ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಸೊನಲೆ ಗ್ರಾಮದಲ್ಲಿ ಕೂಲಿಕಾರ್ಮಿಕರ ನಡುವೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.
ಪ್ಲಾಂಟೇಶನ್ ಮರಗಳ ಕಡಿತಲೆ ಕೆಲಸಕ್ಕಾಗಿ ಧಾರವಾಡದಿಂದ ಬಂದಿದ್ದ ಕಾರ್ಮಿಕರ ನಡುವೆ ಜಗಳವಾಗಿ ಒಬ್ಬನ ಕೊಲೆಯಾಗಿದೆ. ಕಲಘಟಗಿ ತಾಲೂಕಿನ ದೇವಿಕೊಪ್ಪ ಸಮೀಪದ ಈಚನಹಳ್ಳಿ ತಾಂಡಾದ ಪರಶುರಾಮ ರಾಮಪ್ಪ ಲಮಾಣಿ ಕೊಲೆಯಾದವರು. ಅದೇ ತಾಂಡಾದಿಂದ ಆಗಮಿಸಿದ್ದ ಕಾರ್ಮಿಕ ಪರಶುರಾಮ ಶೆಟ್ಟಪ್ಪ ತಂಬೂರಿ ಹಾಗೂ ಅರುಣ್ ಪುನ್ನಪ್ಪ ಲಮಾಣಿ ಕೊಲೆ ಆರೋಪಿಗಳಾಗಿದ್ದಾರೆ.
ಮೇ ತಿಂಗಳಿನಲ್ಲಿ ಕೆಲಸಕ್ಕೆ ಬಂದಿದ್ದ ಇವರು ಸೊನಲೆ ಗ್ರಾಮದ ಕುಮಾರ್ ಅವರ ಮನೆ ಬಾಡಿಗೆ ಪಡೆದು ವಾಸವಾಗಿದ್ದರು. ಕೆಲವು ದಿನಗಳ ಹಿಂದೆ ಮೃತ ವ್ಯಕ್ತಿ ಪರಶುರಾಮ ಊರಿಗೆ ಹೋಗಿದ್ದು, ಶನಿವಾರ ಕೆಲಸಕ್ಕೆ ಬಂದಿದ್ದ. ಶನಿವಾರ ರಾತ್ರಿ ಬಾಡಿಗೆ ಮನೆಯಲ್ಲಿ ಕಾರ್ಮಿಕರು ಒಟ್ಟಿಗೆ ಮದ್ಯ ಸೇವಿಸಿದ್ದು, ಅರುಣ್ ಸಂಸಾರದ ವಿಚಾರವಾಗಿ ಪರಶುರಾಮ ರಾಮಪ್ಪ ಲಮಾಣಿ ಬುದ್ಧಿವಾದ ಹೇಳಿದ್ದ. ಈ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ.
ಮೇಸ್ತ್ರಿ ಹಾಗೂ ಇತರ ಕಾರ್ಮಿಕರು ಗಲಾಟೆ ಬಿಡಿಸಿ ಇಬ್ಬರನ್ನು ಸುಮ್ಮನಾಗಿಸಿದ್ದಾರೆ. ಆದರೆ, ಬುದ್ಧಿ ಹೇಳಿದ್ದಕ್ಕೆ ಅರುಣ್ ಮತ್ತು ಪರಶುರಾಮ ಶೆಟ್ಟಪ್ಪ ಮತ್ತೆ ಜಗಳ ತೆಗೆದು ಕುತ್ತಿಗೆಗೆ ಚಾಕುವಿನಿಂದ ಇರಿದ ಪರಿಣಾಮ ಪರಶುರಾಮ ರಾಮಪ್ಪ ಲಮಾಣಿ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಎಸ್ಪಿ ನಿಖಿಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಬಂಧಿಸಿದ ಪಿಎಸ್ಐ ಶಂಕರಗೌಡ ಪಾಟೀಲ್ ತನಿಖೆ ಕೈಗೊಂಡಿದ್ದಾರೆ.