ಲಾವೋಸ್ : ಲಾವೋಸ್ನಲ್ಲಿ ಆನೆಗಳ ಕಲ್ಯಾಣ, ವಿಶೇಷ ಪಶುವೈದ್ಯಕೀಯ ಆರೈಕೆ ಮತ್ತು ಸಂರಕ್ಷಣೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ 'ಮಂಡಲಾವೊ ಎಲಿಫೆಂಟ್ ಕನ್ಸರ್ವೇಶನ್' ಮತ್ತು ಭಾರತದ ಗುಜರಾತ್ ಮೂಲದ ಜಾಗತಿಕ ವನ್ಯಜೀವಿ ಸಂರಕ್ಷಣಾ ಸಂಸ್ಥೆಯಾದ 'ವಂತರಾ' ಇಂದು ಮಹತ್ವದ ಜಂಟಿ ಕಾರ್ಯಕ್ರಮವನ್ನು ಘೋಷಿಸಿವೆ. ಉಭಯ ಸಂಸ್ಥೆಗಳ ನಡುವೆ ಅಧಿಕೃತವಾಗಿ ಒಡಂಬಡಿಕೆ (ಎಂಒಯು ) ಸಹಿ ಹಾಕಲಾಗಿದೆ.
ಲಾವೋಸ್ನ ಆನೆಗಳ ಪ್ರಸ್ತುತ ಸ್ಥಿತಿಗತಿ:
ಒಂದು ಕಾಲದಲ್ಲಿ "ಒಂದು ಮಿಲಿಯನ್ ಆನೆಗಳ ಭೂಮಿ" ಎಂದೇ ಖ್ಯಾತಿ ಪಡೆದಿದ್ದ ಲಾವೋಸ್ನಲ್ಲಿ, ಪ್ರಸ್ತುತ ಅಂದಾಜು 400 ಕಾಡು ಆನೆಗಳು ಮತ್ತು 400ಕ್ಕೂ ಹೆಚ್ಚು ಸಾಕು ಆನೆಗಳು ಮಾತ್ರ ಉಳಿದಿವೆ. ಈ ಎರಡೂ ಗುಂಪುಗಳ ಸಂಖ್ಯೆ ನಿರಂತರವಾಗಿ ಕುಸಿಯುತ್ತಿದ್ದು, ಕಾಡಾನೆಗಳ ಆವಾಸಸ್ಥಾನ ನಾಶ, ಮಾನವ-ಆನೆ ಸಂಘರ್ಷ ಹಾಗೂ ಬೇಟೆಯಾಡುವಿಕೆಯಿಂದ ಬಳಲುತ್ತಿದ್ದರೆ; ಸಾಕು ಆನೆಗಳು ಮರ ಕಡಿಯುವ ಕೆಲಸ ಮತ್ತು ಪ್ರವಾಸೋದ್ಯಮದಲ್ಲಿ ತೊಡಗಿ ಸೂಕ್ತ ವೈದ್ಯಕೀಯ ಸೌಲಭ್ಯಗಳಿಂದ ವಂಚಿತವಾಗಿವೆ. ಲಾವೋಸ್ನಲ್ಲಿ ಪ್ರತಿ 1 ರಿಂದ 2 ಆನೆಗಳು ಜನಿಸಿದರೆ, ಸುಮಾರು 10 ಆನೆಗಳು ಸಾವನ್ನಪ್ಪುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.
ರಾಷ್ಟ್ರೀಯ ತುರ್ತು ಸ್ಪಂದನಾ ತಂಡ ಮತ್ತು ಮೊಬೈಲ್ ಘಟಕ:
ಈ ಬಿಕ್ಕಟ್ಟಿಗೆ ತಕ್ಷಣ ಸ್ಪಂದಿಸುವ ಸಲುವಾಗಿ, ಲಾವೋಸ್ ಸರ್ಕಾರದ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಲುವಾಂಗ್ ಪ್ರಬಾಂಗ್ನ ಮಂಡಲಾವೊ ಸಂರಕ್ಷಣಾ ಕೇಂದ್ರದಲ್ಲಿ 'ಎಲಿಫೆಂಟ್ ರಾಪಿಡ್ ರೆಸ್ಪಾನ್ಸ್ ಟೀಮ್' ಅನ್ನು ಲೋಕಾರ್ಪಣೆಗೊಳಿಸಲಾಗಿದೆ.
ವಂತರಾ ಸಂಸ್ಥೆಯು ಅತ್ಯಾಧುನಿಕ ಉಪಕರಣಗಳನ್ನು ಹೊಂದಿರುವ ಮೊಬೈಲ್ ಎಲಿಫೆಂಟ್ ವೆಟರ್ನರಿ ಯೂನಿಟ್ (ಸಂಚಾರಿ ಪಶುವೈದ್ಯಕೀಯ ಘಟಕ) ಅನ್ನು ಒದಗಿಸಿದ್ದು, ಇದು ದೇಶದ ಯಾವುದೇ ಭಾಗದಲ್ಲಿರುವ ಅನಾರೋಗ್ಯಕ್ಕೀಡಾದ ಅಥವಾ ಗಾಯಗೊಂಡ ಕಾಡು ಹಾಗೂ ಸಾಕು ಆನೆಗಳಿಗೆ ತುರ್ತು ಚಿಕಿತ್ಸೆ ನೀಡಲಿದೆ. ಇದರೊಂದಿಗೆ ತುರ್ತು ಚಿಕಿತ್ಸೆ, ದೀರ್ಘಕಾಲೀನ ಆರೈಕೆ ಮತ್ತು ಪುನರ್ವಸತಿಗಾಗಿ ವಿಶೇಷ ಆಸ್ಪತ್ರೆಯೊಂದನ್ನು ಸಹ ಸ್ಥಾಪಿಸಲಾಗುತ್ತಿದೆ.
43 ವರ್ಷದ ಹೆಣ್ಣಾನೆ 'ಮೈ ಖಮ್ನಾಯ್' ರಕ್ಷಣೆ:
ಈ ಕಾರ್ಯಕ್ರಮದ ಆರಂಭದ ದಿನವೇ ಜೀವಮಾನವೆಲ್ಲಾ ಮರ ಕಡಿಯುವ ಕಠಿಣ ಕೆಲಸ ಮಾಡಿ ನರಳುತ್ತಿದ್ದ 43 ವರ್ಷದ 'ಮೈ ಖಮ್ನಾಯ್' ಎಂಬ ಹೆಣ್ಣಾನೆಯನ್ನು ರಕ್ಷಿಸಲಾಗಿದೆ. ಈ ಆನೆಗೆ ಮಂಡಲಾವೊ ಕೇಂದ್ರದಲ್ಲಿ ಸುರಕ್ಷಿತ ನಿವೃತ್ತಿ ಜೀವನ, ಪೌಷ್ಟಿಕ ಆಹಾರ ಹಾಗೂ ಇAತಹದೇ ಇತರ ಆನೆಗಳೊಂದಿಗೆ ಮುಕ್ತವಾಗಿ ಬೆರೆಯುವ ಅವಕಾಶ ಕಲ್ಪಿಸಲಾಗಿದೆ.
ಪಶುವೈದ್ಯಕೀಯ ಸಾಮರ್ಥ್ಯ ವರ್ಧನೆ:
ಉದ್ಘಾಟನೆಯ ಭಾಗವಾಗಿ, ವಂತರಾ ಮತ್ತು ಮಂಡಲಾವೊದ ಪಶುವೈದ್ಯರ ತಂಡವು 12 ಆನೆಗಳಿಗೆ ಬೃಹತ್ ಆರೋಗ್ಯ ಶಿಬಿರ ನಡೆಸಿ ಸಮಗ್ರ ತಪಾಸಣೆ ನಡೆಸಿದೆ. ಜೊತೆಗೆ ಸ್ಥಳೀಯ ಪಶುವೈದ್ಯರು ಮತ್ತು ಆನೆಗಳ ಪಾಲಕರಿಗೆ ವಿಶೇಷ ತರಬೇತಿ ನೀಡುವ ಮೂಲಕ ಲಾವೋಸ್ನಲ್ಲಿ ದೀರ್ಘಕಾಲೀನ ಪ್ರಾಣಿ ಸಂರಕ್ಷಣಾ ಸಾಮರ್ಥ್ಯವನ್ನು ವೃದ್ಧಿಸಲಾಗುತ್ತದೆ.
ಈ ಸಂದರ್ಭ ಮಾತನಾಡಿರುವ ಮಂಡಲಾವೋದ ಆನೆ ಪಶು ವೈದ್ಯಕೀಯ ತಜ್ಞ ಡಾ. ಟಿಮ್ ಬೌಟ್ಸ್, "ಈ ತುರ್ತು ಸ್ಪಂದನಾ ತಂಡದ ಸ್ಥಾಪನೆಯು ಲಾವೋಸ್ ಆನೆಗಳ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲು. ಆನೆಗಳ ಮಾಲೀಕರಿಗೆ ಮತ್ತು ಸರ್ಕಾರಿ ಇಲಾಖೆಗಳಿಗೆ ನಾವು ಈ ಸೇವೆಯನ್ನು ಸಂಪೂರ್ಣ ಉಚಿತವಾಗಿ ನೀಡುತ್ತಿದ್ದೇವೆ. ವಂತರಾದ ಸಹಕಾರಕ್ಕೆ ನಮ್ಮ ಧನ್ಯವಾದಗಳು.ʼʼ ಎಂದರು.
ವಂತರಾದ ಅನುಸರಣೆ ಮತ್ತು ಶ್ರದ್ಧೆ ವಿಭಾಗದ ವಿಶೇಷ ನಿರ್ದೇಶಕ ಅಜಿತ್ ಕುಲಕರ್ಣಿ ಮಾತನಾಡಿ, "ಲಾವೋಸ್ನ ಆನೆಗಳ ರಕ್ಷಣೆಗಾಗಿ ಮಂಡಲಾವೊ ಜೊತೆ ಕೈಜೋಡಿಸಿರುವುದಕ್ಕೆ ನಮಗೆ ಹೆಮ್ಮೆಯಿದೆ. ವೈದ್ಯಕೀಯ ಚಿಕಿತ್ಸೆಯ ಜೊತೆಗೆ ಸ್ಥಳೀಯರ ಕೌಶಲ ವೃದ್ಧಿಸುವ ಮೂಲಕ ಲಾವೋಸ್ ಆನೆಗಳ ಭವಿಷ್ಯಕ್ಕೆ ಶಾಶ್ವತ ನೆರವು ನೀಡಲು ನಾವು ಬದ್ಧರಾಗಿದ್ದೇವೆ " ಎಂದರು.