ಶಿವಮೊಗ್ಗ: ಕಾರ್ಗಲ್ ವನ್ಯಜೀವಿ ವಲಯದ ಶರಾವತಿ ವನ್ಯಜೀವಿ ವಿಭಾಗದ ಹಲ್ಕೆ, ಮುಪ್ಪಾನೆ ಅರಣ್ಯ ಪ್ರದೇಶದಲ್ಲಿ ಪ್ರವಾಸಿಗರು ಕಾನೂನು ಬಾಹಿರವಾಗಿ ಪ್ರವೇಶಿಸಿದ್ದು ಸುದ್ದಿಯಾಗಿತ್ತು. ಇಂತಹ ಚಟುವಟಿಕೆ ನಡೆಸಿದರೇ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವುದಾಗಿ ಕಾರ್ಗಲ್ ವೈಲ್ಡ್ ಲೈಫ್ ವಲಯ ಅರಣ್ಯಾಧಿಕಾರಿ(RFO) ನವೀನ್ ಕುಮಾರ್.ಆರ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತಂತೆ ಕನ್ನಡ ನ್ಯೂಸ್ ನೌ ಜೊತೆಗೆ ಮಾತನಾಡಿದಂತ ಅವರು, ಕಾರ್ಗಲ್ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಯಾವುದೇ ಅಕ್ರಮ ಅಥವಾ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ಸಾರ್ವಜನಿಕರು ಅರಣ್ಯ ಇಲಾಖೆಯ ಗಮನಕ್ಕೆ ತಂದರೆ ತಕ್ಷಣವೇ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂಬುದಾಗಿ ತಿಳಿಸಿದರು.
ವಿಸ್ತಾರವಾದ ಹಿನ್ನೀರಿನ ಗಡಿ ಮತ್ತು ಸಿಬ್ಬಂದಿಯ ಮಿತಿ
ಕಾರ್ಗಲ್ ವನ್ಯಜೀವಿ ವಲಯದ ಶರಾವತಿ ವನ್ಯಜೀವಿ ವಿಭಾಗವು ಕೇವಲ ಒಂದೇ ಪ್ರವೇಶ ದ್ವಾರವನ್ನು ಹೊಂದಿಲ್ಲ. ಲಿಂಗನಮಕ್ಕಿ ಹಿನ್ನೀರು, ಅಂಬಾರಗುಡ್ಲು ಕ್ಯಾಂಪ್ ಹಿಂಭಾಗ ಹಾಗೂ ಸಿಗಂದೂರು ರಸ್ತೆಯುದ್ದಕ್ಕೂ ವಿಸ್ತಾರವಾಗಿ ಹರಡಿಕೊಂಡಿದೆ. ಜಲಾಶಯದ ಹಿನ್ನೀರು ಎಲ್ಲ ಕಡೆಗಳಲ್ಲೂ ಇರುವುದರಿಂದ ಜನರು ಎಲ್ಲಿಂದ ಬೇಕಾದರೂ ಒಳನುಗ್ಗಲು ಅವಕಾಶವಿದೆ. ಇಷ್ಟು ವಿಶಾಲವಾದ ವ್ಯಾಪ್ತಿಯಲ್ಲಿ ಯಾರು, ಎಲ್ಲಿಂದ ಬರುತ್ತಾರೆ ಎಂಬುದನ್ನು ಕೆಲವೊಮ್ಮೆ ಗಮನಕ್ಕೆ ಬರುವುದಿಲ್ಲ. ಸಾರ್ವಜನಿಕರು ಇಂತಹ ಅಕ್ರಮ ಚಟುವಟಿಕೆಗಳು ನಡೆದಾಗ ಇಲಾಖೆಯ ಗಮನಕ್ಕೆ ತಂದರೇ ಸೂಕ್ತ ಕ್ರಮವಹಿಸುವುದಾಗಿ ಹೇಳಿದರು.
ವನ್ಯಜೀವಿ ವಲಯದಲ್ಲಿ ಅಕ್ರಮ ಎಸಗುವವರ ವಿರುದ್ಧ ಕಠಿಣ ಕ್ರಮ
ಕಾಡಿನ ರಸ್ತೆ ಬದಿಯಲ್ಲಿ ಊಟ ಮಾಡುವ ಪ್ರವಾಸಿಗರಿಗೆ ಪ್ಲಾಸ್ಟಿಕ್ ಎಸೆಯದಂತೆ ಹಾಗೂ ಪರಿಸರ ಹಾಳುಮಾಡದಂತೆ ಇಲಾಖೆಯಿಂದ ನಿರಂತರವಾಗಿ ಎಚ್ಚರಿಕೆ ನೀಡಲಾಗುತ್ತಿದೆ. ಮದ್ಯಪಾನ ಮತ್ತಿತರ ಅಕ್ರಮ ಚಟುವಟಿಕೆಗಳು ಅಲ್ಲಲ್ಲಿ ನಡೆಯುತ್ತಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದರು.
ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ಸೂಕ್ತ ಕ್ರಮವೆಂದ DRFO
ಇನ್ನೂ ಮುಪ್ಪಾನೆ ಉಪ ವಲಯ ಅರಣ್ಯಾಧಿಕಾರಿ ಕಾರ್ತಿಕ್ ಮಾತನಾಡಿ ಮುಪ್ಪಾನೆ ವ್ಯಾಪ್ತಿಯ ವನ್ಯಜೀವಿ ವಲಯದಲ್ಲಿ ಅಕ್ರಮ ಚಟುವಟಿಕೆಯಲ್ಲಿ ಪ್ರವಾಸಿಗರು ನಿರತರಾದ ಬಗ್ಗೆ ಮಾಹಿತಿ ಗಮನಕ್ಕೆ ಬಂದಿದೆ. ಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾದ ನಂತ್ರ ಗಸ್ತು ಕಾರ್ಯಾಚರಣೆಯನ್ನು ಹೆಚ್ಚಿಸಲಾಗಿದೆ ಎಂದರು.
ಮುಪ್ಪಾನೆ ಲಾಂಚ್ ನಿಂತಿದ್ದ ಕಾರಣ ಕೆಲವೆಡೆ ಪ್ರವಾಸಿಗರು ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದಾಗ ಅರಣ್ಯ ಇಲಾಖೆಯ ಸಿಬ್ಬಂದಿ ಎಚ್ಚರಿಕೆ ನೀಡಿ, ಅನಗತ್ಯ ಚಟುವಟಿಕೆಗೆ ಕಡಿವಾಣ ಹಾಕಲಾಗಿದೆ. ಮುಂದೆ ಮತ್ತಷ್ಟು ಗಸ್ತು ಹೆಚ್ಚಿಸಲಾಗಿದ್ದು, ಪ್ರವಾಸಿಗರು ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆ ನಡೆಸಿದರೇ ಕಾನೂನಿನ ಅಡಿಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮವಹಿಸುವುದಾಗಿ ತಿಳಿಸಿದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..