದಿದೆ. ದೇವೇಗೌಡರ ಎಚ್ಚರಿಕೆಯಿಂದ ಈಗ ಬಿಡದಿ ಹೋರಾಟ ಒಂದು ಹಂತಕ್ಕೆ ಬಂದಿದೆ. ಕಾಂಗ್ರೆಸ್ ಪಕ್ಷದ ಶಾಸಕರು ಆತ್ಮಸಾಕ್ಷಿಗಾಗಿ ಕೆಲಸ ಮಾಡಿ. ರೈತರ ಮೇಲೆ ಮರಣ ಶಾಸನ ಬರೆದು ದುಡ್ಡು ಮಾಡಿಕೊಂಡರೆ ಕುಟುಂಬಕ್ಕೆ ಒಳ್ಳೆಯದಾಗಲ್ಲ, ರೈತರ ಶಾಪ ಒಳ್ಳೆಯದಲ್ಲ ಎಂದು ಯತ್ನಾಳ್ ಹೇಳಿದ್ದಾರೆ.
ಕೃಷಿಗೆ ಯೋಗ್ಯವಲ್ಲದ ಕಡೆ ಯೋಜನೆ ಮಾಡಿ. ಸಿಎಂ ಅವರ ಒಣ ಪ್ರತಿಷ್ಠೆಗೆ ರೈತರನ್ನು ಬಲಿ ಕೊಡುತ್ತಿದ್ದಾರೆ. ಹೀಗೆ ಮಾಡಿದರೆ ನಾಳೆ ಸಿಎಂ ಸ್ಥಾನಕ್ಕೆ ಕುತ್ತು ಬರಬಹುದು, ಹುಷಾರಾಗಿರಿ. ಈಗಾಗಲೇ ಅಜ್ಜಯ್ಯನವರು ಹೇಳಿದ್ದಾರೆ ಮುಖ್ಯಮಂತ್ರಿಗಳೇ ಅಜ್ಜಯ್ಯ ಹೇಳಿದ ಹಾಗೆ ಹುಷಾರಾಗಿ ಇರಿ ಎಂದು ಯತ್ನಾಳ್ ಹೇಳಿದ್ದಾರೆ.