ಹೈದರಾಬಾದ್ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಪ್ರಭಾಸ್ ಅಭಿನಯದ ಫೌಜಿ ಚಿತ್ರದ ಚಿತ್ರೀಕರಣದ ವೇಳೆ ಕೀಟ ಕಚ್ಚಿದ ಶಂಕೆಯಿಂದ ಅಸ್ವಸ್ಥಗೊಂಡ ನಟ ರಾಜೇಶ್ ಶರ್ಮಾ ಅವರನ್ನು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರ ಕುಟುಂಬ ಬುಧವಾರ ತಿಳಿಸಿದೆ.
ಚಿತ್ರೀಕರಣ ಮುಗಿದ ಬಳಿಕ ದಟ್ಟವಾದ ಸಸ್ಯವರ್ಗವಿದ್ದ ಪ್ರದೇಶದಲ್ಲಿ ಸ್ಥಳೀಯ ತಂತ್ರಜ್ಞರೊಂದಿಗೆ ಮಾತನಾಡುತ್ತಿದ್ದ ವೇಳೆ ರಾಜೇಶ್ ಶರ್ಮಾ ಅವರಿಗೆ ಯಾವುದೋ ಕೀಟ ಕಚ್ಚಿದ ಅನುಭವವಾಗಿದೆ.
ಆರಂಭದಲ್ಲಿ ಅಸ್ವಸ್ಥತೆ ತೀವ್ರವಾಗಿರಲಿಲ್ಲದ ಕಾರಣ ಅವರು ತಕ್ಷಣ ಚಿಕಿತ್ಸೆ ಪಡೆಯಲಿಲ್ಲ. ಆದರೆ ಸುಮಾರು ಆರು ಗಂಟೆಗಳ ನಂತರ ಅವರ ಬಲ ಕಾಲಿನಲ್ಲಿ ತೀವ್ರ ನೋವು ಕಾಣಿಸಿಕೊಂಡಿದ್ದು, ಆರೋಗ್ಯ ಸ್ಥಿತಿ ಕ್ರಮೇಣ ಹದಗೆಡತೊಡಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.ರೋಗಲಕ್ಷಣಗಳ ನಡುವೆಯೂ ಅವರು ವಿಮಾನದ ಮೂಲಕ ಕೋಲ್ಕತ್ತಾಗೆ ಪ್ರಯಾಣಿಸಿದ್ದು, ಪ್ರಯಾಣದ ವೇಳೆ ಅವರಿಗೆ ತೀವ್ರ ಜ್ವರ ಕಾಣಿಸಿಕೊಂಡಿದೆ. ಮರುದಿನವಾದ ಮಂಗಳವಾರ ಅವರನ್ನು ಧಾಕುರಿಯಾದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರ ನಿಗಾದಲ್ಲಿ ಚಿಕಿತ್ಸೆ ಮುಂದುವರಿದಿದೆ.
ಪ್ರಸ್ತುತ ರಾಜೇಶ್ ಶರ್ಮಾ ಅವರು ತೀವ್ರ ಜ್ವರ, ಉಸಿರಾಟದ ತೊಂದರೆ ಹಾಗೂ ಬಲ ಕಾಲಿನಲ್ಲಿ ವೇಗವಾಗಿ ಹರಡುತ್ತಿರುವ ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ಕುಟುಂಬ ತಿಳಿಸಿದೆ. ಸೋಂಕು ಕಾಲಿನ ಬೆರಳುಗಳಿಂದ ಮೊಣಕಾಲಿನವರೆಗೆ ವ್ಯಾಪಿಸಿದ್ದು, ಸೋಂಕಿತ ಭಾಗದಲ್ಲಿ ದೊಡ್ಡ ದೊಡ್ಡ ಗುಳ್ಳೆಗಳು (ಬ್ಲಿಸ್ಟರ್ಗಳು) ಕಾಣಿಸಿಕೊಂಡಿವೆ ಎಂದು ಮಾಹಿತಿ ನೀಡಲಾಗಿದೆ.
ಸೋಂಕು ವ್ಯಾಪಿಸಿದ ಹಿನ್ನೆಲೆ ನಟ ರಾಜೇಶ್ ಶರ್ಮಾ ತೀವ್ರ ನಿಗಾದಲ್ಲಿ
ಕುಟುಂಬ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ಸೋಂಕು ಅವರ ಕಾಲಿನ ಬೆರಳುಗಳಿಂದ ಮೊಣಕಾಲಿನವರೆಗೆ ವ್ಯಾಪಿಸಿದ್ದು, ಸೋಂಕಿತ ಭಾಗದಲ್ಲಿ ದೊಡ್ಡ ದೊಡ್ಡ ಗುಳ್ಳೆಗಳು ಮೂಡಿವೆ.”ರಾಜೇಶ್ ಶರ್ಮಾ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಈಗಲೇ ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬರುವುದು ಸಾಧ್ಯವಿಲ್ಲ. ಅವರು ಇನ್ನೂ ವೈದ್ಯರ ತೀವ್ರ ನಿಗಾದಲ್ಲಿದ್ದು, ಅಪಾಯದಿಂದ ಸಂಪೂರ್ಣವಾಗಿ ಪಾರಾಗಿಲ್ಲ” ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ. ಅವಿಜಿತ್ ಭಟ್ಟಾಚಾರ್ಯ ತಿಳಿಸಿದ್ದಾರೆ.
ಇದಲ್ಲದೆ, ಸೋಂಕಿನಿಂದ ಉಂಟಾಗುವ ತೊಂದರೆಗಳು ರಕ್ತ ಹೆಪ್ಪುಗಟ್ಟುವಿಕೆ (Blood Clot)ಗೆ ಕಾರಣವಾಗುವ ಸಾಧ್ಯತೆ ಇದೆ. ಆ ರಕ್ತ ಹೆಪ್ಪುಗಟ್ಟುವಿಕೆ ಶ್ವಾಸಕೋಶಕ್ಕೆ ತಲುಪಿದರೆ ಅದು ಜೀವಕ್ಕೆ ಅಪಾಯಕಾರಿಯಾಗಬಹುದು ಎಂಬ ಆತಂಕವಿದ್ದು, ವೈದ್ಯರು ಅವರ ಆರೋಗ್ಯವನ್ನು ನಿರಂತರವಾಗಿ ಸೂಕ್ಷ್ಮವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಗುರುವಾರ ವೈದ್ಯರಿಂದ ಆರೋಗ್ಯದ ಬಗ್ಗೆ ಅಧಿಕೃತ ಮಾಹಿತಿ ನಿರೀಕ್ಷೆ
ಆಸ್ಪತ್ರೆಯ ವೈದ್ಯರ ತಂಡವು ರಾಜೇಶ್ ಶರ್ಮಾ ಅವರ ಆರೋಗ್ಯ ಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸುತ್ತಿದ್ದು, ಅಗತ್ಯ ಪರೀಕ್ಷೆಗಳು ಮತ್ತು ಚಿಕಿತ್ಸೆಯನ್ನು ಮುಂದುವರಿಸಿದೆ. ವೈದ್ಯಕೀಯ ಮೌಲ್ಯಮಾಪನದ ಬಳಿಕ ಗುರುವಾರ ಅವರ ಆರೋಗ್ಯದ ಕುರಿತು ಅಧಿಕೃತ ಮಾಹಿತಿ ನೀಡುವ ಸಾಧ್ಯತೆ ಇದೆ.
ಕುಟುಂಬದ ಪ್ರಕಟಣೆಯಲ್ಲಿ, “ರಾಜೇಶ್ ಶರ್ಮಾ ಅವರಿಗಾಗಿ ಪ್ರಾರ್ಥಿಸಿದ, ಪ್ರೀತಿ ಹಾಗೂ ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ನಾವು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇವೆ. ವಿಶೇಷವಾಗಿ ಮಾಧ್ಯಮಗಳು, ಬೆಂಗಾಲ್ ಮೋಶನ್ ಪಿಕ್ಚರ್ಸ್ ಆರ್ಟಿಸ್ಟ್ಸ್ ಫೋರಂ, ರಾಜೇಶ್ ಅವರ ಸ್ನೇಹಿತರು ಹಾಗೂ ಹಿತೈಷಿಗಳು, ಮತ್ತು ಈ ಕಷ್ಟದ ಸಮಯದಲ್ಲಿ ನಿರಂತರವಾಗಿ ಮಾರ್ಗದರ್ಶನ ಹಾಗೂ ಬೆಂಬಲ ನೀಡಿದ ನಟ ಪ್ರೊಸೆಂಜಿತ್ ಚಟರ್ಜಿ ಅವರಿಗೆ ವಿಶೇಷ ಕೃತಜ್ಞತೆಗಳು. ರಾಜೇಶ್ ಶರ್ಮಾ ಅವರ ತಾಯಿ ಹಾಗೂ ಇಡೀ ಕುಟುಂಬದ ಪರವಾಗಿ ನಮ್ಮೊಂದಿಗಿದ್ದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇವೆ” ಎಂದು ತಿಳಿಸಲಾಗಿದೆ.
ಪ್ರಸ್ತುತ ನಟ ಪ್ರಭಾಸ್, ನಿರ್ದೇಶಕ ಹನು ರಾಘವಪುಡಿ ಅವರ ‘ಫೌಜಿ’ ಹಾಗೂ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರ ‘ಸ್ಪಿರಿಟ್’ ಚಿತ್ರಗಳ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ರಾಜೇಶ್ ಶರ್ಮಾಗೆ ಕೀಟ ಕಚ್ಚಿದ ಘಟನೆ ಈ ಎರಡು ಚಿತ್ರಗಳಲ್ಲಿ ಯಾವ ಚಿತ್ರದ ಸೆಟ್ನಲ್ಲಿ ನಡೆದಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ರಾಜೇಶ್ ಶರ್ಮಾ ಇತ್ತೀಚೆಗೆ ‘ಭೂತ್ ಬಂಗ್ಲಾ’ ಹಾಗೂ ‘ಕೃಷ್ಣಾವತಾರಂ ಪಾರ್ಟ್ 1: ದ ಹಾರ್ಟ್ (ಹೃದಯಂ)’ ಚಿತ್ರಗಳಲ್ಲಿ ಅಭಿನಯಿಸಿದ್ದರು.