ಭಾರತೀಯ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಅವರ ಆಟಗಾರರ ಆಯ್ಕೆ ನೀತಿಯ ವಿರುದ್ಧ ಭಾರತದ ಮಾಜಿ ಕ್ರಿಕೆಟಿಗ ಮತ್ತು ಮಾಜಿ ಆಯ್ಕೆ ಸಮಿತಿ ಅಧ್ಯಕ್ಷ ಕೃಷ್ಣಮಾಚಾರಿ ಶ್ರೀಕಾಂತ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಫ್ಘಾನಿಸ್ತಾನ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 15 ವರ್ಷದ ಉದಯೋನ್ಮುಖ ಆಟಗಾರ ವೈಭವ್ ಸೂರ್ಯವಂಶಿ ಅವರನ್ನು ಪಂದ್ಯಾವಳಿಯಿಂದ ಹೊರಗಿಟ್ಟ ನಿರ್ಧಾರವನ್ನು ಅವರು ಬಹಿರಂಗವಾಗಿಯೇ ಟೀಕಿಸಿದ್ದಾರೆ.
ಝಿಂಬಾಬ್ವೆ ವಿರುದ್ಧದ ಕಳೆದ ಟಿ20 ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ‘ಸರಣಿ ಶ್ರೇಷ್ಠ’ ಪ್ರಶಸ್ತಿ ಪಡೆದಿದ್ದರೂ ಸಹ, ಸೂರ್ಯವಂಶಿ ಅವರನ್ನು ಪಕ್ಕಕ್ಕೆ ತಳ್ಳಿ ಸಂಜು ಸ್ಯಾಮ್ಸನ್ ಅವರಿಗೆ ಅವಕಾಶ ನೀಡಲಾಗಿತ್ತು. ಆದರೆ ಈ ನಿರ್ಧಾರ ಫಲ ನೀಡಲಿಲ್ಲ. ಈ ಪಂದ್ಯದಲ್ಲಿ ಸ್ಯಾಮ್ಸನ್ ಕೇವಲ 10 ರನ್ ಗಳಿಸಿ ಔಟಾದರು. ಈ ವಿಷಯವಾಗಿ ಮ್ಯಾನೇಜ್ಮೆಂಟ್ ಮೇಲೆ ವಾಗ್ದಾಳಿ ನಡೆಸಿರುವ ಶ್ರೀಕಾಂತ್, ಸೂರ್ಯವಂಶಿ ಮತ್ತು ಸ್ಯಾಮ್ಸನ್ ಇಬ್ಬರನ್ನೂ ನಿಭಾಯಿಸುತ್ತಿರುವ ರೀತಿ ಸರಿಯಿಲ್ಲ ಎಂದಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ಶ್ರೀಕಾಂತ್, ವೈಭವ್ ಸೂರ್ಯವಂಶಿ ತಂಡದಲ್ಲಿ ಇಲ್ಲದಿರುವುದನ್ನು ನೋಡಿ ನನ್ನ ಹೆಂಡತಿಯೇ ಆಶ್ಚರ್ಯ ವ್ಯಕ್ತಪಡಿಸಿ ಜಗಳವಾಡಲು ಬಂದಳು. ಕಳೆದ ಪಂದ್ಯದ ಶ್ರೇಷ್ಠ ಆಟಗಾರನನ್ನೇ ಹೊರಗಿಟ್ಟಿದ್ದನ್ನು ಕಂಡು ಪಂದ್ಯ ನೋಡುವುದನ್ನು ಬಿಟ್ಟು ಸಿನಿಮಾ ನೋಡಲು ಶುರು ಮಾಡಿದೆವು ಎಂದು ಹೇಳಿದ್ದಾರೆ. ಸೂರ್ಯವಂಶಿಯಂತಹ ಪ್ರತಿಭೆಗೆ ಮ್ಯಾನೇಜ್ಮೆಂಟ್ ಸರಿಯಾದ ಗೌರವ ನೀಡುತ್ತಿಲ್ಲ. ದುಲೀಪ್ ಟ್ರೋಫಿ, ಭಾರತ ಎ ತಂಡ, ಐಪಿಎಲ್ ಮತ್ತು ಟಿ20 ಸರಣಿಗಳಲ್ಲಿ ಸತತವಾಗಿ ರನ್ ಗಳಿಸಿರುವ ಆಟಗಾರನಿಗೆ ಮುಂದಿನ ಪಂದ್ಯಗಳಲ್ಲಿ ಜಾಗ ನೀಡದಿದ್ದರೆ ಆತನ ಆತ್ಮವಿಶ್ವಾಸ ಕುಸಿಯುತ್ತದೆ ಎಂದು ಶ್ರೀಕಾಂತ್ ಆತಂಕ ವ್ಯಕ್ತಪಡಿಸಿದ್ದಾರೆ.
ಅದೇ ರೀತಿ ಸಂಜು ಸ್ಯಾಮ್ಸನ್ ವಿಷಯದಲ್ಲೂ ತಂಡದ ನಿರ್ಧಾರ ಗೊಂದಲದಿಂದ ಕೂಡಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 2026ರ ಟಿ20 ವಿಶ್ವಕಪ್ನಲ್ಲಿ ‘ಸರಣಿ ಶ್ರೇಷ್ಠ’ ಆಟಗಾರನಾಗಿದ್ದ ಸ್ಯಾಮ್ಸನ್, ಇತ್ತೀಚಿನ ಫಾರ್ಮ್ ಕೊರತೆಯಿಂದಾಗಿ ತಂಡದಿಂದ ಹೊರಬಿದ್ದಿದ್ದರು. ಇಂಗ್ಲೆಂಡ್ ಪ್ರವಾಸದ ವೇಳೆಯೂ ಸ್ಯಾಮ್ಸನ್ ಬದಲಿಗೆ ಸೂರ್ಯವಂಶಿಗೆ ಅವಕಾಶ ನೀಡಲಾಗಿತ್ತು. ಆದರೆ ಈಗ ಮತ್ತೆ ಸ್ಯಾಮ್ಸನ್ ಅವರನ್ನು ವಾಪಸ್ ಕರೆತರಲಾಗಿದೆ.
ಯಾವುದೇ ಒಬ್ಬ ಆಟಗಾರನಿಗೆ ಸತತ ಅವಕಾಶ ನೀಡದೆ, ಇಬ್ಬರನ್ನೂ ತಲಾ ಎರಡು ಪಂದ್ಯಗಳಿಗೆ ಸೀಮಿತಗೊಳಿಸಿ ತಂಡದಿಂದ ತೆಗೆದುಹಾಕುವುದು ಆಟಗಾರರ ಭವಿಷ್ಯಕ್ಕೆ ಒಳ್ಳೆಯದಲ್ಲ. ಇದು ತಂಡದ ಪ್ರತಿಯೊಬ್ಬ ಆಟಗಾರನ ಮನಸ್ಸಿನಲ್ಲಿ ಅನುಮಾನ ಮತ್ತು ಗೊಂದಲವನ್ನು ಸೃಷ್ಟಿಸುತ್ತದೆ ಎಂದು ಶ್ರೀಕಾಂತ್ ಎಚ್ಚರಿಸಿದ್ದಾರೆ. ಮೊದಲ ಪಂದ್ಯದಲ್ಲಿ ಸ್ಯಾಮ್ಸನ್ ವಿಫಲರಾಗಿರುವುದರಿಂದ, ಎರಡನೇ ಪಂದ್ಯದಲ್ಲಿ ಯಾರಿಗೆ ಅವಕಾಶ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ.