ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ವಿಜಯ್ ಶಂಕರ್ ತಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಹರಿತವಾದ ಟ್ರೋಲ್ಗಳ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಭಾರತದ ಪ್ರಸಿದ್ಧ ಬೌಲರ್ ರವಿಚಂದ್ರನ್ ಅಶ್ವಿನ್ ಅವರ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ಅವರು, ಇಂತಹ ಮಾನಸಿಕ ಕಿರುಕುಳಗಳು ಕ್ರಿಕೆಟಿಗರ ವೃತ್ತಿಜೀವನವನ್ನೇ ಅಂತ್ಯಗೊಳಿಸುವಷ್ಟು ಅಪಾಯಕಾರಿ ಎಂದು ಹೇಳಿದ್ದಾರೆ.
ಲಂಕಾ ಪ್ರೀಮಿಯರ್ ಲೀಗ್ ಪಂದ್ಯವೊಂದರಲ್ಲಿ ಕೊನೆಯ ಓವರ್ನಲ್ಲಿ 22 ರನ್ ಗಳಿಸಬೇಕಾದ ಸಂದರ್ಭ ಎದುರಾಗಿತ್ತು. ಕೊನೆಯ ಕ್ರಮಾಂಕದ ಆಟಗಾರರೊಂದಿಗೆ ಬ್ಯಾಟಿಂಗ್ ಮಾಡುತ್ತಿದ್ದ ಕಾರಣ ಶ್ರಮವಹಿಸಿ ಸಿಂಗಲ್ಸ್ ತೆಗೆದುಕೊಳ್ಳದೆ ದೊಡ್ಡ ಹೊಡೆತಗಳಿಗೆ ಯತ್ನಿಸಿದೆ. ತಂಡದ ನೆಟ್ ರನ್ ರೇಟ್ ಕಾಯ್ದುಕೊಳ್ಳುವ ಉದ್ದೇಶವೂ ಇದರ ಹಿಂದಿತ್ತು. ಆದರೆ ಆ ಓವರ್ನಲ್ಲಿ ರನ್ ಗಳಿಸಲು ಸಾಧ್ಯವಾಗದೆ ಕೊನೆಯ ಎಸೆತದಲ್ಲಿ ಔಟಾದೆ. ಈ ಸಂದರ್ಭವನ್ನು ಅರ್ಥಮಾಡಿಕೊಳ್ಳದೆ ಜನ ಟ್ರೋಲ್ ಮಾಡಲು ಶುರು ಮಾಡಿದರು ಎಂದು ಶಂಕರ್ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ತಮ್ಮ ಪರಿಸ್ಥಿತಿಯನ್ನು ವಿವರಿಸಿದ 35 ವರ್ಷದ ಆಲ್ರೌಂಡರ್, ಇಂತಹ ಘಟನೆಗಳು ಯಾವುದೇ ಆಟಗಾರನ ಆತ್ಮವಿಶ್ವಾಸವನ್ನು ಕುಗ್ಗಿಸುತ್ತವೆ. ಮತ್ತೊಂದು ಲೀಗ್ ಅಥವಾ ಪಂದ್ಯಾವಳಿಗೆ ಹೋದಾಗ ಜನರು ನನ್ನನ್ನು ಹೇಗೆ ನೋಡಬಹುದು ಎನ್ನುವ ಭಯ ಮೂಡುತ್ತದೆ. ದೇಶೀಯ ಕ್ರಿಕೆಟ್ ಹಾಗೂ ಐಪಿಎಲ್ಗೆ ವಿದಾಯ ಹೇಳಿ ಜಾಗತಿಕ ಲೀಗ್ಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಬಯಸುತ್ತಿರುವ ನನಗೆ ಈ ರೀತಿಯ ಟ್ರೋಲ್ಗಳು ದೊಡ್ಡ ಹಿನ್ನಡೆ ಉಂಟುಮಾಡುತ್ತವೆ ಎಂದಿದ್ದಾರೆ.
ಭಾರತದ ಪರ 12 ಏಕದಿನ ಹಾಗೂ 9 ಟಿ20 ಪಂದ್ಯಗಳನ್ನು ಆಡಿರುವ ವಿಜಯ್ ಶಂಕರ್, 2019ರ ವಿಶ್ವಕಪ್ ತಂಡದಲ್ಲೂ ಭಾಗವಹಿಸಿದ್ದರು. ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್, ಗುಜರಾತ್ ಟೈಟನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳನ್ನು ಪ್ರತಿನಿಧಿಸಿದ್ದ ಅವರು, ಪ್ರಸ್ತುತ ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್ನಲ್ಲಿ ಡಬ್ಲಿನ್ ಗಾರ್ಡಿಯನ್ಸ್ ಪರ ಆಡುತ್ತಿದ್ದಾರೆ.