ಬೆಂಗಳೂರು: ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿರುವ KPSC ಪಶು ವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ಮತ್ತಷ್ಟು ಕಾವು ಪಡೆದುಕೊಂಡಿದೆ. ಪ್ರಕರಣದ ಪ್ರಮುಖ ಆರೋಪಿಗಳಾದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಹಾಗೂ ಮಧ್ಯವರ್ತಿ ಬಸವರಾಜ್ ಕನ್ನಾಳೆಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದರೆ, ಇತ್ತ ತಲೆಮರೆಸಿಕೊಂಡಿರುವ ಕೆಪಿಎಸ್ಸಿ ಸದಸ್ಯೆ ಶಾಂತಾ ಹೊಸಮನಿ ಮನೆಗಳ ಮೇಲೆ ಸಿಐಡಿ ಅಧಿಕಾರಿಗಳು ಮಿಂಚಿನ ದಾಳಿ ನಡೆಸಿದ್ದಾರೆ.
14 ದಿನಗಳ ಜೈಲು ಶಿಕ್ಷೆ:
ಅಧಿಕಾರಿಗಳ ಕಸ್ಟಡಿ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ CID ಪೊಲೀಸರು ಆರೋಪಿಗಳನ್ನು 1 ನೇ ACJM ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. "ಪ್ರಸ್ತುತ ಇಬ್ಬರ ವಿಚಾರಣೆ ಪೂರ್ಣಗೊಂಡಿದ್ದು, ಅಗತ್ಯಬಿದ್ದರೆ ಮುಂದಿನ ದಿನಗಳಲ್ಲಿ ಮತ್ತೆ ಕಸ್ಟಡಿಗೆ ಪಡೆಯಲಾಗುವುದು" ಎಂದು ತನಿಖಾ ತಂಡ ನ್ಯಾಯಪೀಠಕ್ಕೆ ತಿಳಿಸಿತು. ವಾದ ಆಲಿಸಿದ ನ್ಯಾಯಾಧೀಶರು, ಗ್ಯಾನೇಂದ್ರ ಕುಮಾರ್ ಮತ್ತು ಬಸವರಾಜ್ಗೆ ಸೆಪ್ಟೆಂಬರ್ 23ರವರೆಗೆ (14 ದಿನ) ಜೈಲು ಶಿಕ್ಷೆ ವಿಧಿಸಿ ಆದೇಶಿಸಿದರು.
KPSC ಸದಸ್ಯೆಯ ನಿವಾಸಗಳ ಮೇಲೆ CID ದಾಳಿ:
ಇನ್ನೊಂದೆಡೆ, ಬಂಧನದ ಭೀತಿಯಿಂದ ತಲೆಮರೆಸಿಕೊಂಡಿರುವ KPSC ಸದಸ್ಯೆ ಶಾಂತಾ ಹೊಸಮನಿ ಅವರಿಗೆ ಸಿಐಡಿ ತೀವ್ರ ಶೋಧ ನಡೆಸುತ್ತಿದೆ. ರಾಜಧಾನಿಯ ಮತ್ತಿಕೆರೆ ಹಾಗೂ ನಾಗರಭಾವಿಯಲ್ಲಿರುವ ಅವರ ನಿವಾಸಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿರುವ ಅಧಿಕಾರಿಗಳು, ಹಗರಣಕ್ಕೆ ಸಂಬಂಧಿಸಿದ ಹಲವು ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲಿಸುತ್ತಿದ್ದಾರೆ. ಇದೇ ವೇಳೆ, ಶಾಂತಾ ಹೊಸಮನಿ ಶಿಫಾರಸಿನಿಂದ ನೇಮಕಾತಿ ಪಡೆದಿದ್ದಾರೆನ್ನಲಾದ ಅಭ್ಯರ್ಥಿ ಮಮತಾ ಅವರ ಕಲಬುರಗಿಯ 'ನ್ಯೂ ಓಜಾ ಲೇಔಟ್' ಮನೆ ಮೇಲೆಯೂ ದಾಳಿ ನಡೆದಿದೆ. ಇತ್ತ ಬಂಧನದಿಂದ ತಪ್ಪಿಸಿಕೊಳ್ಳಲು ಶಾಂತಾ ಹೊಸಮನಿ ಹಾಗೂ ಮಮತಾ ಇಬ್ಬರೂ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.
ಬೀದರ್ನ ಪ್ರಭಾವಿಗಳಿಗೆ 'ಸಿಐಡಿ' ಭಯ:
ಹಣಕಾಸು ವಹಿವಾಟಿನ ಜಾಡು ಹಿಡಿದು ಹೊರಟಿರುವ ತನಿಖಾಧಿಕಾರಿಗಳು, ಬಸವರಾಜ್ ಕನ್ನಾಳೆ ಖಾತೆಗೆ ಭಾರೀ ಪ್ರಮಾಣದ ಹಣ ವರ್ಗಾವಣೆ ಮಾಡಿರುವ ಶಂಕೆಯಡಿ ಹಲವರಿಗೆ ನೋಟಿಸ್ ನೀಡಲು ಸಿದ್ಧತೆ ನಡೆಸಿದ್ದಾರೆ. ಕನ್ನಾಳೆ ಜತೆ ಹಣಕಾಸಿನ ನಂಟು ಹೊಂದಿರುವ ಬೀದರ್ನ ಪವನ್ ರೆಡ್ಡಿ, RTO ಇನ್ಸ್ಪೆಕ್ಟರ್ ರಾಜಶೇಖರ್ ಚಿದ್ರಿ ಹಾಗೂ ಭಾಲ್ಕಿ ಸಹಕಾರಿ ಬ್ಯಾಂಕ್ ನಿರ್ದೇಶಕ ಓಂಕಾರ್ ಸೇರಿದಂತೆ ಹಲವು ಪ್ರಭಾವಿಗಳಿಗೆ ಈಗ ಜೈಲು ಭೀತಿ ಎದುರಾಗಿದೆ