ಭಾರತೀಯ ರೈಲ್ವೆ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲು ನಿರ್ಮಾಣವಾಗಿದ್ದು, ದೇಶದ ಮೊದಲ ಹೈಡ್ರೋಜನ್ ರೈಲು ಇಂದು ಹಳಿಗೆ ಇಳಿದಿದೆ. ಹೌದು. ಈ ಅತ್ಯಾಧುನಿಕ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಹರಿಯಾಣದ ಜಿಂದ್ ರೈಲು ನಿಲ್ದಾಣದಲ್ಲಿ ಚಾಲನೆ ನೀಡಿದ್ದಾರೆ.
ಈ ಯೋಜನೆಯೊಂದಿಗೆ ಹೈಡ್ರೋಜನ್ ರೈಲುಗಳನ್ನು ಯಶಸ್ವಿಯಾಗಿ ಸಂಚರಿಸುತ್ತಿರುವ ಕೆಲವೇ ದೇಶಗಳ ಪಟ್ಟಿಗೆ ಭಾರತವೂ ಸೇರ್ಪಡೆಗಿದೆ. ಈ ರೈಲಿನ ವಿಶೇಷತೆ ಎಂದರೆ ಇದಕ್ಕೆ ಡೀಸೆಲ್ ಅಗತ್ಯವಿಲ್ಲ, ಮೇಲಿನ ವಿದ್ಯುತ್ ತಂತಿಗಳ ಅವಶ್ಯಕತೆಯೂ ಇಲ್ಲ. ಹೈಡ್ರೋಜನ್ ಇಂಧನದಿಂದ ಸಂಚರಿಸುವ ಈ ರೈಲು ಪರಿಸರಕ್ಕೆ ಹಾನಿಕಾರಕ ಹೊಗೆಯನ್ನು ಹೊರಸೂಸದೆ, ಕೇವಲ ನೀರಿನ ಆವಿ ಮತ್ತು ಅಲ್ಪ ಪ್ರಮಾಣದ ಉಷ್ಣ ಮಾತ್ರ ಹೊರಬಿಡುತ್ತದೆ.
ಹೈಡ್ರೋಜನ್ ರೈಲು ಹೇಗೆ ಕಾರ್ಯನಿರ್ವಹಿಸುತ್ತದೆ?
ಸಾಮಾನ್ಯ ವಿದ್ಯುತ್ ರೈಲುಗಳು ಮೇಲಿನ ಓವರ್ಹೆಡ್ ವಿದ್ಯುತ್ ಲೈನ್ಗಳಿಂದ ವಿದ್ಯುತ್ ಪಡೆಯುತ್ತವೆ. ಆದರೆ ಹೈಡ್ರೋಜನ್ ರೈಲು ತನ್ನೊಳಗೇ ವಿದ್ಯುತ್ ಉತ್ಪಾದಿಸಿಕೊಳ್ಳುತ್ತದೆ.ರೈಲಿನಲ್ಲಿರುವ ಫ್ಯುಯೆಲ್ ಸೆಲ್ಗಳಲ್ಲಿ ಹೈಡ್ರೋಜನ್ ಮತ್ತು ವಾತಾವರಣದಲ್ಲಿರುವ ಆಮ್ಲಜನಕದ ನಡುವೆ ರಾಸಾಯನಿಕ ಕ್ರಿಯೆ ನಡೆಯುತ್ತದೆ. ಈ ಕ್ರಿಯೆಯಿಂದ ನೇರವಾಗಿ ವಿದ್ಯುತ್ ಉತ್ಪತ್ತಿಯಾಗಿ ರೈಲಿನ ಮೋಟಾರ್ಗಳಿಗೆ ಶಕ್ತಿ ಒದಗಿಸುತ್ತದೆ. ಇದು ಹಳೆಯ ಸ್ಟೀಮ್ ಎಂಜಿನ್ನ ತತ್ವವನ್ನು ಹೋಲುತ್ತಿದ್ದರೂ, ಕಲ್ಲಿದ್ದಲು ಅಥವಾ ಡೀಸೆಲ್ ಬಳಕೆ ಇಲ್ಲದೆ ಸಂಪೂರ್ಣ ಹಸಿರು ಶಕ್ತಿಯಿಂದ ಕಾರ್ಯನಿರ್ವಹಿಸುತ್ತದೆ.
ಸುರಕ್ಷತೆಗೆ ವಿಶೇಷ ವ್ಯವಸ್ಥೆ
ಈ ರೈಲಿನಲ್ಲಿ ಅತ್ಯಾಧುನಿಕ ಬಹುಹಂತದ ಸುರಕ್ಷತಾ ವ್ಯವಸ್ಥೆ ಅಳವಡಿಸಲಾಗಿದೆ. ಹೈಡ್ರೋಜನ್ ಸೋರಿಕೆ, ಬೆಂಕಿ ಅಥವಾ ಹೊಗೆ ಉಂಟಾದರೆ ತಕ್ಷಣ ಪತ್ತೆಹಚ್ಚುವ ವ್ಯವಸ್ಥೆ ಇದರಲ್ಲಿ ಇದೆ.
ಮಾರ್ಗ ಮತ್ತು ವೇಳಾಪಟ್ಟಿ
ಭಾರತದ ಮೊದಲ ಹೈಡ್ರೋಜನ್ ರೈಲು (ರೈಲು ಸಂಖ್ಯೆ 74010) ಜಿಂದ್ ರೈಲು ನಿಲ್ದಾಣದಿಂದ ಬೆಳಿಗ್ಗೆ 7.40ಕ್ಕೆ ಹೊರಟು 9.40ಕ್ಕೆ ಸೋನಿಪತ್ ತಲುಪಲಿದೆ.
ಹಿಂತಿರುಗುವ ರೈಲು (ಸಂಖ್ಯೆ 74009) ಸೋನಿಪತ್ನಿಂದ ಬೆಳಿಗ್ಗೆ 10.40ಕ್ಕೆ ಹೊರಟು ಮಧ್ಯಾಹ್ನ 1.00ಕ್ಕೆ ಜಿಂದ್ ತಲುಪಲಿದೆ.89 ಕಿಲೋಮೀಟರ್ ದೂರದ ಈ ಮಾರ್ಗದಲ್ಲಿ ಜಿಂದ್ ಸಿಟಿ, ಪಾಂಡು ಪಿಂಡಾರಾ, ಲಲಿತ್ ಖೇರಾ, ಭಂಬೇವಾ, ಇಶಾಪುರ್ ಖೇರಿ, ಬುಟಾನಾ, ಖಾಂಡ್ರಾಯ್, ಗೊಹಾನಾ, ರಾಥ್ರಾ, ಲಾಥ್, ಮೋಹನಾ ಹರಿಯಾಣಾ ಹಾಗೂ ಬರ್ವಾಸ್ನಿ ಸೇರಿ 12 ನಿಲ್ದಾಣಗಳಲ್ಲಿ ರೈಲು ನಿಲುಗಡೆ ಮಾಡಲಿದೆ.
ಪ್ರಯಾಣಿಕರ ಸಾಮರ್ಥ್ಯ ಮತ್ತು ವೇಗ
• ದಿನಕ್ಕೆ ಎರಡು ರೌಂಡ್ ಟ್ರಿಪ್ಗಳು
• ಒಟ್ಟು 356 ಕಿ.ಮೀ. ಸಂಚಾರ
• 10 ಬೋಗಿಗಳು
• 682 ಆಸನಗಳು
• ಒಟ್ಟಾರೆ ಸುಮಾರು 2,600 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯ
• ಪರೀಕ್ಷಾ ಹಂತದಲ್ಲಿ ಗಂಟೆಗೆ 120 ಕಿ.ಮೀ. ವೇಗ ಸಾಧಿಸಿದ್ದರೂ, ನಿಯಮಿತ ಸೇವೆಯಲ್ಲಿ ಗರಿಷ್ಠ 75 ಕಿ.ಮೀ. ವೇಗದಲ್ಲಿ ಸಂಚರಿಸಲಿದೆ.
ಸಂಪೂರ್ಣ ದೇಶೀಯ ತಂತ್ರಜ್ಞಾನ
ಈ ರೈಲನ್ನು ಸಂಪೂರ್ಣವಾಗಿ ಭಾರತದಲ್ಲೇ ವಿನ್ಯಾಸಗೊಳಿಸಿ, ಭಾರತೀಯ ತಂತ್ರಜ್ಞಾನದಿಂದ ಅಭಿವೃದ್ಧಿಪಡಿಸಲಾಗಿದೆ.ಜಿಂದ್ ಯೋಜನೆಯಲ್ಲಿ ಮೇಥಾ ಮತ್ತು Green H2B2 ಕಂಪನಿಗಳು ಹೈಡ್ರೋಜನ್ ಫ್ಯುಯೆಲ್ ಸೆಲ್ ರೈಲು ಹಾಗೂ ಎಲೆಕ್ಟ್ರೋಲೈಸರ್ಗಳನ್ನು ಒದಗಿಸಿವೆ. ಫ್ಲೂಯಿಟ್ರಾನ್ ಕಂಪನಿ ಹೈಡ್ರೋಜನ್ ರೀಫ್ಯೂಯೆಲಿಂಗ್ ಕೇಂದ್ರವನ್ನು ನಿರ್ಮಿಸಿದೆ.
ಈ ಘಟಕಕ್ಕೆ ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆ (PESO) ಅನುಮೋದನೆ ನೀಡಿದೆ. ಇಲ್ಲಿ ಉತ್ಪಾದಿಸುವ ಹೈಡ್ರೋಜನ್ ಅನ್ನು ವಿಶೇಷ ರೀಫ್ಯೂಯೆಲಿಂಗ್ ವ್ಯವಸ್ಥೆಯ ಮೂಲಕ ರೈಲಿನ ಎಂಜಿನ್ಗೆ ತುಂಬಲಾಗುತ್ತದೆ.ಮುಂದಿನ ದಿನಗಳಲ್ಲಿ ಡಾರ್ಜಿಲಿಂಗ್, ಕಾಲ್ಕಾ-ಶಿಮ್ಲಾ ಹಾಗೂ ನೀಲಗಿರಿ ಸೇರಿದಂತೆ ಹೆರಿಟೇಜ್ ರೈಲು ಮಾರ್ಗಗಳಲ್ಲೂ ಇದೇ ರೀತಿಯ ಹೈಡ್ರೋಜನ್ ರೈಲು ವ್ಯವಸ್ಥೆಯನ್ನು ಜಾರಿಗೆ ತರುವ ಯೋಜನೆ ಇದೆ.
ಮೋದಿ ಅವರಿಂದ ₹14,700 ಕೋಟಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ
ಜಿಂದ್ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಹೈಡ್ರೋಜನ್ ರೈಲಿಗೆ ಮಾತ್ರವಲ್ಲದೆ, ಸುಮಾರು ₹14,700 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.ಇದರಲ್ಲೇ ₹12,470 ಕೋಟಿ ಮೌಲ್ಯದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಸೇರಿವೆ. ಪ್ರಮುಖವಾಗಿ 157.92 ಕಿ.ಮೀ ಉದ್ದದ ದೆಹಲಿ–ಅಮೃತಸರ–ಕತ್ರಾ ಎಕ್ಸ್ಪ್ರೆಸ್ವೇ ಉದ್ಘಾಟನೆಯಾಗಲಿದೆ. ಇದರ ಮೂಲಕ ದೆಹಲಿಯಿಂದ ಕತ್ರಾಕ್ಕೆ ಪ್ರಯಾಣದ ಅವಧಿ 14 ಗಂಟೆಯಿಂದ 6 ಗಂಟೆಗೆ, ದೆಹಲಿಯಿಂದ ಅಮೃತಸರಕ್ಕೆ 8 ಗಂಟೆಯಿಂದ 4 ಗಂಟೆಗೆ ಇಳಿಯಲಿದೆ.
ಇದರ ಜೊತೆಗೆ ಅಂಬಾಲಾ–ಕಾಲಾ ಅಂಬ್ ಹೆದ್ದಾರಿ, ಜಿಂದ್–ಗೊಹಾನಾ ಗ್ರೀನ್ಫೀಲ್ಡ್ ಹೆದ್ದಾರಿ, ಕುರುಕ್ಷೇತ್ರದ ಎಲಿವೇಟೆಡ್ ರೈಲು ಮಾರ್ಗ, ಭಿವಾನಿಯ ಪಂಡಿತ್ ನೆಕಿ ರಾಮ್ ಶರ್ಮಾ ವೈದ್ಯಕೀಯ ಕಾಲೇಜು, ನಾರ್ನೌಲ್ನ ಮಹರ್ಷಿ ಚ್ಯವನ ವೈದ್ಯಕೀಯ ಕಾಲೇಜು ಸೇರಿದಂತೆ ಹಲವು ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.
ಕುರುಕ್ಷೇತ್ರದಲ್ಲಿ ಸಿಖ್ ಮ್ಯೂಸಿಯಂ ನಿರ್ಮಾಣಕ್ಕೂ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಬಳಿಕ ಪ್ರಧಾನಿ ಮೋದಿ ಅವರು ಚಂಡೀಗಢ ಮತ್ತು ಪಂಜಾಬಿನ ಜಲಂಧರ್ ಪ್ರವಾಸ ಕೈಗೊಂಡು ಇನ್ನೂ ಹಲವು ಸಾವಿರ ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.