ಬೆಂಗಳೂರು: ಪೊಲೀಸ್ ಠಾಣೆಗೆ ನುಗ್ಗುವುದಾಗಿ ಎಚ್ಚರಿಕೆ ನೀಡಿದ್ದ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಕರ್ನಾಟಕ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಎಚ್.ಎಸ್. ಮಂಜುನಾಥ್ ಗೌಡ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಿಂಹ ಅವರ ಹೇಳಿಕೆಯನ್ನು ಹತಾಶೆಯ ಪರಮಾವಧಿ ಎಂದು ಕರೆದಿರುವ ಅವರು, ತಮ್ಮ ಸಾಮಾಜಿಕ ಜಾಲತಾಣ 'ಎಕ್ಸ್' (ಟ್ವಿಟರ್) ಖಾತೆಯಲ್ಲಿ ಕಟುವಾದ ಶಬ್ದಗಳಿಂದ ತರಾಟೆಗೆ ತೆಗೆದುಕೊಂಡಿದ್ದಾರೆ.
'ಸ್ವಪಕ್ಷದಲ್ಲೇ ಕಸದ ಬುಟ್ಟಿಗೆ ಬಿದ್ದಿರುವ ವ್ಯಕ್ತಿ':
ಪ್ರತಾಪ್ ಸಿಂಹ ಅವರನ್ನು 'ಪುಡಿ ರೌಡಿ' ಎಂದು ಜರೆದಿರುವ ಮಂಜುನಾಥ್, "ಕಾನೂನಿಗೆ ಗೌರವ ನೀಡುವುದನ್ನು ಮೊದಲು ಕಲಿಯಿರಿ. ಬಿಜೆಪಿಯವರೇ ನಿಮಗೆ ಬಾಗಿಲು ಮುಚ್ಚಿದ್ದಾರೆ. ಸ್ವಂತ ಪಕ್ಷದ ಕಚೇರಿಯ ಬಾಗಿಲು ತೆರೆಸಿ ಟಿಕೆಟ್ ಪಡೆಯಲು ಯೋಗ್ಯತೆ ಇಲ್ಲದವರು, ಈಗ ಪೊಲೀಸ್ ಠಾಣೆಗೆ ನುಗ್ಗುತ್ತೇನೆ ಎಂದು ಅಬ್ಬರಿಸುತ್ತಿರುವುದು ನಿಮ್ಮ ರಾಜಕೀಯ ಹತಾಶೆಯನ್ನು ತೋರಿಸುತ್ತದೆ. ಇಂತಹ ಪುಂಡಾಟಿಕೆಯ ಕಾರಣಕ್ಕಾಗಿಯೇ ಬಿಜೆಪಿಯವರು ನಿಮಗೆ ಲೋಕಸಭಾ ಟಿಕೆಟ್ ನೀಡದೆ ಕಸದ ಬುಟ್ಟಿಗೆ ಎಸೆದಿದ್ದಾರೆ" ಎಂದು ಕುಟುಕಿದ್ದಾರೆ.
ಸಂಸತ್ ಭದ್ರತಾ ಲೋಪ ಪ್ರಸ್ತಾಪಿಸಿ ಆಕ್ರೋಶ:
ಕಳೆದ ವರ್ಷ ಸಂಸತ್ ಭವನದೊಳಗೆ ನಡೆದ ಅನಿಲ ಸ್ಫೋಟಕ ಘಟನೆಯನ್ನು ಪ್ರಸ್ತಾಪಿಸಿದ ಅವರು, "ನಿಮ್ಮ ಶಿಫಾರಸು ಪತ್ರ ಪಡೆದ ಚೇಲಾಗಳಿಗೆ ಬಾಂಬ್ ಕೊಟ್ಟು ಸಂಸತ್ತಿನೊಳಗೆ ನುಗ್ಗಿಸಿದಷ್ಟು ಸುಲಭವಲ್ಲ ಪೊಲೀಸ್ ಠಾಣೆಗೆ ನುಗ್ಗುವುದು. ಠಾಣೆ ಮುಂದೆ ಪುಂಡಾಟಿಕೆ, ಶೌರ್ಯ ಪ್ರದರ್ಶನ ಮಾಡಿದರೆ ಬಿಜೆಪಿಯಲ್ಲಿ ಟಿಕೆಟ್ ಸಿಗುವುದಿಲ್ಲ; ತಾಕತ್ತಿದ್ದರೆ ಬಿ.ಎಸ್. ಯಡಿಯೂರಪ್ಪ ಅವರ ಮನೆ ಮುಂದೆ ಹೋಗಿ ಗದ್ದಲ ನಡೆಸಿ" ಎಂದು ಸವಾಲು ಹಾಕಿದ್ದಾರೆ.
ಅಯೋಧ್ಯೆ ಪ್ರಸ್ತಾಪಿಸಿ ಧರ್ಮದ್ರೋಹಿ ಎಂದು ಕಿಡಿ:
"ನಿಮಗೆ ಏಕಾಏಕಿ ಹಿಂದೂ ದೇವರ ಮೇಲೆ ಭಕ್ತಿ ಹುಟ್ಟಿಕೊಂಡಿದೆ. ಅಯೋಧ್ಯೆಯಲ್ಲಿ ನಿಮ್ಮದೇ ಪಕ್ಷದವರು ಹುಂಡಿ ಲೂಟಿ ಹೊಡೆದಾಗ ನಿಮ್ಮ ಪೌರುಷ ಎಲ್ಲಿ ಅಡ ಇಟ್ಟಿದ್ದಿರಿ? ಸ್ವಪಕ್ಷೀಯರೇ ಹುಂಡಿ ಕಳ್ಳತನ ಮಾಡಿದಾಗ ಧ್ವನಿ ಎತ್ತದ ನೀವು ಧರ್ಮದ್ರೋಹಿ. ನಿಮಗೆ ಹಿಂದೂ ಧರ್ಮ ಮತ್ತು ದೇವರ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಕಾಂಗ್ರೆಸ್ ಸರ್ಕಾರಕ್ಕೆ ಎಲ್ಲಾ ದೇವರ ಮೇಲೂ ಭಕ್ತಿ, ಗೌರವವಿದೆ. ಭಕ್ತರಿಗೆ ಸಕಲ ಸೌಲಭ್ಯ ಕಲ್ಪಿಸುತ್ತೇವೆ, ಆದರೆ ಕಾನೂನು ಕೈಗೆತ್ತಿಕೊಳ್ಳುವ ಪುಂಡಾಟಿಕೆಯನ್ನು ಸಹಿಸುವುದಿಲ್ಲ" ಎಂದು ಎಚ್ಚರಿಸಿದ್ದಾರೆ.
ಪೊಲೀಸ್ ಬ್ಯಾರಿಕೇಡ್ಗಳ ಮೇಲೆ ಕಾರು ಹರಿಸಿ ದರ್ಪ ತೋರುವುದನ್ನು ಬಿಟ್ಟು, ನಿಮ್ಮದೇ ಪಕ್ಷದಲ್ಲಿ ಧರ್ಮ, ವಿಭೂತಿ ಮತ್ತು ನಾಮದ ಬಗ್ಗೆ ವ್ಯಂಗ್ಯವಾಡುವ ನಾಯಕರಿಗೆ ಮೊದಲು ಮುತ್ತಿಗೆ ಹಾಕಿ. ಕೇವಲ ರಾಜಕೀಯ ಲಾಭಕ್ಕಾಗಿ ಧರ್ಮವನ್ನು ದುರ್ಬಳಕೆ ಮಾಡಿಕೊಂಡರೆ ನಾಡಿನ ಜನತೆಯಾಗಲಿ, ಆ ದೇವರಾಗಲಿ ನಿಮ್ಮನ್ನು ಕ್ಷಮಿಸುವುದಿಲ್ಲ ಎಂದು ಮಂಜುನಾಥ್ ಗೌಡ ಗುಡುಗಿದ್ದಾರೆ.
https://twitter.com/manjunathansui/status/2099053010085429511