ದಾವಣಗೆರೆ: ತಾಯಿಯ ಅಸಹಜ ಸಾವಿನ ತನಿಖೆಯ ಕುರಿತಾಗಿ ಅನುಮಾನಗೊಂಡ ಪುತ್ರರಿಬ್ಬರು ಮರು ಮರಣೋತ್ತರ ಪರೀಕ್ಷೆಗೆ ಶವವನ್ನು ರಾತ್ರೋರಾತ್ರಿ ಬೈಕ್ ನಲ್ಲಿ ಸಾಗಿಸುವಾಗ ಸಿಕ್ಕಿಬಿದ್ದಿದ್ದಾರೆ.
ದಾವಣಗೆರೆ ಜಿಲ್ಲೆ ಹರಿಹರ ತಾಲೂಕು ಆದಾಪುರ ಗ್ರಾಮದಲ್ಲಿ ಏಪ್ರಿಲ್ 29ರಂದು ಈರಮ್ಮ(58) ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ತಮ್ಮ ತಾಯಿಯಧು ಸಹಜ ಸಾವಲ್ಲ, ನೆರೆಹೊರೆಯವರು ಸೇರಿಕೊಂಡು ಆಕೆಯನ್ನು ಕೊಲೆ ಮಾಡಿದ್ದಾರೆ ಎಂದು ಮೃತರ ಮಕ್ಕಳಾದ ಮಂಜುನಾಥ್ ಮತ್ತು ವೆಂಕಟೇಶ್ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ನೆರೆಹೊರೆಯ 11 ಮಂದಿ ವಿರುದ್ಧ ಮಲೆಬೆನ್ನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪೊಲೀಸರು ತನಿಖೆ ನಡೆಸಿ ಯಾವುದೇ ಕೊಲೆ ಮೊಕದ್ದಮೆ ದಾಖಲಿಸದೆ ಮರಣೋತ್ತರ ಪರೀಕ್ಷೆ ಬಳಿಕ ಮೃತರ ಅಂತ್ಯಕ್ರಿಯೆ ನಡೆಸಲು ಕುಟುಂಬದವರಿಗೆ ಅವಕಾಶ ಮಾಡಿಕೊಟ್ಟಿದ್ದರು. ಆದರೆ, ಪೊಲೀಸರ ತನಿಖೆಯಿಂದ ತೃಪ್ತರಾಗದ ಮಂಜುನಾಥ್ ಮತ್ತು ವೆಂಕಟೇಶ್ ಶನಿವಾರ ರಾತ್ರಿ ತಮ್ಮ ಊರಿನ ಸ್ಮಶಾನದಲ್ಲಿ ಹೂತು ಹಾಕಿದ್ದ ತಮ್ಮ ತಾಯಿಯ ಶವದ ಅವಶೇಷಗಳನ್ನು ಹೊರತೆಗೆದು ರಾತ್ರೋರಾತ್ರಿ ಬೆಡ್ ಶೀಟ್ ನಲ್ಲಿ ಸುತ್ತಿಕೊಂಡು ಮರುಮರಣೋತ್ತರ ಪರೀಕ್ಷೆ ನಡೆಸಲು ದಾವಣಗೆರೆ ಜಿಲ್ಲಾಸ್ಪತ್ರೆಗೆ ಬೈಕ್ ನಲ್ಲಿ ತೆಗೆದುಕೊಂಡು ಹೋಗಿದ್ದಾರೆ.
ಆದರೆ, ಮಾರ್ಗಮಧ್ಯದಲ್ಲೇ ಅವರು ತೆರಳುತ್ತಿದ್ದ ಬೈಕ್ ಅಪಘಾತಕ್ಕೀಡಾಗಿದ್ದು, ಇಬ್ಬರೂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ತಾಯಿಯ ಮರು ಮರಣೋತ್ತರ ಪರೀಕ್ಷೆಗೆ ಮಕ್ಕಳು ಒತ್ತಾಯಿಸಿದ್ದಾರೆ.