ಬಿಡಬ್ಲ್ಯೂಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ಸ್ಪರ್ಧೆಯ ಪ್ರೀ-ಕ್ವಾರ್ಟರ್ ಫೈನಲ್ ಹಂತಕ್ಕೇರಿರುವ ಭಾರತದ ತಾರಾ ಆಟಗಾರ್ತಿ ಪಿ ವಿ ಸಿಂಧು, ತಮ್ಮ ಪಂದ್ಯವನ್ನು ವೀಕ್ಷಿಸಿ ಪ್ರೋತ್ಸಾಹಿಸಿದ ಕೇಂದ್ರ ಸಚಿವ ಕಿರಣ್ ರಿಜಿಜು ಅವರಿಗೆ ವಿಶೇಷ ಧನ್ಯವಾದ ತಿಳಿಸಿದ್ದಾರೆ. ಪಂದ್ಯದ ಬಳಿಕ ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ತಮ್ಮ ಅನಿಸಿಕೆ ಹಂಚಿಕೊಂಡಿರುವ ಅವರು, ರಿಜಿಜು ಅವರೊಂದಿಗಿನ ಆತ್ಮೀಯ ಬಾಂಧವ್ಯವನ್ನು ನೆನಪಿಸಿಕೊಂಡಿದ್ದಾರೆ.
ಪಂದ್ಯ ವೀಕ್ಷಿಸಲು ಬಂದಿದ್ದಕ್ಕಾಗಿ ಧನ್ಯವಾದ ತಿಳಿಸಿದ ಸಿಂಧು, ಪಂದ್ಯದ ಕೊನೆಯ ಕ್ಷಣಗಳು ಕೊಂಚ ಆತಂಕಕಾರಿಯಾಗಿದ್ದರೂ ಅಂತಿಮವಾಗಿ ಜಯ ಗಳಿಸಲು ಸಾಧ್ಯವಾಯಿತು ಎಂದು ಬರೆದುಕೊಂಡಿದ್ದಾರೆ. ಇದರೊಂದಿಗೆ ಕಿರಣ್ ರಿಜಿಜು ಅವರು ತಮಗೆ ಮತ್ತು ತಮ್ಮ ಕುಟುಂಬಕ್ಕೆ ಕೇವಲ ಒಬ್ಬ ನಾಯಕರಾಗಿ ಮಾತ್ರವಲ್ಲದೆ, ಹಿರಿಯ ಸಹೋದರನಂತೆ ಸದಾ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ತಮ್ಮ ಭಾವುಕ ಸಾಲುಗಳಲ್ಲಿ ಉಲ್ಲೇಖಿಸಿದ್ದಾರೆ.
ಕ್ರೀಡಾ ಸಚಿವರಾಗಿದ್ದ ಅವಧಿಯಿಂದಲೂ ಕಿರಣ್ ರಿಜಿಜು ಅವರು ಭಾರತೀಯ ಬ್ಯಾಡ್ಮಿಂಟನ್ ಮತ್ತು ಸಿಂಧು ಅವರ ಸಾಧನೆಗಳನ್ನು ಹತ್ತಿರದಿಂದ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. 2019 ರ ವಿಶ್ವ ಚಾಂಪಿಯನ್ ಷಿಪ್ ನಲ್ಲಿ ಸಿಂಧು ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದಾಗಲೂ ರಿಜಿಜು ಅವರು ಮುಕ್ತವಾಗಿ ಅಭಿನಂದಿಸಿದ್ದರು. ಇದೀಗ ಸಿಂಧು ಹಂಚಿಕೊಂಡಿರುವ ಈ ಸಂದೇಶವು ಅವರ ನಡುವಿನ ನಿಕಟ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ.
“>