ತೀರ್ಥಹಳ್ಳಿ: ಕಸ್ತೂರಿ ರಂಗನ್ ವರದಿಯ ಅನುಷ್ಠಾನದ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡದೆ, ಮಲೆನಾಡಿನ ಜನರ ಹಾಗೂ ರೈತರ ಹಿತದೃಷ್ಟಿಯಿಂದ ಎಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕಾದ ಅನಿವಾರ್ಯತೆ ಇದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ. ವೈ. ರಾಘವೇಂದ್ರ ಪ್ರತಿಪಾದಿಸಿದ್ದಾರೆ.
ಇಂದು ಶಿವಕುಮಾರ್ ಜಿಲ್ಲೆಯ ತೀರ್ಥಹಳ್ಳಿ ನಡೆದ ಕಸ್ತೂರಿ ರಂಗನ್ ವರದಿ ಕುರಿತ ಸಾರ್ವಜನಿಕರ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತಾನಾಡಿದರು.
ವರದಿಯ ಹಿನ್ನೆಲೆ ಮತ್ತು ಮಲೆನಾಡಿನ ಆತಂಕ
ಕಸ್ತೂರಿ ರಂಗನ್ ವರದಿ ಜಾರಿಗೆ ಬರಲು ಯುಪಿಎ ಸರ್ಕಾರದ ಅವಧಿಯಲ್ಲಿ ‘ಗೋವಾ ಫೌಂಡೇಶನ್’ ಸುಪ್ರೀಂ ಕೋರ್ಟ್ ಹಾಗೂ ಹಸಿರು ನ್ಯಾಯಮಂಡಳಿಗೆ (NGT) ಅರ್ಜಿ ಸಲ್ಲಿಸಿದ್ದೇ ಮೂಲ ಕಾರಣವಾಯಿತು. ನಂತರ ರಚನೆಯಾದ ಗಾಡ್ಗೀಳ್ ವರದಿಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕಸ್ತೂರಿ ರಂಗನ್ ಸಮಿತಿ ರಚನೆಯಾಯಿತು. ಈ ವರದಿಯ ಅನ್ವಯ ರಾಜ್ಯದ ಸುಮಾರು 20,000 ಚದರ ಕಿಲೋಮೀಟರ್ ಪ್ರದೇಶ ಹಾಗೂ ಶಿವಮೊಗ್ಗ ಜಿಲ್ಲೆಯ 400ಕ್ಕೂ ಅಧಿಕ ಹಳ್ಳಿಗಳು ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಒಳಪಡಲಿವೆ. ವಿಶೇಷವಾಗಿ ತೀರ್ಥಹಳ್ಳಿ, ಸಾಗರ, ಹೊಸನಗರ ಸೇರಿದಂತೆ ಮಲೆನಾಡಿನ ಜನವಸತಿ ಪ್ರದೇಶಗಳು ಸಂಕಷ್ಟಕ್ಕೆ ಸಿಲುಕುವ ಭೀತಿ ಎದುರಾಗಿದೆ ಎಂದರು.
7ನೇ ಕರಡು ಅಧಿಸೂಚನೆ ಮತ್ತು ಹೊಸ ಷರತ್ತುಗಳು
ಕೇಂದ್ರ ಸರ್ಕಾರ ಇತ್ತೀಚೆಗೆ ಹೊರಡಿಸಿರುವ 7ನೇ ಕರಡು ಅಧಿಸೂಚನೆಯಲ್ಲಿ ಈ ಹಿಂದೆ ಪ್ರಸ್ತಾಪಿಸಲಾಗಿದ್ದ 5 ರಿಂದ 10 ಕಿಲೋಮೀಟರ್ ವ್ಯಾಪ್ತಿಯ ಬಫರ್ ಝೋನ್ ಅನ್ನು ಕೈಬಿಟ್ಟಿರುವುದು ಸಮಾಧಾನಕರ ಸಂಗತಿ. ಆದರೆ, ಯಾವುದೇ ಒಂದು ಗ್ರಾಮದ ಕೇವಲ ಶೇ. 20ರಷ್ಟು ಭಾಗ ಪರಿಸರ ಸೂಕ್ಷ್ಮ ವಲಯಕ್ಕೆ ಒಳಪಟ್ಟರೂ, ಇಡೀ ಗ್ರಾಮವನ್ನೇ ಈ ವರದಿಯ ಚೌಕಟ್ಟಿಗೆ ಸೇರಿಸಬೇಕೆಂಬ ಷರತ್ತು ಮಲೆನಾಡಿನ ರೈತರು ಮತ್ತು ನಾಗರಿಕರಲ್ಲಿ ತೀವ್ರ ಆತಂಕವನ್ನು ಮೂಡಿಸಿದೆ ಎಂದು ಹೇಳಿದರು.
ಕಾನೂನಾತ್ಮಕ ಒತ್ತಡ ಹಾಗೂ ಹಿಂದಿನ ಸರ್ಕಾರಗಳ ನಿಲುವು
ಈ ವಿಷಯ ಕೇವಲ ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ಅಧಿಕಾರ ವ್ಯಾಪ್ತಿಯಲ್ಲಿ ಮಾತ್ರ ಉಳಿದಿಲ್ಲ, ಸುಪ್ರೀಂ ಕೋರ್ಟ್ ಮತ್ತು ಹಸಿರು ನ್ಯಾಯಮಂಡಳಿಯ ಕಠಿಣ ಆದೇಶಗಳೂ ಸರ್ಕಾರಗಳ ಮೇಲಿವೆ. ಈ ಹಿಂದೆ ಸಿದ್ದರಾಮಯ್ಯ, ಬಿ. ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರಗಳು ಸಹ ಕಸ್ತೂರಿ ರಂಗನ್ ವರದಿ ಅಪ್ರಸ್ತುತ ಎಂಬುದನ್ನು ಕೇಂದ್ರಕ್ಕೆ ಸ್ಪಷ್ಟಪಡಿಸಿದ್ದವು. ರಾಜ್ಯದಲ್ಲಿ ಈಗಾಗಲೇ ಕಟ್ಟುನಿಟ್ಟಿನ ಅರಣ್ಯ ಸಂರಕ್ಷಣಾ ಕಾಯ್ದೆಗಳು ಜಾರಿಯಲ್ಲಿದ್ದು, ಹೆಚ್ಚುವರಿಯಾಗಿ ಕಸ್ತೂರಿ ರಂಗನ್ ವರದಿಯ ಅಗತ್ಯವಿಲ್ಲ ಎಂದು ಈ ಹಿಂದಿನ ಎಲ್ಲ ಮುಖ್ಯಮಂತ್ರಿಗಳೂ ಕೇಂದ್ರಕ್ಕೆ ಆಕ್ಷೇಪಣೆ ಸಲ್ಲಿಸಿದ್ದರು ಎಂದರು.
ಭೌತಿಕ ಸರ್ವೆ ನಡೆಸಿ ವಾಸ್ತವ ದಾಖಲಿಸಲು ಆಗ್ರಹ
ಕೇವಲ ಸ್ಯಾಟಲೈಟ್ ಆಧಾರಿತ ಸರ್ವೆಯನ್ನು ಆಧರಿಸಿ ನಿರ್ಧಾರ ಕೈಗೊಳ್ಳುವುದು ಸೂಕ್ತವಲ್ಲ. ಕಂದಾಯ ಹಾಗೂ ಅರಣ್ಯ ಇಲಾಖೆಗಳು ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿ, ಭೌತಿಕವಾಗಿ ಸರ್ವೆ ಕೈಗೊಳ್ಳಬೇಕು. ರೈತರ ತೋಟಗಳು, ಕೃಷಿ ಭೂಮಿ ಮತ್ತು ನೈಸರ್ಗಿಕ ಪರಿಸರವನ್ನು ಪ್ರತ್ಯೇಕವಾಗಿ ಗುರುತಿಸಿ ನಿಖರ ದಾಖಲೆಗಳನ್ನು ಸಿದ್ಧಪಡಿಸಬೇಕು. ಮಲೆನಾಡಿನ ರೈತರು ಅರಣ್ಯ ಇಲಾಖೆಗಿಂತಲೂ ಹೆಚ್ಚು ಪರಿಸರ ಪ್ರೇಮಿಗಳಾಗಿದ್ದು, ಪ್ರಕೃತಿಯನ್ನು ಸಂರಕ್ಷಿಸಿಕೊಂಡು ಬಂದಿದ್ದಾರೆ ಎಂದರು.
ಡೀಮ್ಡ್ ಫಾರೆಸ್ಟ್ ಮತ್ತು ಮುಳುಗಡೆ ಸಂತ್ರಸ್ತರ ಸಮಸ್ಯೆ ಪರಿಹಾರಕ್ಕೆ ಒತ್ತು
ಶಿವಮೊಗ್ಗ ಜಿಲ್ಲೆಯಲ್ಲಿ ದಶಕಗಳಿಂದ ಬಾಕಿ ಇರುವ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಹಾಗೂ ಡೀಮ್ಡ್ ಫಾರೆಸ್ಟ್ ಸಮಸ್ಯೆಯನ್ನು ಬಗೆಹರಿಸಲು ಈ ಹಿಂದೆ ಯಡಿಯೂರಪ್ಪ ಅವರ ಸರ್ಕಾರ 9,400 ಎಕರೆ ಜಮೀನಿನ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸಿತ್ತು. ಪ್ರಸ್ತುತ ಈ ವಿಷಯ ಸುಪ್ರೀಂ ಕೋರ್ಟ್ನಲ್ಲಿದ್ದು, ರಾಜ್ಯ ಸರ್ಕಾರವು ಸಮರ್ಥ ಅಫಿಡವಿಟ್ ಸಲ್ಲಿಸಿ ಕಾನೂನು ಹೋರಾಟವನ್ನು ಮುಂದುವರಿಸಬೇಕಿದೆ. ಸರ್ಕಾರಗಳು ಹಾಗೂ ಜನಪ್ರತಿನಿಧಿಗಳು ಒಗ್ಗೂಡಿ ನ್ಯಾಯಾಲಯ ಮತ್ತು ಕೇಂದ್ರಕ್ಕೆ ಸೂಕ್ತ ದಾಖಲೆಗಳನ್ನು ಸಲ್ಲಿಸಿ ಮಲೆನಾಡಿನ ರೈತರಿಗೆ ಶಾಶ್ವತ ನ್ಯಾಯ ಕೊಡಿಸಬೇಕು ಎಂದು ಸಿಎಂ ಡಿ.ಕೆ ಶಿವಕುಮಾರ್ ಅವರಲ್ಲಿ ಮನವಿ ಮಾಡಿದರು.
ಈ ವೇಳೆ ವೇದಿಕೆಯಲ್ಲಿ ಅರಣ್ಯ ಸಚಿವ ರಾಮಗಾರೆಡ್ಡಿ, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ, ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು, ಚನ್ನಬಸಪ್ಪ, ಎಂಎಲ್ಸಿ ಧನಂಜಯ ಸರ್ಜಿ, ಅರುಣ್, ಬಲ್ಕಿಷ್ ಭಾನು, ಮಾಜಿ ಸಚಿವ ಕಿಮ್ಮಾನೆ ರತ್ನಾಕರ್ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..