ಹಾಸನ: ಹೃದಯಾಘಾತದಿಂದ ವಿಧಿವಶರಾಗಿದ್ದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಅಂತ್ಯಕ್ರಿಯೆ ಇಂದು ಹಾಸನ ಜಿಲ್ಲೆಯ ಮಾವಿನಕೆರೆಯ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ಚೆನ್ನಮ್ಮ ಪಾರ್ಥೀವಶರೀರಕ್ಕೆ ಗಣ್ಯರು ಅಂತಿಮ ಪುಷ್ಪನಮನ ಸಲ್ಲಿಸಿದ ಬಳಿಕ 3 ಸುತ್ತು ಕುಶಾಲತೋಪು ಸಿಡಿಸಿ, ರಾಷ್ಟ್ರಗೀತೆ ನಮನದೊಂದಿಗೆ ಸರ್ಕಾರಿ ಗೌರವ ವಂದನೆ ಸಲ್ಲಿಸಲಾಯಿತು. 2 ನಿಮಿಷ ಮೌನಾಚರಣೆ ಸಲ್ಲಿಸಿದ ಬಳಿಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೇವೇಗೌಡರ ಕುಟುಂಬಕ್ಕೆ ರಾಷ್ಟ್ರಧ್ವಜ ಹಸ್ತಾಂತರಿಸಿದರು. ಇದೇ ವೇಳೆ ಡಿ.ಕೆ ಶಿವಕುಮಾರ್ ಅವರು ದೇವೇಗೌಡರ ಕಾಲಿಗೆ ನಮಸ್ಕರಿಸಿ ವಂದಿಸಿದರು.
ಬಳಿಕ ದೇಹ ಶುದ್ಧಿ ಕಾರ್ಯ ನಡೆಯಿತು. ದೇವೇಗೌಡರು ಮತ್ತು ಕುಟುಂಬಸ್ಥರಿಂದ ಪಾರ್ಥಿವ ಶರೀರಕ್ಕೆ ಅಂತಿಮ ಪೂಜಾ ವಿಧಿವಿಧಾನ ನೇರವೇರಿಸಲಾಯಿತು. ಇದೇ ವೇಳೆ ಅರ್ಚಕರ ತಂಡದಿಂದ ಸ್ತೋತ್ರ ಪಠಣ ಕಾರ್ಯವೂ ನಡೆಯಿತು. ನಂತರ ಮೂರು ಸುತ್ತು ಪಲ್ಲಕ್ಕಿ ಮೆರವಣಿಗೆ ನಡೆಸಿ ಒಕ್ಕಲಿಗ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ಹಿರಿಯ ಪುತ್ರ ಹೆಚ್.ಡಿ ರಮೇಶ್ ಅವರಿಂದ ಅಂತ್ಯಕ್ರಿಯೆ ಕಾರ್ಯವಿಧಾನ ನೆರವೇರಿತು. ಗುಂಡಿಯಲ್ಲಿ ಗಂಗಾಜಲ ಸಿಂಪಡಿಸಿ ಶುದ್ಧೀಕರಣ ನೆರವೇರಿಸಿದ ಬಳಿಕ ಪಲ್ಲಕ್ಕಿಯಲ್ಲಿ ಹೊತ್ತುತಂದ ಪಾರ್ಥಿವ ಶರೀರವನ್ನ ಇಳಿಸಿ, ಅಂತಿಕ್ರಿಯೆ ಮಾಡಲಾಯಿತು.
ಅಂತ್ಯಕ್ರಿಯೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಹೆಚ್.ಡಿ ಕುಮಾರಸ್ವಾಮಿ, ವಿ. ಸೋಮಣ್ಣ, ಶಿವರಾಜ್ ಸಿಂಗ್ ಚೌಹಾಣ್, ಸಭಾಪತಿ ಬಸವರಾಜ ಹೊರಟ್ಟಿ, ಇಂಧನ ಸಚಿವ ಕೆ.ಜೆ ಜಾರ್ಜ್, ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ, ಸಚಿವ ಕೃಷ್ಣಬೈರೇಗೌಡ, ಶಾಸಕರಾದ ಬಿ.ವೈ ವಿಜಯೇಂದ್ರ, ಬಿ.ವೈ ರಾಘವೇಂದ್ರ, ಡಾ. ನಿರ್ಮಲಾನಂದ ಸ್ವಾಮೀಜಿ, ನಂಜಾವಧೂತ ಶ್ರೀ, ರಂಭಾಪುರಿ ಶ್ರೀ ಸೇರಿದಂತೆ ಹಿರಿಯ ಹಾಗೂ ಕಿರಿಯ ಶಾಸಕರು, ಸಂಸದರು, ಪರಿಷತ್ನ ಸದಸ್ಯರು ಇತರ ಗಣ್ಯರು ಭಾಗವಹಿಸಿದ್ದರು.
ಸ್ವಾಮಿ ಸಾನ್ನಿಧ್ಯಕ್ಕೆ ಕಳುಹಿಸಿಕೊಡುತ್ತೇನೆ ಎಂದು ಭಾವುಕರಾದ ಹೆಚ್.ಡಿ.ದೇವೇಗೌಡ:
ಚೆನ್ನಮ್ಮ ಅವರ ಅಂತ್ಯಕ್ರಿಯೆ ಇನ್ನೇನು ಕೆಲವೇ ಕ್ಷಣಗಳು ಬಾಕಿಯಿರುವಾಗ ಪತಿ ಹೆಚ್.ಡಿ.ದೇವೇಗೌಡರು ಮಾತನಾಡಿ, ಪತ್ನಿ ಬಗ್ಗೆ ಭಾವುಕರಾದರು. ರಂಗನಾಥನ ಸಾನ್ನಿಧ್ಯದಲ್ಲಿ ಸಮಾಧಿ ಮಾಡಲು ಮಕ್ಕಳ ನಿರ್ಧಾರ. ಪಡುವಲಹಿಪ್ಪೆಯಲ್ಲಿ ಅಂತ್ಯಕ್ರಿಯೆ ಮಾಡಬೇಕೆನ್ನುವುದು ಇಚ್ಛೆಯಾಗಿತ್ತು. ಆದರೆ, ನಮ್ಮ ಮಕ್ಕಳ ತೀರ್ಮಾನದಂತೆ ಇಲ್ಲಿ ಅಂತ್ಯಕ್ರಿಯೆ ಮಾಡಲಾಗ್ತಿದೆ. ಈ ಜಮೀನನ್ನು ಕ್ರಯಕ್ಕೆ ಬರೆಸಿಕೊಂಡು ಅಂತ್ಯಕ್ರಿಯೆ ಮಾಡಲಾಗ್ತಿದೆ. ರಂಗನಾಥನ ಆಶೀರ್ವಾದದಿಂದ ನಾನು ಪ್ರಧಾನಿ ಆಗುವಂತಾಯ್ತು. ನಾನು ಪ್ರಧಾನಿಯಾಗಲು ಪತ್ನಿಯೂ ಕಾರಣವೆಂದು ಕಣ್ಣೀರಾದರು.
ನಾನು ಕಣ್ಣೀರು ಹಾಕಲ್ಲ ಮಾತನಾಡುತ್ತೇನೆ, ನನಗೆ ಶಕ್ತಿ ತುಂಬಿದ್ದೇ ಪತ್ನಿ. ನನ್ನ ಸ್ನೇಹಿತರಾದ ಡಾ.ಕೃಷ್ಣ, ಹೆಣ್ಣುಮಕ್ಕಳು, ಅಳಿಯಂದಿರು ಇದೇ ಸ್ಥಳದಲ್ಲಿ ಅಂತ್ಯಕ್ರಿಯೆ ಮಾಡಬೇಕೆಂದು ತೀರ್ಮಾನ ಮಾಡಿದರು. ಮಳೆ ಬರುತ್ತೆ ಅಂದುಕೊಂಡಿದ್ದರು, ಎಳ್ಳಷ್ಟು ತೊಂದರೆ ಆಗಲ್ಲ ಎಂದಿದ್ದೆ. ನನ್ನ ರಾಜಕೀಯ ಬೆಳವಣಿಗೆಗೆ ಶಕ್ತಿಕೊಟ್ಟವನು ರಂಗನಾಥಸ್ವಾಮಿ. ಒಂದೆಡೆ ರಂಗನಾಥ, ಮತ್ತೊಂದೆಡೆ ಕುಲದೇವರು ದೇವೇಶ್ವರನ ಆಶೀರ್ವಾದ. ನನ್ನ ಬೆಳವಣಿಗೆಗೆ ನಮ್ಮ ಕುಟುಂಬದ ಎಲ್ಲರೂ ಕಾರಣ. ನನ್ನ ಪತ್ನಿ ಚೆನ್ನಮ್ಮ ಅನ್ನಪೂರ್ಣೆ ಎಂದು ಉತ್ಪ್ರೇಕ್ಷೆಯಿಂದ ಹೇಳಲ್ಲ. ಅವರನ್ನು ಸ್ವಾಮಿಯ ಸಾನ್ನಿಧ್ಯಕ್ಕೆ ಕಳಿಸಿಕೊಡುತ್ತೇನೆ. ನನ್ನ ಬೆಳವಣಿಗೆಗೆ ಪ್ರತಿ ಹಂತದಲ್ಲೂ ಪತ್ನಿ ಚೆನ್ನಮ್ಮ ನೆರವಾದರು. ಇದನ್ನು ವಿಶ್ಲೇಷಣೆ ಮಾಡುವುದು ಕಷ್ಟ ಎಂದು ಗದ್ಗದಿತರಾದರು.